ಆರ್ಥಿಕವಾಗಿ ದಿವಾಳಿಯಾಗಿರುವ ಕಾರವಾರ ನಗರಸಭೆ! ಡಿಸೇಲ್ ಖರೀದಿಗೂ ಹಣವಿಲ್ಲ- ಸರ್ಕಾರ ಆದಷ್ಟು ಬೇಗ ಈ ಕಡೆ ಗಮನ ಹರಿಸಬೇಕಿದೆ

ಕಾರವಾರದ ನಗರ ಸಭೆಯು ತನ್ನ ವ್ಯಾಪ್ತಿಯಲ್ಲಿ ವಸೂಲಿಯಾಗುವ ಟ್ಯಾಕ್ಸ್‌ ಮೊತ್ತಕ್ಕಿಂತ ಅಧಿಕ ಹಣದ ಕಾಮಗಾರಿ ಮಾಡಿಸಿ ಎಡವಟ್ಟು ಮಾಡಿಕೊಂಡಿದೆ. ಅಂದಾಜು 11 ಕೋಟಿ ರೂ ವೆಚ್ಚದ ಕಾಮಗಾರಿ ಮಾಡಿಸಿದ ನಗರಸಭೆಯು ಕಾಂಟ್ರಾಕ್ಟರುಗಳಿಗೆ ಬಿಲ್ ಪಾವತಿ ಮಾಡಲಾಗದೆ ಸಂಕಷ್ಟಕ್ಕೆ ಸಿಲುಕಿದೆ, ಇನ್ನು ಆರ್ಥಿಕವಾಗಿ ದಿವಾಳಿಯಾಗಿರುವ ನಗರಸಭೆಯು ಸದಸ್ಯರ ಗೌರವ ಧನಕ್ಕೂ ಕೊಕ್ಕೆ ಹಾಕಿದೆ. ಈ ಕುರಿತು ಒಂದು ವರದಿ ಇಲ್ಲಿದೆ ನೋಡಿ.

ಹೌದು ಉತ್ತರ ಕನ್ನಡ ಜಿಲ್ಲೆಯ ಕಾರವಾರದ ನಗರ ಸಭೆಯು ಯಡವಟ್ಟು ಮಾಡಿಕೊಂಡಿದೆ. ತನ್ನ ವ್ಯಾಪ್ತಿಯಲ್ಲಿ ವಸೂಲಿಯಾಗುವ ಕರ (ಟ್ಯಾಕ್ಸ್) ಕ್ಕಿಂತ ಹೆಚ್ಚಿನ ಹಣದ ಕಾಮಗಾರಿಯನ್ನ ಮಾಡಿಸಿ, ಕಾಂಟ್ರಾಕ್ಟ್‌ರಿಗೆ ಹಣ ಪಾವತಿ ಮಾಡಲಾಗದ ಸ್ಥಿತಿಗೆ ಬಂದಿದೆ. ಇನ್ನು ವಸೂಲಿಯಾದ ಟ್ಯಾಕ್ಸ್‌ನ ಶೇಕಡಾ 60 ರಷ್ಟು ಹಣವನ್ನ ಕಾಂಟ್ರಾಕ್ಟ್‌‌ಗಳಿಗೆ ನೀಡುತ್ತಿದ್ದರು ಹಣ ಸಾಕಾಗುತ್ತಿಲ್ಲ. ಜೊತೆಗೆ ನಗರ ಸಭೆ ವಾಹನಗಳಿಗೂ ಡಿಸೇಲ್ ಹಾಕದ ಸ್ಥಿತಿ ನಿರ್ಮಾಣವಾಗಿದೆ.

