ಸಮಾಜಕ್ಕೆ ಕಿಂಚಿತ್ ಕೊಡುಗೆ ನೀಡುವುದನ್ನು ಯುವಕರು ಮರೆತಂತಿದೆ – ಶಶಿಭೂಷಣ ಹೆಗಡೆ

ಸಿದ್ದಾಪುರ: ತಾಲೂಕಾ ಬಿಜೆಪಿ ಯುವ ಮೋರ್ಚಾ ನಿಕಟಪೂರ್ವ ಅಧ್ಯಕ್ಷ ಹರೀಶ ಗೌಡರ್ ಜನ್ಮದಿನದ ಪ್ರಯುಕ್ತ ಸಾಧಕರನ್ನು ಸನ್ಮಾನಿಸಲಾಯಿತು. ಪಟ್ಟಣದ ಬಾಲಭವನದಲ್ಲಿ ಭಾನುವಾರ ಸಂಜೆ ನಡೆದ ಕಾರ್ಯಕ್ರಮದಲ್ಲಿ ಜಾನಪದ ಕಲಾವಿದೆ ಲೀಲಾವತಿ ಕೊಂಡ್ಲಿ, ಯೋಗಪಟು ಮಂಜುನಾಥ ನಾಯ್ಕ, ಕರಾಟೆ ಪಟುಗಳಾದ ಆನಂದ ನಾಯ್ಕ, ಅಜೀತ್ ಕೊಡಿಯಾ, ಜಯಂತ ನಾಯ್ಕ, ಚೆಸ್ ಚಾಂಪಿಯನ್ ಭರತ ಹೆಗಡೆ ದೊಡ್ಮನೆ, ಎಸ್.ಎಸ್.ಎಲ್.ಸಿ ಯಲ್ಲಿ ಉತ್ತಮ ಸಾಧನೆ ಮಾಡಿದ ಗೀತಾ ನಾಯ್ಕ ಇವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮ ಉದ್ಘಾಟಿಸಿ ಶಿಕ್ಷಣ ಪ್ರಸಾರಕ ಸಮಿತಿ ಕಾರ್ಯಾಧ್ಯಕ್ಷ ಶಶಿಭೂಷಣ ಹೆಗಡೆ ಮಾತನಾಡಿ, ಸಮಾಜಕ್ಕೆ ನಮ್ಮಿಂದಾದ ಕಿಂಚಿತ್ ಕೊಡುಗೆ ನೀಡಬೇಕು ಎನ್ನುವದನ್ನು ಯುವಕರು ಮರೆತಂತಿದೆ. ಆದರೆ ಹರೀಶ ಗೌಡರ್ ತಮ್ಮ ಜನ್ಮದಿನದ ಆಚರಣೆಯನ್ನು ಇಂದಿನ ಯುವಕರಿಗೆ ಮಾದರಿಯಾಗುವಂತೆ ಆಚರಿಸಿದ್ದಾರೆ‌ ಎಂದರು.

ಅಧ್ಯಕ್ಷತೆ ವಹಿಸಿದ್ದ ಉದ್ಯಮಿ ಉಪೇಂದ್ರ ಪೈ ಮಾತನಾಡಿ, ಇದು ಮನ ಮುಟ್ಟುವ, ಮನ ತಟ್ಟುವ ಕಾರ್ಯಕ್ರಮ. ಜನಪರ ಹೋರಾಟ ಮತ್ತು ಸಮಾಜದ ಸೇವೆ ಮಾಡುವುದರಲ್ಲಿ ಕಹಿ ಘಟಕಗಳು ಸಾಮಾನ್ಯ, ವ್ಯಕ್ತಿಗಿಂತ ವ್ಯಕ್ತಿತ್ವ ಮುಖ್ಯ, ಚರಿತ್ರೆಗಿಂತ ಚಾರಿತ್ರ್ಯ ದೊಡ್ಡದು. ನಿಮ್ಮಿಂದ ಜನಪರ ಕಾರ್ಯಕ್ರಮಗಳು ಆಗಲಿ ಎಂದು ಹಾರೈಸಿದರು.

ರೈತ ಮಖಂಡ ವೀರಭದ್ರ ನಾಯ್ಕ ಮಳವಳ್ಳಿ, ಪತ್ರಕರ್ತ ಕನ್ನೇಶ ಕೋಲಸಿರ್ಸಿ, ಕನ್ನಡಪರ ಸಂಘಟನೆಗಳ ಒಕ್ಕೂಟದ ಅಧ್ಯಕ್ಷ ಆಕಾಶ ಕೊಂಡ್ಲಿ, ಸತೀಶ್ ಹೆಗಡೆ, ಹರೀಶ ಗೌಡರ್ ವೇದಿಕೆಯಲ್ಲಿ ಉಪಸ್ಥಿತರಿದ್ದರು. ದಿನೇಶ್ ನಾಯ್ಕ ಸ್ವಾಗತಿಸಿದರು. ಗಣೇಶ ನಿರೂಪಿಸಿದರು.