ಗಾಂಧಿನಗರದಲ್ಲಿ ಬಿರುಕು ಬಿಟ್ಟಿದ್ದ ಕಿರು ಸೇತುವೆಯ ಮೇಲೆ ಹೂತೋದ ಲಾರಿ

ದಾಂಡೇಲಿ : ನಗರದ ಗಾಂಧಿನಗರದಲ್ಲಿ ಈ ಬಾರಿ ಮಳೆಗಾಲದ ಸಂದರ್ಭದಲ್ಲಿ ಕಿರು ಸೇತುವೆಯೊಂದು ಬಿರುಕು ಬಿಟ್ಟಿದ್ದು, ಘನವಾಹನಗಳು ಸಂಚರಿಸದಂತೆ ಬ್ಯಾರಿಕೇಡನ್ನು ಅಳವಡಿಸಲಾಗಿತ್ತು.

ಇದೇ ಕಿರು ಸೇತುವೆಯ ಮೇಲೆ ಸರಕು ತುಂಬಿದ್ದ ಲಾರಿಯೊಂದು ಹೋಗುತ್ತಿದ್ದಾಗ ಸೇತುವೆ ಸಂಪೂರ್ಣ ಕುಸಿದು ಲಾರಿ ಹೂತೋದ ಘಟನೆ ನಡೆದಿದೆ. ಹೂತೋದ ಲಾರಿಯನ್ನು ಮೇಲಕ್ಕೆ ಎಳೆಯಲು ಹರಸಾಹಸ ಪಡಬೇಕಾಯಿತು. ಕೊನೆಗೆ ಲಾರಿಯಲ್ಲಿ ತುಂಬಿಕೊಂಡಿದ್ದ ಸರಕು ವಸ್ತುಗಳನ್ನು ಕೆಳಗಿಳಿಸಿ ಕ್ರೈನ್ ಸಹಾಯದ ಮೂಲಕ ಹೂತೋದ ಲಾರಿಯನ್ನು ಮೇಲಕ್ಕೆತ್ತಲಾಯಿತು.

ಸರಕು ತುಂಬಿದ ಲಾರಿ ಈ ಕಿರು ಸೇತುವೆಯ ಮೇಲೆ ಹೋದ ಪರಿಣಾಮವಾಗಿ ಸೇತುವೆ ಸಂಪೂರ್ಣ ಕುಸಿದಿರುವುದರಿಂದ ಲಘು ವಾಹನಗಳ ಸಂಚಾರಕ್ಕೂ ಇದೀಗ ತೀವ್ರ ತೊಂದರೆಯಾಗಿ ತೊಡಗಿದೆ.