ಭಟ್ಕಳದಲ್ಲಿ ಯುವಕರಿಗೆ ಅಗ್ನಿಪಥ ಕಿಚ್ಚು ಹಚ್ಚಿಸಿದ ಶಾಸಕ ಸುನೀಲ್ ನಾಯ್ಕ್.!

ಭಟ್ಕಳ: ಅಗ್ನಿಪಥ ದೈಹಿಕ ಪರೀಕ್ಷೆಗೆಂದು ಹಾವೇರಿಗೆ ತೆರಳಿದ 56 ಯುವಕರಿಗೆ ಶಾಸಕ ಸುನೀಲ್ ನಾಯ್ಕ ವೈಯಕ್ತಿಕವಾಗಿ ಬಸ್ ವ್ಯವಸ್ಥೆ ಕಲ್ಪಿಸಿ, ಖುದ್ದು ಸ್ಥಳದಲ್ಲಿ ನಿಂತು ಯುವಕರಿಗೆ ಶುಭ ಹಾರೈಸಿ ಕಳುಹಿಸಿದರು.

ಶಿರಾಲಿಯ ಜನತಾ ವಿದ್ಯಾಲಯದ ಮುಂಭಾಗದಲ್ಲಿ ಯುವಕರಿಗೆ ಬಸ್ ವ್ಯವಸ್ಥೆ ಕಲ್ಪಿಸಲಾಗಿತ್ತು. ನಂತರ ಹಾವೇರಿಗೆ ತೆರಳಲು ಸಿದ್ಧರಾದ ಯುವಕರಿಗೆ ಶಾಸಕ ಸುನೀಲ್ ನಾಯ್ಕ ಖುದ್ದು ಬಸ್ ಇರುವ ಸ್ಥಳಕ್ಕೆ ಬಂದು ಶುಭ ಹಾರೈಸಿದ್ದಾರೆ. ಈ ವೇಳೆ ಯುವಕರು ಶಾಸಕ ಸುನೀಲ್ ನಾಯ್ಕರಿಗೆ ಜಯಘೋಷ ಕೂಗಿದರು.

ಈ ವೇಳೆ ಮಾತನಾಡಿದ ಶಾಸಕ ಸುನೀಲ್ ನಾಯ್ಕ, ದೇಶದ ಯುವಕರೆಲ್ಲ ದೇಶ ಸೇವೆ ಮಾಡಬೇಕೆಂಬ ನರೇಂದ್ರ ಮೋದಿಯವರ ಕನಸಂತೆ ಅಗ್ನಿಪಥ ಯೋಜನೆ ಅಡಿಯಲ್ಲಿ ಭಟ್ಕಳ ಭಾಗದಿಂದ 56 ಯುವಕರು ಹಾವೇರಿಗೆ ಪ್ರಯಾಣ ಬೆಳೆಸುತ್ತಿದ್ದಾರೆ. ಅವರೆಲ್ಲರಿಗೂ ಹೋಗಿ ಬರುವ ಸಂಪೂರ್ಣ ವ್ಯವಸ್ಥೆಯನ್ನು ನೋಡಿಕೊಂಡಿದ್ದೇನೆ. ಜೊತೆಗೆ ನನ್ನ ವಿಧಾನಸಭಾ ಕ್ಷೇತ್ರದಿಂದ ನಾಳೆ ಎಷ್ಟೇ ಯುವಕರು ಹೋಗುವವರಿದ್ದರು ಅವರಿಗೆ ನನ್ನ ಸಹಕಾರ ಇರಲಿದೆ. ಯುವಕರು ಈ ಯೋಜನೆಯ ಉಪಯೋಗ ಪಡೆದುಕೊಂಡು ದೇಶ ಸೇವೆ ಮಾಡಿ ಎಂದು ಶುಭ ಹಾರೈಸಿದರು.

ಈ ಸಂದರ್ಭದಲ್ಲಿ ಶಿರಾಲಿ ಜನತಾ ವಿದ್ಯಾಲಯದ ಪ್ರಾಂಶುಪಾಲರು ರಾಮನಾಥ, ಶಿರಾಲಿ ಪಂ. ಸದಸ್ಯರಾದ ವೆಂಕಟೇಶ ನಾಯ್ಕ, ಶಿರಾಲಿಯ ಮುಖಂಡ ಸಂದೀಪ ನಾಯ್ಕ ಹಾಗೂ ಪ್ರೀತಿ ಸ್ಪೋರ್ಟ್ಸ್ ಕ್ಲಬ್ ಸದಸ್ಯರು ಉಪಸ್ಥಿತರಿದ್ದರು.