‘ಪ್ರಕೃತಿ ಅಧ್ಯಯನ’ ಸಂಶೋಧನಾ ಪ್ರಬಂಧ ಮಂಡಿಸಿದ ನಿವೇದಿತಾ ಭಟ್ ಅವರಿಗೆ ಪಿಎಚ್ ಡಿ

ಶಿರಸಿ: ಪ್ರಕೃತಿ ಅಧ್ಯಯನ ಸಂಶೋಧನ ಪ್ರಬಂಧಕ್ಕೆ ನಿವೇದಿತಾ ಭಟ್ ರಿಗೆ ವಿದ್ಯಾ ವಾರಿಧಿ ಪಿಎಚ್ಡಿ ಪದವಿ ಲಭಿಸಿದೆ.
ಭಾರತೀಯ ಜ್ಯೋತಿಷ ಶಾಸ್ತ್ರದಲ್ಲಿ ಸಿದ್ಧಾಂತ, ಸಂಹಿತಾ ಹೋರಾ, ಎನ್ನುವ ಪ್ರಧಾನ ವಿಭಾಗಗಳಿವೆ. ಅನೇಕ ಜ್ಯೋತಿಷಿಗಳಿಗೆ ಪರಿಚಯವಿಲ್ಲದ ಸಂಹಿತಾ ವಿಷಯದಲ್ಲಿ, ನಕ್ಷತ್ರ ಗಳ ಆಧಾರದಿಂದ ಪ್ರಾಕೃತಿಕ ಘಟನೆಗಳ ಅಧ್ಯಯನ ಎನ್ನುವ ಪ್ರೌಢ ಪ್ರಬಂಧಕ್ಕೆ ರಾಜಭವನದಲ್ಲಿ ನಡೆದ ಕರ್ನಾಟಕ ಸಂಸ್ಕೃತ ವಿಶ್ವ ವಿದ್ಯಾಲಯದ 10 ನೇ ಘಟಿಕೋತ್ಸವದಲ್ಲಿ ರಾಜ್ಯಪಾಲರು ನಿವೇದಿತಾ ಭಟ್ ರವರಿಗೆ ಪದವಿಯನ್ನು ನೀಡಿದರು.

ಉಡುಪಿಯ ಪ್ರೊ, ಶಿವಪ್ರಸಾದ್ ತಂತ್ರಿ ಅವರ ಮಾರ್ಗದರ್ಶನದಲ್ಲಿ ಅಧ್ಯಯನವಾದ ಈ ಗ್ರಂಥವು ಈಗಾಗಲೇ ಅನೇಕ ವಿದ್ವಾಂಸರಿಂದ, ಪರಿಸರ ಹವಾಮಾನ ತಜ್ಞರಿಂದ ಪ್ರಶಂಸಿಲ್ಪಟ್ಟಿದೆ. ಭಾರತೀಯ ಋಷಿ ವಿಜ್ಞಾನಕ್ಕೂ ಮತ್ತು ಆಧುನಿಕ ಹವಾಮಾನ ಪ್ರಾಕೃತಿಕ ವಿಜ್ಞಾನಕ್ಕೂಈ ಗ್ರಂಥವು ಒಂದು ಕೊಂಡಿಯಾಗಿದೆ.

ನಿವೇದಿತಾ ಭಟ್ ಅವರು ಗುರುಕುಲ ಪದ್ಧತಿಯಲ್ಲಿ ಮೈತ್ರಿಯೀ ಗುರುಕುಲದಲ್ಲಿ ಓದಿ ಅನಂತರ ತಿರುಪತಿಯ ವಿಶ್ವವಿದ್ಯಾಲಯದಿಂದ ಜ್ಯೋತಿಷ ಶಾಸ್ತ್ರದಲ್ಲಿ ಬಿಎ ಪದವಿಯನ್ನು, ಮೈಸೂರು ವಿಶ್ವ ವಿದ್ಯಾಲಯದದಿಂದ ಇಂಗ್ಲಿಷ್ ನಲ್ಲಿ ಎಂಎ ಪದವಿಯನ್ನು ಪಡೆದ, ಉತ್ತಮ ಉಪನ್ಯಾಸಕರು. ಉಮ್ಮಚಗಿಯ ಶ್ರೀ ಮಾತಾ ಸಂಸ್ಕೃತ ಕಾಲೇಜಿನಲ್ಲಿ 2 ವರ್ಷಗಳ ಕಾಲ ಶಾಸ್ತ್ರ ಪಾಠವನ್ನು ಮಾಡಿ ಈಗ ತಮ್ಮ ಮನೆಯಲ್ಲಿಯೇ ಗುರುಕುಲ ನಡೆಸುತ್ತಿದ್ದಾರೆ.