ರಾಷ್ಟ್ರಧ್ವಜ ಸಿದ್ಧಪಡಿಸಿ ರಾಷ್ಟ್ರಪ್ರೇಮ ಮೆರೆದ ಬಿ.ಎಡ್ ವಿದ್ಯಾರ್ಥಿಗಳು

ಕಾರವಾರ: ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನಗರದ ಬಾಡ ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಕ್ಷಿಣಾರ್ಥಿಗಳಿಂದ ರಾಷ್ಟ್ರಧ್ವಜ ಸಿದ್ಧಪಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಬಿ.ಎಡ್ ಮೊದಲ ಹಾಗೂ ಎರಡನೇ ವರ್ಷದಲ್ಲಿ ಅಧ್ಯಯನ ಮಾಡುತ್ತಿರುವ ಒಟ್ಟೂ 120ಕ್ಕೂ ಹೆಚ್ಚು ಪ್ರಶಿಕ್ಷಣಾರ್ಥಿಗಳು ಸೋಮವಾರ ತರಗತಿಯಲ್ಲಿಯೇ ರಾಷ್ಟ್ರಧ್ವಜವನ್ನು ಸಿದ್ಧ ಪಡಿಸಿದರು. ಪ್ರತಿಯೊಬ್ಬ ಪ್ರಶಿಕ್ಷಣಾರ್ಥಿಗಳು ಶ್ರದ್ಧೆಯಿಂದ ರಾಷ್ಟ್ರ ಧ್ವಜವನ್ನು ಸಿದ್ಧಪಡಿಸಿ ಬಳಿಕ ಅದನ್ನು ಕೈಯಲ್ಲಿ ಹಿಡಿದುಕೊಂಡು ಎಲ್ಲರೂ ಕಾಲೇಜಿನ ಆವರಣದಲ್ಲಿ ಪ್ರದರ್ಶಿಸಿ ರಾಷ್ಟ್ರಪ್ರೇಮವನ್ನು ಮೆರೆದರು.

ಶಿವಾಜಿ ಶಿಕ್ಷಣ ಮಹಾವಿದ್ಯಾಲಯದ ಪ್ರಾಂಶುಪಾಲರಾದ ಡಾ. ಶಿವಾನಂದ ನಾಯಕ ಅವರ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಕಾಲೇಜಿನ ಡಾ. ಸುಮನ್ ಸಾವಂತ, ಡಾ. ರಾಜೇಶ ಬಂಟ್ ಸೇರಿದಂತೆ ಎಲ್ಲ ಉಪನ್ಯಾಸಕರು ಹಾಗೂ ಬೋಧಕೇತರ ಸಿಬ್ಬಂದಿಗಳು ಸಹಕಾರ ನೀಡಿದರು.