ಕಬ್ಬು ಬೆಳೆದು ಕಾರ್ಖಾನೆಗೆ ಹಾಕಿದ ರೈತರು; ತಿಂಗಳು ಕಳೆದರೂ ಅನ್ನದಾತನ ಕೈ ಸೇರಿಲ್ಲ, ಕಾರ್ಖಾನೆಯಿಂದ ಬರಬೇಕಾದ ಹಣ

ಬೀದರ್: ಜಿಲ್ಲೆಯಲ್ಲಿರುವ 2 Sugar Factory ಗಳಿಂದ ಪ್ರಸಕ್ತ ಹಂಗಾಮು ವರ್ಷದಲ್ಲಿ ರೈತರ ಕೈಗೆ ಸೇರಬೇಕಾದ 7.36 ಕೋಟಿ ರೂಪಾಯಿ ಹಣ ಕೈ ಸೇರಿಲ್ಲ. ಕೆಲವೂಂದು ಕಾರ್ಖಾನೆಯ ಮಾಲೀಕರು ಕೆಲವು ರೈತರಿಗೆ ಇಂತಿಷ್ಟೂ ಹಣವನ್ನ ಹಾಕಿ ಸುಮ್ಮನಿದ್ದರೇ, ಇನ್ನೂ ಕೆಲವೂ ರೈತರಿಗೆ ಹಣ ಬಾರದೇ ಇರುವುದರಿಂದ ಸಾಲ ಮಾಡಿಯೇ ಜೀವನ ನಡೆಸಬೇಕಾದ ಸ್ಥಿತಿ ನಿರ್ಮಾಣವಾಗಿದೆ. ಸಾಲ ಸೋಲ ಮಾಡಿ ಬೆಳೆದ ಕಬ್ಬನ್ನ ಮಾರಾಟ ಮಾಡಿದರೇ, ಮಾಲೀಕರು ಮಾತ್ರ ಅದರ ಹಣವನ್ನ ರೈತರಿಗೆ ಕೊಡುತ್ತಿಲ್ಲ. ಹೀಗಾಗಿ ರೈತರು ಕಬ್ಬಿನ ಸಾಲ ಮಾಡಿಕೊಂಡು ಹೊಟ್ಟೆ ತುಂಬಿಸಿಕೊಳ್ಳುತ್ತಿದ್ದಾರೆ.

ಕ್ರಷಿಂಗ್ ಮುಗಿದು ಮೂರುವರೆ ತಿಂಗಳಾದರೂ ಹಣ ಬಾಕಿ ಉಳಿಸಿಕೊಂಡ ಮಾಲೀಕರು

ಇನ್ನು ಬೀದರ್ ತಾಲೂಕಿನ ಮೊಗದಾಳ ಬಳಿಯ ಕಿಸಾನ್ ಸಕ್ಕರೆ ಕಾರ್ಖಾನೆ ಮತ್ತು ಭಾಲ್ಕಿ ತಾಲೂಕಿನ ಬಾಜೋಳಗಾ ಗ್ರಾಮದ ಬಳಿಯ ಭಾಲ್ಕೇಶ್ವರ ಶುಗರ್ಸ್, ಈ ಎರಡು ಸಕ್ಕರೆ ಕಾರ್ಖಾನೆಗಳು ಕ್ರಷಿಂಗ್ ಮುಗಿದು ಮೂರುವರೆ ತಿಂಗಳಾದರೂ ಕೂಡ, ರೈತರಿಗೆ ಕೊಡಬೇಕಾದ ಸುಮಾರು 7.36 ಕೋಟಿಯಷ್ಟು ಹಣವನ್ನ ಭಾಕಿ ಇಟ್ಟುಕೊಂಡಿದೆ. ಇಂದು ಕೊಡುತ್ತೇನೆ, ನಾಳೆ ಕೊಡುತ್ತೇನೆಂದು ರೈತರಿಗೆ ಸುಳ್ಳು ಭರವಸೆಯನ್ನ ಕೊಟ್ಟು ದಿನದೂಡುತ್ತಿವೆ.

ಕಾರ್ಖಾನೆಗೆ ಕಬ್ಬು ಹಾಕಿದ ಎರಡು ವಾರದೊಳಗಡೆ ಹಣ ಪಾವತಿ ನಿಯಮ

ಯಾವುದೇ ಸಕ್ಕರೆ ಕಾರ್ಖಾನೆಗೆ ರೈತರು ಕಬ್ಬು ಹಾಕಿದರೆ, ಎರಡು ವಾರದಲ್ಲಿ ರೈತರಿಗೆ ಕೊಡಬೇಕಾದ ಹಣವನ್ನ ಪಾವತಿ ಮಾಡಬೇಕೆನ್ನುವ ನಿಯಮವಿದೆ. ಆದರೆ, ಮೂರುವರೆ ತಿಂಗಳು ಕಳೆದರೂ ಕೂಡ ರೈತರಿಗೆ ಕೊಡಬೇಕಾದ ಹಣ ಕೊಡುತ್ತಿಲ್ಲ. ಈಗ ರೈತರು ಬಿತ್ತನೆ ಮಾಡುತ್ತಿದ್ದಾರೆ. ಅವರಿಗೆ ಬಿತ್ತನೆ ಬೀಜ ರಸಗೊಬ್ಬರ ಕೊಳ್ಳಲು ಹಣವಿಲ್ಲ. ಹೀಗಾಗಿ ಬೇಗ ರೈತರಿಗೆ ಕೊಡಬೇಕಾದ ಹಣವನ್ನ ಎರಡು ದಿನದಲ್ಲಿ ಕೊಡದೆ ಹೋದರೆ ಪ್ರತಿಭಟನೆ ಮಾಡುವ ಎಚ್ಚರಿಕೆಯನ್ನ ರೈತರ ಮುಂಖಡರಾದ ದಯಾನಂದ ಸ್ವಾಮಿಯವರು ಕೊಟ್ಟಿದ್ದಾರೆ.

