ಭಟ್ಕಳದ ನೆರೆಹಾವಳಿ ಪ್ರದೇಶಕ್ಕೆ ಭೇಟಿ ನೀಡಿದ ಕೇಂದ್ರ ತಂಡ: ಹಾನಿ ಕುರಿತು ಪರಿಶೀಲನೆ

ಭಟ್ಕಳ: ತಾಲೂಕಿನ ವಿವಿಧೆಡೆ ನೆರೆ ಹಾವಳಿಯಿಂದ ಹಾನಿಯಾದ ಪ್ರದೇಶದ ನಷ್ಟದ ವೀಕ್ಷಣೆಗೆ ಅಂತರ-ಸಚಿವಾಲಯದ ಕೇಂದ್ರ ತಂಡ (Inter-Ministerial Central Team) ಭೇಟಿ ನೀಡಿ ಪರಿಶೀಲನೆ ನಡೆಸಿದರು

ಮೊದಲು ಉಡುಪಿಯಿಂದ ಆಗಮಿಸಿದ ತಂಡ  ಮುಟ್ಟಳ್ಳಿಯಲ್ಲಿ ಮನೆಯ ಮೇಲೆ ಗುಡ್ಡ ಕುಸಿದು ನಾಲ್ವರು ಸಾವನ್ನಪ್ಪಿರುವ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಬಳಿಕ ಅಲ್ಲಿಂದ ರೈಲ್ವೆ ನಿಲ್ದಾಣ ಸಮೀಪದಲ್ಲಿರುವ ರಸ್ತೆ ಕಡಿತಗೊಂಡ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ನಂತರ ಚೌಥನಿ, ಹನಿಫಾಬಾದ್  ಶಾಲೆ ಕಟ್ಟಡ ಕುಸಿದ  ಸ್ಥಳ, ಕಟಗಾರಕ್ಕೊಪ್ಪದಲ್ಲಿ ಬ್ರಿಡ್ಜ್ ಕುಸಿದ ಸ್ಥಳ ಹಾಗೂ ಹೆಗ್ಗದ್ದೆಯಲ್ಲಿ ಗುಡ್ಡ ಕುಸಿದ ಸ್ಥಳಕ್ಕೆ ಭೇಟಿ ನೀಡಿ ನಷ್ಟದ ವಿವರಗಳನ್ನು ಪಡೆದರು.

ಕೇಂದ್ರದಿಂದ ಒಟ್ಟು 7 ಜನರ ತಂಡವನ್ನು ನೆರ ಹಾವಳಿಯ ನಷ್ಟ ಪರಿಶೀಲನೆಗೆ ಕರ್ನಾಟಕ ರಾಜ್ಯಕ್ಕೆ ಕಳುಸಿದೆ. ಅದರಲ್ಲಿ 3 ಜನರ ಒಂದು ತಂಡ ಇಂದು ಭಟ್ಕಳಕ್ಕೆ ಭೇಟಿ ನೀಡಿದೆ. ಈ ತಂಡದಲ್ಲಿ ಆಶಿಶ್, ಮಹೇಶ ಹಾಗೂ ಭವ್ಯ ಪರಿಶೀಲನೆಗೆ ಬಂದಿದ್ದಾರೆ.

ಈ ಸಂದರ್ಭದಲ್ಲಿ ಕೆಂದ್ರದ ತಂಡ ಜಿಲ್ಲಾಧಿಕಾರಿ ಮುಲೈ ಮುಗಿಲನ್, ಸಹಾಯಕ ಆಯುಕ್ತೆ ಮಮತಾ ದೇವಿ ಜಿ.ಎಸ್, ತಹಶಿಲ್ದಾರ್ ಸುಮಂತ ಬಿ ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.