ಮೇದಾರ ಸಮಾಜ ಬಾಂಧವರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಲು ಶ್ರೀ. ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮೀಜಿ ಕರೆ

ಜೋಯಿಡಾ : ಶೈಕ್ಷಣಿಕವಾಗಿ ಪ್ರಗತಿ ಸಾಧಿಸಿದಾಗ ದೇಶದ ಅಭಿವೃದ್ಧಿ ಸಾಧ್ಯ ಈ ನಿಟ್ಟಿನಲ್ಲಿ ಮೇದಾರ ಸಮಾಜ ಬಾಂಧವರು ಶೈಕ್ಷಣಿಕವಾಗಿ ಪ್ರಗತಿ ಸಾಧಿಸಬೇಕೆಂದು ಚಿತ್ರದುರ್ಗದ ಶ್ರೀ ಕೇತೇಶ್ವರ ಮಹಾಮಠದ ಶ್ರೀ ಇಮ್ಮಡಿ ಬಸವ ಮೇದಾರ ಕೇತೇಶ್ವರ ಸ್ವಾಮಿಜೀಯವರು ಕರೆ ನೀಡಿದರು.

ಅವರು ಇಂದು ಜೋಯಿಡಾ ತಾಲೂಕಿನ ಜನತಾ ಕಾಲೋನಿಯಲ್ಲಿರುವ ಶ್ರೀ.ಮಾರುತಿ ದೇವಸ್ಥಾನದಲ್ಲಿ ಮೇದಾರ ಸಮಾಜ ಬಾಂಧವರ ಸಭೆಯನ್ನು ಉದ್ದೇಶಿಸಿ ಮಾತನಾಡುತ್ತಿದ್ದರು. ಶ್ರಮ ಜೀವನದ ಮೂಲಕ ಸ್ವಾಭಿಮಾನದ ಜೀವನವನ್ನು ಕಟ್ಟಿಕೊಂಡವರು ಮೇದಾರ ಸಮಾಜ. ಈ ನಾಡಿನ ಮೂಲ ಸಂಸ್ಕೃತಿ, ಪರಂಪರಗತವಾಗಿ ಬಂದ ವೃತ್ತಿಯನ್ನು ಇನ್ನು ಜೀವಂತವಾಗಿರಿಸಿದ ಶ್ರೇಯಸ್ಸು ನಮ್ಮ ಸಮಾಜಕ್ಕಿದೆ. ನಮ್ಮ ಸಂಸ್ಕೃತಿ ಆಚಾರ ವಿಚಾರವನ್ನು ಉಳಿಸಿ ಬೆಳೆಸುವುದರ ಜೊತೆಗೆ ಮೇದಾರ ಸಮಾಜದ ಮಕ್ಕಳು ಉನ್ನತ ಶಿಕ್ಷಣವಂತರಾಗಬೇಕು. ಈ ನಿಟ್ಟಿನಲ್ಲಿ ಸಮಾಜ ಬಾಂಧವರು ಒಗ್ಗಟ್ಟಾಗಿ ಪರಸ್ಪರ ಕಷ್ಟ ಸುಖಗಳಲ್ಲಿ ಸಮಭಾಗಿಗಳಾಗಿ, ತಮ್ಮ ಪ್ರಗತಿಯ ಜೊತೆಗೆ ಸಮಾಜದ ಸಂಘಟನೆಯ ಸದೃಢತೆಗೆ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಮೇದಾರ ಸಮಾಜದ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ಅನೀಲ್ ಮೇದಾರ್, ಸಮಾಜದ ಪ್ರಮುಖರಾದ ಬಸವರಾಜ್ ಯಲ್ಲಪ್ಪ ಮೇದಾರ್,ಸುಭಾಷ್ ಚೌಚಡಿ, ಮಹೇಶ್ ಮೇದಾರ ಸೇರಿದಂತೆ ಸಮಾಜ ಬಾಂಧವರು ಉಪಸ್ಥಿತರಿದ್ದರು.