ಹಿರಿಯ ಸ್ವಾತಂತ್ರ್ಯ ಹೋರಾಟಗಾರರನ್ನು ಸನ್ಮಾನಿಸಿ ಗೌರವಿಸಿದ ಶಾಸಕಿ ರೂಪಾಲಿ ನಾಯ್ಕ್

ಅಂಕೋಲಾ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ನೆನಪಿಗಾಗಿ ಹರ್‌ಘರ್‌ತಿರಂಗ ಕಾರ್ಯಕ್ರಮದ ಅಂಗವಾಗಿ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಶತಾಯುಷಿ ಸೂರ್ವೆಯ ವೆಂಕಣ್ಣ ಬೊಮ್ಮಯ್ಯ ನಾಯಕ, ಪದ್ಮಶ್ರೀ ಪುರಸ್ಕೃತರಾದ ಸುಕ್ರಿ ಬೊಮ್ಮ ಗೌಡ ಹಾಗೂ ತುಳಸಿ ಗೌಡ ಅವರನ್ನು ಕಾರವಾರ-ಅಂಕೋಲಾ ವಿಧಾನಸಭಾ ಕ್ಷೇತ್ರದ ಶಾಸಕಿ ರೂಪಾಲಿ ಎಸ್‌ ನಾಯ್ಕ ಸನ್ಮಾನಿಸಿ ಧ್ವಜವನ್ನು ವಿತರಣೆ ಮಾಡಿದರು.

ಬಳಿಕ ಅವರು ಮಾತನಾಡಿ, ಸಮಾಜದ ಏಳಿಗೆಗೆ ಹಿರಿಯರ ಕೊಡುಗೆ ಅಪಾರ. ಅವರ ಸಾಧನೆ ಮಾರ್ಗದರ್ಶನ ನಮಗೆ ಅವಶ್ಯಕವಾಗಿದೆ. ಸ್ವಾತಂತ್ರ್ಯದ ಹೋರಾಟದ ಕುರುಹುಗಳು ಅಂಕೋಲೆಯಲ್ಲಿ ಇಂದಿಗೂ ಇದೆ. ಹೋರಾಟದಲ್ಲಿ ಪಾಲ್ಗೊಂಡವರನ್ನು ಸ್ಮರಿಸುವುದು ಅಗತ್ಯವಾಗಿದೆ‌ ಎಂದರು.

ಅಂದಿನ ಜನರ ತ್ಯಾಗ ಬಲಿದಾನದಿಂದ ನಮಗೆಲ್ಲ ಸ್ವಾತಂತ್ರ್ಯ ಲಭಿಸಿದೆ. ಹೋರಾಟದ ಘಟನೆಗಳ ಮಾಹಿತಿ ಮುಂದಿನ ಪೀಳಿಗೆಗೂ ತಲುಪುವಂತೆ ಮಾಡಬೇಕು. ಅಮೃತ ಮಹೋತ್ಸವದ ಅಂಗವಾಗಿ ಪ್ರಧಾನಿ ನರೇಂದ್ರ ಮೋದಿಯವರು ಮನೆ ಮನೆಗೂ ಧ್ವಜ ಹಾರಿಸಲು ಅವಕಾಶವನ್ನು ನೀಡಿದ್ದಾರೆ. ಇದು ನಮ್ಮೆಲ್ಲರ ಸೌಭಾಗ್ಯ. ಎಲ್ಲರೂ ಕೂಡಿ ಈ ಕಾರ್ಯಕ್ರಮವನ್ನು ಯಶಸ್ಸುಗೊಳಿಸೋಣ ಎಂದರು.

ಈ ಸಂದರ್ಭದಲ್ಲಿ ಬಿಜೆಪಿ ಜಿಲ್ಲಾಧ್ಯಕ್ಷರಾದ ವೆಂಕಟೇಶ ನಾಯ್ಕ, ಅಂಕೋಲಾ ಮಂಡಲ ಅಧ್ಯಕ್ಷರಾದ ಸಂಜಯ ನಾಯ್ಕ, ಶಿವಮೊಗ್ಗ ಪ್ರಭಾರಿ ಎನ್‌.ಎಸ್.ಹೆಗಡೆ, ಜಿಲ್ಲಾ ಪ್ರಮುಖರಾದ ನಾಗರಾಜ ನಾಯ್ಕ ತೊರ್ಕೆ, ಭಾರತಿ ಗೌಡ, ಜಗದೀಶ್‌ ನಾಯಕ ಮೊಗಟಾ, ಪುರಸಭೆ ಉಪಾಧ್ಯಕ್ಷರಾದ ರೇಖಾ ಗಾಂವಕರ, ಪ್ರಮುಖರಾದ ತಾರಾ ಗಾಂವಕರ, ಅನುರಾಧಾ ನಾಯ್ಕ, ವಿವಿಧ ಮೊರ್ಚಾ ಪದಾಧಿಕಾರಿಗಳು ಕಾರ್ಯಕರ್ತರು ಉಪಸ್ಥಿತರಿದ್ದರು.