ಇನ್ನು ಆರ್ಥಿಕ ಸಂಕಷ್ಟದಿಂದ ಸದಸ್ಯರ ಗೌರವ ಧನಕ್ಕೂ ಕೊಕ್ಕೆ ಬಿದ್ದಿದೆ.. ಇಷ್ಟೆಲ್ಲಾ ಆರ್ಥಿಕ ಸಂಕಷ್ಟ ಎದುರಿಸಲು ಮುಖ್ಯ ಕಾರಣ ಅಂದ್ರೆ, ಕಳೆದ ವರ್ಷ ಸುಮಾರು 20 ಕೋಟಿ ರೂ ವೆಚ್ಚದ 100 ಕ್ಕೂ ಅಧಿಕ ಕಾಮಗಾರಿಯನ್ನು ಯಾವುದೇ ಪೂರ್ವಪರ ಯೋಚನೆ ಮಾಡದೆ ಆಗಿನ ಪೌರಾಯುಕ್ತ ಆರ್.ಪಿ.ನಾಯ್ಕ ಕಾಂಟ್ರಾಕ್ಟ್‌ರಿಗೆ ಕೆಲಸ ನೀಡಿದ್ದು, ಕೆಲಸ ನೀಡಿದ್ದೆ ತಡ ಕಾಂಟ್ರಾಕ್ಟ್ ಎಲ್ಲ 100 ಕಾಮಗಾರಿಗಳನ್ನ ಮಾಡಿ ಮುಗಿಸಿದ್ದಾರೆ‌‌.

ಕೆಲಸ ಮುಗಿದ ಬಳಿ ಹಣ ಪಾವತಿ ಆಗಬೇಕು. ಆದರೆ ನಗರ ಸಭೆಯಲ್ಲಿ ಹಣವಿಲ್ಲ, ಜೊತೆಗೆ ಮೊದಲಿದ್ದ ಪೌರಾಯುಕ್ತ ಆರ್‌.ಪಿ. ನಾಯ್ಕ ವರ್ಗಾವಣೆಯಾಗಿದ್ದಾರೆ.. ಈಗ ಹೊಸದಾಗಿ ನೇಮಕಗೊಂಡ ಪೌರಾಯುಕ್ತರ ಚಂದ್ರಮೌಳಿ ಅವರಿಗೆ ಇದನ್ನ ನಿಭಾಯಿಸುವುದು ಕಷ್ಟಸಾಧ್ಯವಾಗುತ್ತಿದೆ.. ಇನ್ನು ಈ ಬಗ್ಗೆ ಅವರನ್ನ ಕೇಳಿದ್ರೆ ಹೌದು ಆರ್ಥಿಕ ಸಂಕಷ್ಟ ಎದುರಾಗಿದೆ, ನಿಧಾನಕ್ಕೆ ಎಲ್ಲವನ್ನೂ ಸರಿ ಮಾಡುತ್ತೇವೆ, ಕಾಂಟ್ರಾಕ್ಟರ್​ ಸಹಕಾರ ನೀಡಬೇಕು ಎನ್ನುತ್ತಾರೆ.

ಈ ಮೊದಲಿದ್ದ ಪೌರಾಯುಕ್ತ ಆರ್.ಪಿ. ನಾಯ್ಕ ಅವರು ಕಾರವಾರ ನಗರದ ತುಂಬ ಗಾರ್ಡನ್​​ಗಳ ನಿರ್ಮಾಣ, ಸಣ್ಣ ಪುಟ್ಟ ರಸ್ತೆಗಳ ಕಾಮಗಾರಿ, ಕಾಂಪ್ಲೆಕ್ಸ್ ಗಳ ನಿರ್ಮಾಣ ಹೀಗೆ ಅವಶ್ಯಕವೋ ಅಥವಾ ಅನಾವಶ್ಯಕವೋ… ಹಣಕಾಸಿನ ಸ್ಥಿತಿ ನೋಡದೆ ಮುನ್ಸಿಪಾಲಟಿ ಅನುದಾನ ನಂಬಿ ಎಲ್ಲ ಕಾಮಗಾರಿಗಲಿಗೆ ಆದೇಶ ನೀಡಿದ್ದಾರೆ. ಈಗ ಕೆಲಸ ಮಾಡಿದ ಕಾಂಟ್ರಾಕ್ಟರ್​ ತಮ್ಮ ಕೆಲಸದ ಬಿಲ್‌ಗಳನ್ನ ಪಾವತಿ ಮಾಡುವಂತೆ ಒತ್ತಾಯ ಮಾಡುತ್ತಿದ್ದಾರೆ.

