BMTC ಬಸ್​ ಚಾಲಕನಿಗೆ ಚಾಲನೆ ವೇಳೆ ಎದೆ ನೋವು, ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಉಳಿಯಿತು ಪ್ರಾಣ

ಬೆಂಗಳೂರು, ಸೆಪ್ಟೆಂಬರ್​ 20: ಬೆಂಗಳೂರು ನಗರ ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಭಾರಿ ಅನಾಹುತವೊಂದು ತಪ್ಪಿದೆ. ಗುರುವಾರ ಬೆಂಗಳೂರಿನ ಶಾಂತಿನಗರದ ಜೋಡಿ ರಸ್ತೆಯಲ್ಲಿ ಕೆಎ 51 AJ 6905 ನಂಬರ್​ನ ಬಿಎಂಟಿಸಿ ಎಲೆಕ್ಟ್ರಿಕ್ ಬಸ್ ಚಾಲನೆ ಮಾಡುತ್ತಿರುವಾಗಲೇ ಚಾಲಕನಿಗೆ ಎದೆ ನೋವು ಕಾಣಿಸಿಕೊಂಡಿದೆ.

ಎದೆ ನೋವಿನಿಂದ ಬಳಲುತ್ತಿದ್ದ ಚಾಲಕ ವೀರೇಶ್ ಕೂತ ಜಾಗದಲ್ಲೇ ಒಂದು ಕಡೆ ವಾಲಿದ್ದಾರೆ. ಹೀಗಾಗಿ ಬಸ್​ ನಿಧಾನವಾಗಿ ಚಲಿಸುತ್ತಿತ್ತು. ಅದೇ ರಸ್ತೆಯಲ್ಲಿ ಹೋಗುತ್ತಿದ್ದ ಹಲಸೂರು ಸಂಚಾರಿ ಠಾಣೆ ಎಎಸ್ಐ ಆರ್.ರಘುಕುಮಾರ್ ಅನುಮಾನಗೊಂಡು ಬಸ್ ಬಳಿ ಬಂದು ನೋಡಿದಾಗ, ಚಾಲಕ ವಿರೇಶ್​ ಒಂದು ಕಡೆ ವಾಲಿದ್ದನ್ನು ಕಂಡಿದ್ದಾರೆ. ತಕ್ಷಣ ಸಿನಿಮೀಯ ರೀತಿ ಚಲಿಸುತ್ತಿದ್ದ ಬಸ್ ಹತ್ತಿದ್ದಾರೆ. ನಂತರ ಹ್ಯಾಂಡ್ ಬ್ರೇಕ್ ಹಾಕಿ ಬಸ್​ನ್ನು ನಿಲ್ಲಿಸಿದ್ದಾರೆ.

ಬಳಿಕ, ಆ್ಯಂಬುಲೆನ್ಸ್​ಗೂ ಕಾಯದೆ ಅಶೋಕ ನಗರ ಟ್ರಾಫಿಕ್ ಪೊಲೀಸ್​ ಪ್ರಸನ್ನ ಕುಮಾರ್ ಅವರ ಸಹಾಯದಿಂದ ಚಾಲಕ ವೀರೇಶ್​ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಿದರು. ಸಂಚಾರಿ ಪೊಲೀಸರ ಸಮಯ ಪ್ರಜ್ಞೆಯಿಂದ ಪ್ರಯಾಣಿಕರ ಮತ್ತು ಚಾಲಕ ವಿರೇಶ್ ಅವರ ಪ್ರಾಣ ಉಳಿದಿದೆ.​