ಭಟ್ಕಳ :ನಾಮಧಾರಿ ಸಮಾಜದಿಂದ ಬ್ರಹತ್ ಮೆರವಣಿಗೆ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಕೆ

ಭಟ್ಕಳ: ಬ್ರಹ್ಮಶ್ರೀ ನಾರಾಯಣ ಗುರು ನಿಗಮಕ್ಕೆ ಅನುದಾನ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿ ಭಾನುವಾರದಂದು ಶ್ರೀ ನಾರಾಯಣ ಗುರು ಜಯಂತ್ಯೋತ್ಸವ ಸಮಿತಿ ಭಟ್ಕಳ, ಶ್ರೀ ನಿಚ್ಛಲಮಕ್ಕಿ ವೆಂಕಟರಮಣ ದೇವಸ್ಥಾನ ಗುರುಮಠದ ಆಡಳಿತ ಮಂಡಳಿ, ಶ್ರೀ ಹಳೇಕೋಟೆ ಹನುಮಂತ ದೇವಸ್ಥಾನ ಸಾರದಹೊಳೆ ಆಡಳಿತ ಮಂಡಳಿ ಮತ್ತು ನಾಮಧಾರಿ ಸಮಾಜ ಬಾಂಧವರವರು ಬ್ರಹತ ಮೆರವಣಿಗೆ ಮೂಲಕ ಸಂಶುದ್ದೀನ್ ಸರ್ಕನನಲ್ಲಿ ತಹಸೀಲ್ದಾರ ಮುಖೇನ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಿದರು.

ಮನವಿಯಲ್ಲಿ ಈಡಿಗ ನಾಮಧಾರಿ, ಬಿಲ್ಲವ ಸೇರಿದಂತೆ 26 ಪಂಗಡಗಳಿರುವ ಹಿಂದುಳಿದ 2ಎ ವರ್ಗದಲ್ಲಿ ಬರುವ ನಮ್ಮ ಸಮಾಜವು ಕರ್ನಾಟಕದಲ್ಲಿ ಅತಿ ಹೆಚ್ಚು ಜನಸಂಖ್ಯೆ ಹೊಂದಿದ್ದಾರೆ. ಸಮುದಾಯವು ಅರ್ಥಿಕವಾಗಿ ಹಾಗೂ ಶೈಕ್ಷಣಿಕವಾಗಿ ಅತಿ ಹಿಂದುಳಿದ ಸಮಾಜವಾಗಿದೆ. ಸಮಾಜವನ್ನು ಮುಖ್ಯವಾಹಿನಿಗೆ ತರಲು ನಾವು ಹಲವು ವರ್ಷಗಳಿಂದ ಶ್ರೀ ನಾರಾಯಣ ಗುರು ಅಭಿವೃದ್ಧಿ ನಿಗಮ ರಚಿಸುವಂತೆ ಸರಕಾರಕ್ಕೆ ಮಾಡಲಾಗಿದೆ.

ಹಿಂದಿನ ಬಿಜೆಪಿ ಸರಕಾರ ಕೊನೆಯ ಅವಧಿಯಲ್ಲಿ ಶ್ರೀ ನಾರಾಯಣ ಗುರುಗಳ ಅಭಿವೃದ್ಧಿ ನಿಗಮ ರಚನೆಯ ಕುರಿತಂತೆ ಘೋಷಣೆ ಮಾಡಿದ್ದು ಆದರೆ ಯಾವುದೇ ಆರ್ಥಿಕ ನೆರವು ನೀಡಿದ್ದು ಇರುವುದಿಲ್ಲ. ತಮ್ಮ ಸರಕಾರ ಕಳೆದ ಬಜೆಟ್‌ನಲ್ಲಿ ಶ್ರೀ ನಾರಾಯಣ ಗುರುಗಳ ಅಭಿವೃದ್ಧಿ ನಿಗಮಕ್ಕೆ ಅನುದಾನ ಒದಗಿಸುತ್ತೀರಿ ಎಂಬ ನಿರೀಕ್ಷೆಯಲ್ಲಿದ್ದ ನಮ್ಮ ಸಮುದಾಯಕ್ಕೆ, ಶ್ರೀ ನಾರಾಯಣ ಗುರು ನಿಗಮಕ್ಕೆ ಯಾವುದೇ ಅನುದಾನ ಕಲ್ಪಿಸದೇ ಇರುವುದು ತುಂಬಾ ನಿರಾಸೆಯನ್ನುಂಟು ಮಾಡಿದೆ.
ಮುಖ್ಯಮಂತ್ರಿಗಳಿಗೆ  ಹಿಂದುಳಿದ ಸಮುದಾಯದ ಕುರಿತು ಅಪಾರ ಕಳಕಳಿಯನ್ನು ಹೊಂದಿದ ನಾಯಕರಾಗಿದ್ದು ನಮ್ಮ ಬೇಡಿಕೆಗೆ ಸ್ಪಂದಿಸುತ್ತೀರಿ ಎಂಬ ನಂಬಿಕೆ ನಮ್ಮದು.

ಈ ಹಿನ್ನೆಲೆಯಲ್ಲಿ ತಕ್ಷಣ ಅಧಿಕೃತವಾಗಿ ಶ್ರೀ ನಾರಾಯಣ ಗುರುಗಳ ಅಭಿವೃದ್ಧಿ ನಿಗಮವನ್ನು ಪೂರ್ಣ ಪ್ರಮಾಣದಲ್ಲಿ ರಚಿಸಿ ಈ ನಿಗಮಕ್ಕೆ ಕನಿಷ್ಠ ಒಂದು ಸಾವಿರ ಕೋಟಿ ಹಣವನ್ನು ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.

ಈ ಸಂದರ್ಭದಲ್ಲಿ ನಾಮಧಾರಿ ಸಮಾಜದ ಅಧ್ಯಕ್ಷ ಕ್ರಷ್ಣ ನಾಯ್ಕ, ಉಪಾಧ್ಯಕ್ಷ ಭವಾನಿ ಶಂಕರ ನಾಯ್ಕ, ಕಾರ್ಯದರ್ಶಿ ಮಾಸ್ತಿ ನಾಯ್ಕ, ಮಾಜಿ ಶಾಸಕ ಸುನೀಲ ನಾಯ್ಕ, ಕುಮಟಾದ ಸೂರಜ ನಾಯ್ಕ ಸೋನಿ, ಮಂಗಳೂರಿನ ಸತ್ಯಜಿತ್ ಸುರತ್ಕಲ್, ಶ್ರೀ ಗೋಕರ್ಣನಾಥೇಶ್ವರ ದೇವಸ್ಥಾನ ಕುದ್ರೋಳಿ ಮಂಗಳೂರಿನ ಕೋಶಾಧಿಕಾರಿ  ಪದ್ಮರಾಜ್ ಆರ್., ಸೇರಿದಂತೆ ಭಟ್ಕಳದ ನಾಮಧಾರಿ ಸಮಾಜದ ಹಿರಿಯ ಮುಖಂಡರು ಪ್ರಮುಖರು ಇದ್ದರು.

ತಹಸೀಲ್ದಾರ ತಿಪ್ಪೇಸ್ವಾಮಿ ಮನವಿಯನ್ನು ಸ್ವೀಕರಿಸಿ ಸೋಮವಾರದಂದು ಜಿಲ್ಲಾಧಿಕಾರಿಗಳ ಮೂಲಕ ಮುಖ್ಯಮಂತ್ರಿಗಳಿಗೆ ತಲುಪಿಸುವ ಕೆಲಸ ಮಾಡಲಿದ್ದೇವೆ ಎಂದರು.