ಈ ಬಗ್ಗೆ ಜಿಲ್ಲಾಧಿಕಾರಿಗಳು ಸಹ ಕಳೆದ ತಿಂಗಳು ನಗರ ಸಭೆಗೆ ಭೇಟಿ ನೀಡಿ ಅಲ್ಲೆ ಅಧಿಕಾರಿಗಳೊಂದಿಗೆ ಸಭೆ ನಡೆಸಿದ್ದಾರೆ. ಕಾಮಗಾರಿಗಳ ಪ್ರಸ್ತುತ ಹಂತದ ಬಗ್ಗೆ ತಿಳಿದುಕೊಂಡು ಸಮಸ್ಯೆ ಬಗೆಹರಿಸುವ ನಿಟ್ಟಿನಲ್ಲಿ ಪ್ರಯತ್ನ ಮಾಡಿದ್ದಾರೆ. ಜೊತೆಗೆ ಶೀಘ್ರದಲ್ಲಿ ಎಲ್ಲ ಟ್ಯಾಕ್ಸ್ ವಸೂಲಿ ಮಾಡಲು ಸೂಚನೆ ನೀಡಿದ್ದಾರೆ. ಹೀಗಾಗಿ ಶೇಕಡಾ 98 ರಷ್ಟು ಟ್ಯಾಕ್ಸ್ ವಸೂಲಾಗಿದೆ.. ಇಷ್ಟಾದರೂ ಕಾಂಟ್ರಾಕ್ಟರಿಗೆ ನೀಡಲು ಹಣವಿಲ್ಲ.. ಹಣವಿಲ್ಲದಕ್ಕೆ ಹೊಸದಾಗಿ ಕಾಮಗಾರಿಗಳು ಕೂಡ ಪ್ರಾರಂಭವಾಗಿಲ್ಲ.. ಆರ್ಥಿಕ ದಿವಾಳಿಯಾಗಿರುವ ನಗರ ಸಭೆಗೆ ಆರ್ಥಿಕ ಚೈತನ್ಯದ ಅವಶ್ಯಕತೆ ಇದೆ. ಇನ್ನು ಈ ಬಗ್ಗೆ ಪೌರಾಯುಕ್ತರು ಮತ್ತೊಮ್ಮೆ ಜಿಲ್ಲಾಧಿಕಾರಿಗಳ ಗಮನಕ್ಕೆ ತಂದು ಶೀಘ್ರದಲ್ಲಿ ಸಮಸ್ಯೆ ಬಗೆ ಹರಿಸಲು ಪ್ರಯತ್ನ ಮಾಡುತ್ತೆವೆ ಎನ್ನುತ್ತಾರೆ

ಒಟ್ಟಿನಲ್ಲಿ ಹಾಸಿಗೆ ಇದ್ದಷ್ಟು ಕಾಲು ಚಾಚು ಎಂಬ ಗಾದೆಯಂತೆ ನಡೆದು ಕೊಳ್ಳಬೇಕಿದ್ದ ನಗರ ಸಭೆ, ತನ್ನ ಹಾಸಿಗೆ ಮೀರಿ ಕಾಲು ಚಾಚಿದ್ದರಿಂದ ಇಂತಹ ಆರ್ಥಿಕ ದಿವಾಳಿಗೆ ಒಳಗಾಗಿದೆ.. ಆದಷ್ಟು ಶೀಘ್ರದಲ್ಲಿ ಜಿಲ್ಲಾಡಳಿತ, ಸರ್ಕಾರ ಈ ಕಡೆ ಗಮನ ಹರಿಸಿ, ಸಮಸ್ಯೆ ಬಗೆಹರಿಸಬೇಕಿದೆ.