ರೈತರಿಗೆ ಕೊಡಬೇಕಾದ ಬಾಕಿ ಉಳಿಸಿಕೊಂಡ ಕಾರ್ಖಾನೆ

ಪ್ರಸಕ್ತ ಹಂಗಾಮಿನಲ್ಲಿ ಬೀದರ್ ಕಿಸಾನ್ ಸಕ್ಕರೆ ಕಾರ್ಖಾನೆ 6052 ರೈತರಿಂದ 4.32 ಲಕ್ಷ ಟನ್ ಕಬ್ಬು ನುರಿಸಿದ್ದು, ಬರೊಬ್ಬರಿ 121.38 ಕೋಟಿ ರೂಪಾಯಿಯನ್ನ ರೈತರಿಗೆ ಕೊಡಬೇಕಾಗಿತ್ತು. ಇಲ್ಲಿಯವರೆಗೆ 116.71 ಕೋಟಿ ರೂಪಾಯಿ ಹಣವನ್ನ ಪಾವತಿಸಿದ್ದು, 4.66 ಕೋಟಿ ರೂಪಾಯಿಯನ್ನ ಬಾಕಿಯಿಟ್ಟುಕೊಂಡಿದೆ. ಇನ್ನೂ ಭಾಲ್ಕೇಶ್ವರ ಸಕ್ಕರೆ ಕಾರ್ಖಾನೆಯೂ 4299 ರೈತರಿಂದ 3.38 ಲಕ್ಷ ಟನ್ ಕಬ್ಬನ್ನ ನುರಿಸಿದ್ದು, 95.56 ಕೋಟಿ ರೂಪಾಯಿಗಳ ಪೈಕಿ ಇಲ್ಲಿಯವರೆಗೂ 92.85 ಕೋಟಿ ರೂಪಾಯಿಯನ್ನ ರೈತರ ಖಾತೆಗೆ ಜಮೆ ಮಾಡಿದೆ. ಆದರೆ, 2.71 ಕೋಟಿ ರೂಪಾಯಿ ಹಣವನ್ನ ಬಾಕಿ ಉಳಿಸಿಕೊಂಡಿದ್ದು, ರೈತರಿಗೆ ಹಣ ಕೊಡಲು ಸತಾಯಿಸುತ್ತಿದ್ದಾರೆ.

ರೈತರ ಬೆನ್ನಿಗೆ ನಿಂತ ಬೀದರ್ ಜಿಲ್ಲಾಧಿಕಾರಿ

ಇನ್ನು ರೈತರ ಬೆನ್ನಿಗೆ ಬೀದರ್ ಜಿಲ್ಲಾಧಿಕಾರಿಗಳು ನಿಂತುಕೊಂಡಿದ್ದು, ಎರಡು ವಾರದೊಳಗಾಗಿ ರೈತರಿಗೆ ಬಾಕಿ ಹಣ ಕೊಡದಿದ್ದರೇ, ತಕ್ಕ ಬೆಲೆ ತೆರಬೇಕಾಗುತ್ತದೆ ಎಂದು ಎಚ್ಚರಿಕೆ ನೀಡಿದ್ದಾರೆ. ಜಿಲ್ಲಾಧಿಕಾರಿಯ ಈ ನಡೆಯಿಂದ ರೈತರು ಖುಷಿ ಪಡುತ್ತಿದ್ದಾರೆ. ಇದರ ಜೊತೆಗೆ ಜಿಲ್ಲಾಡಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕೂಡ ರೈತರಿಗೆ ಕಾರ್ಖಾನೆಗಳಿಂದ ಕಬ್ಬನ ಹಣ ಪಡೆದುಕೊಂಡು, ರೈರಿಗೆ ಹಣ ಪಾವತಿಸುವಂತೆ ಒತ್ತಾಡಹಾಕುತ್ತಿದ್ದರೂ ಕೂಡ ಇನ್ನೂ ರೈತರಿಗೆ ಹಣ ಮಾತ್ರ ಸಂದಾಯ ಮಾಡಲು ಕಾರ್ಖಾನೆಯ ಮಾಲೀಕರು ತಯ್ಯಾರಿಲ್ಲ. ಇದು ಸಹಜವಾಗಿಯೇ ರೈತರ ಆಕ್ರೋಶಕ್ಕೆ ಕಾರಣವಾಗಿದ್ದು, ಶೀಘ್ರದಲ್ಲಿ ರೈತರ ಹಣವನ್ನ ಜಿಲ್ಲಾಢಳಿತ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರು ಕಾಳಜಿವಹಿಸಿ ನಮಗೆ ಸೇರಬೇಕಾದ ಹಣವನ್ನ ಕೊಡಿಸಿ ಎಂದು ಮನವಿ ಮಾಡುತ್ತಿದ್ದಾರೆ.