ದಾಂಡೇಲಿಯಲ್ಲಿ ಫಕೀರನ ವೇಷ ಧರಿಸಿ ವಂಚನೆಗೆ ಯತ್ನ -ಇಬ್ಬರನ್ನು ಪೋಲಿಸರಿಗೆ ಒಪ್ಪಿಸಿದ ಸಾರ್ವಜನಿಕರು

ದಾಂಡೇಲಿ : ಪಕೀರನ ವೇಷವನ್ನು ಧರಿಸಿ ಮನೆ ಮನೆಗೆ ಹೋಗಿ ನಿಮಗೆ ಆ ಸಮಸ್ಯೆ ಇದೆ, ಈ ಸಮಸ್ಯೆ ಇದೆ ಎಂದು ಜನರನ್ನು ವಂಚಿಸಲೆತ್ನಿಸುತ್ತಿದ್ದ ಮುಂಬೈ ಮೂಲದ ಇಬ್ಬರನ್ನು ದಾಂಡೇಲಿ ನಗರದ ಗಾಂಧಿನಗರದಲ್ಲಿ ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ಶುಕ್ರವಾರ ನಡೆದಿದೆ.

ಮನೆಮನೆಗೆ ಹೋಗಿ ಭಿಕ್ಷಾಟನೆ ಮಾಡುವ ಪಕೀರನ ವೇಷವನ್ನು ಧರಿಸಿದ್ದ ಈ ಇಬ್ಬರು ಯುವಕರು ಮುಂಬಯಿ ಮೂಲದವರಾಗಿದ್ದು, ಗಾಂಧಿನಗರದಲ್ಲಿ ಮನೆ ಮನೆಗೆ ಹೋಗಿ ಭಿಕ್ಷೆಯನ್ನು ಬೇಡಿ, ಅದರಲ್ಲಿಯೂ ಕೆಲವು ಮನೆಗಳಲ್ಲಿ ಒಂದಿಬ್ಬರು ಇರುವುದನ್ನಷ್ಟೇ ಗಮನಿಸಿದ ಇವರು ನಿಮ್ಮ ಮನೆಯಲ್ಲಿ ಆ ಸಮಸ್ಯೆ ಇದೆ, ಈ ಸಮಸ್ಯೆ ಇದೆ ಎಂದು ಹೇಳಿ ವಂಚಿಸಲು ಯತ್ನಿಸುತ್ತಿರುವುದನ್ನು ಗಮನಿಸಿದ, ಸ್ಥಳೀಯ ನಿವಾಸಿ ಹಾಗೂ ಕಾಂಗ್ರೆಸ್ ಜಿಲ್ಲಾ ಅಲ್ಪಸಂಖ್ಯಾತರ ಘಟಕದ ಕಾರ್ಯದರ್ಶಿ ದಾದಾಪೀರ್ ನದೀಮುಲ್ಲಾ ಅವರು ಆ ಇಬ್ಬರು ಯುವಕರನ್ನು ವಿಚಾರಿಸಿದ್ದಾರೆ.

ವಿಚಾರಣೆಯ ಸಂದರ್ಭದಲ್ಲಿ ಆ ಇಬ್ಬರು ಯುವಕರು ಹಿಂದು ಧರ್ಮಿಯ ಯುವಕರಾಗಿದ್ದು, ತಮ್ಮ ಹೆಸರನ್ನು ಬದಲಾಯಿಸಿ ಮುಸ್ಲಿಂ ಹೆಸರನ್ನು ಇಟ್ಟುಕೊಂಡಿದ್ದರು. ಇವರ ವರ್ತನೆಯಿಂದ ಅನುಮಾನಗೊಂಡ ದಾದಾಪೀರ್ ನದೀಮುಲ್ಲಾ ಅವರು ತಕ್ಷಣವೇ ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದರು.

ಎಎಸ್ಐ ನಾರಾಯಣ್ ರಾಥೋಡ್ ಅವರ ನೇತೃತ್ವದಲ್ಲಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಆ ಇಬ್ಬರನ್ನು ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.