ಅನಾಹುತ ಸಂಭವಿಸುವ ಮುನ್ನ ಹೆಸ್ಕಾಂ ಅಧಿಕಾರಿಗಳೇ ಎಚ್ಚೆತ್ತುಕೊಳ್ಳಿ.!

ಸಿದ್ದಾಪುರ: ತಾಲೂಕಿನ ಕಾನಗೋಡು ಗ್ರಾಮ ಪಂಚಾಯಿತಿ ವ್ಯಾಪ್ತಿ ಬಳ್ಳಟ್ಟೆ ಗ್ರಾಮಕ್ಕೆ ಹೋಗುವ ರಸ್ತೆಯಲ್ಲಿ ಕರೆಂಟ್ ಕಂಬದ ಮೇಲೆ ಮರವೊಂದು ಚಾಚಿಕೊಂಡಿರುವುದು ಅಪಾಯ ಉಂಟುಮಾಡಿದೆ. ಕೂಡಲೇ ಮರವನ್ನು ತೆರವುಗೊಳಿಸಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

ವಿದ್ಯುತ್ ಲೈನ್ ಮೇಲೆ ಮರ ಒರಗಿ ಸಾಕಷ್ಟು ದಿನಗಳಾದರೂ ಸಹ ಹೆಸ್ಕಾಂ ಅಧಿಕಾರಿಗಳಾಗಲಿ, ಗ್ರಾಮ ಪಂಚಾಯಿತಿಯಾಗಲಿ ಮರ ತೆರವು ಮಾಡುವ ಕ್ರಮ ತೆಗೆದುಕೊಂಡಿಲ್ಲ. ಏನಾದರೂ ಅನಾಹುತ ಸಂಭವಿಸಿದರೆ ಕೆ.ಇ.ಬಿ ಅಧಿಕಾರಿಗಳು ಮತ್ತು ಆಡಳಿತ ಸಿಬ್ಬಂದಿ ವರ್ಗವೇ ನೇರ ಹೊಣೆ ಹೊರಬೇಕು.

ಇದೇ ರೀತಿ ತಾಲೂಕಿನ ಹಳ್ಳಿಗಳಲ್ಲಿ ವಿದ್ಯುತ್ ಗೆ ಸಂಬಂಧಿಸಿದಂತೆ ಹಲವಾರು ಸಮಸ್ಯೆಗಳಿವೆ. ಮಳೆಗಾಲ ಶುರುವಾಗಿ ತಿಂಗಳುಗಳೇ ಕಳೆದಿದೆ. ಆದರೂ ವಿದ್ಯುತ್ ಕಂಬದ ಆಸುಪಾಸಿನ ಮರಗಳ ಕಟಾವು ಮಾಡದೇ ಅಧಿಕಾರಿಗಳು ಬೇಜವಾಬ್ದಾರಿ ತೋರುತ್ತಿದ್ದಾರೆ. ಲೈನ್ ಗಳಿಗೆ ತಾಗಿರುವ ಮರಗಳನ್ನು ಆದಷ್ಟು ಬೇಗ ಕಟಾವು ಮಾಡಬೇಕು. ಸಮಸ್ಯೆ ಪರಿಹರಿಸದೇ ಇದ್ದಲ್ಲಿ ಮುಂದಿನ ದಿನಗಳಲ್ಲಿ ಪ್ರತಿಭಟನೆ ನಡೆಸಲಾಗುವುದು ಎಂದು ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಕಾರ್ಮಿಕ ವಿಭಾಗದ ಅಧ್ಯಕ್ಷ ರಾಜೇಶ ನಾಯ್ಕ ಕತ್ತಿ ಎಚ್ಚರಿಸಿದ್ದಾರೆ.