ದಾಂಡೇಲಿಯಲ್ಲಿ ಯಕ್ಷಪ್ರಿಯರನ್ನು ಮನರಂಜಿಸಿದ ಕುಶ ಲವ ಕೀಚಕ ವಧೆ ಯಕ್ಷಗಾನ ಪ್ರದರ್ಶನ

ದಾಂಡೇಲಿ : ನಗರದ ಕಲಾಶ್ರೀ ಸಂಸ್ಥೆ ಇವರ ಆಶ್ರಯದಡಿ ಕುಂದಾಪುರದ ಹಾಲಾಡಿಯ ಶ್ರೀ.ಮಹಾಗಣಪತಿ ಪ್ರವಾಸಿ ಯಕ್ಷಗಾನ ಮಂಡಳಿ ಹಾಗೂ ಅತಿಥಿ ಕಲಾವಿದರ ಮೇಳೈಸುವಿಕೆಯಲ್ಲಿ ನಗರದ ಕುಳಗಿ ರಸ್ತೆಯಲ್ಲಿರುವ ವಿದ್ಯಾಧಿರಾಜ ಸಭಾಭವನದಲ್ಲಿ ಶನಿವಾರ ರಾತ್ರಿ ನಡೆದ ಕುಶ ಲವ ಕೀಚಕ ವಧೆ ಎಂಬ ಯಕ್ಷಗಾನ ಪ್ರದರ್ಶನವು ಯಕ್ಷಪ್ರಿಯರನ್ನು ರಂಜಿಸುವಲ್ಲಿ ಯಶಸ್ವಿಯಾಯ್ತು.

ಈ ಯಕ್ಷಗಾನದ ಹಿಮ್ಮೇಳನದಲ್ಲಿ ರಾಘವೇಂದ್ರ ಮಯ್ಯ, ಉಮೇಶ್ ಮರಾಠೆ, ರಮೇಶ್ ಭಂಡಾರಿ ಕಡತೋಕ, ಸುಬ್ರಹ್ಮಣ್ಯ ಭಟ್ ಮೂರೂರು ಮತ್ತು ರವಿ ಕಾಡೂರು ಅವರ ತಂಡ ಸಾಥ್ ನೀಡಿದರೇ, ಇತ್ತ ಮುಮ್ಮೇಳನದಲ್ಲಿ ಕೋಡಿ ವಿಶ್ವನಾಥ ಗಾಣಿಗ, ಚಂದ್ರಹಾಸ ಗೌಡ, ಸುಧಾಕರ ಆಲೂರು, ಮಂಜುನಾಥ್ ಶೆಟ್ಟಿ, ವಿಶ್ವನಾಥ ಆಚಾರ್ಯ ತೊಂಬಟ್ಟು, ನಿತಿನ್ ಶೆಟ್ಟಿ ಸಿದ್ದಾಪುರ, ನಾರಾಯಣ ನಾಯ್ಕ, ಉಳ್ಳೂರು. ರಜಿತ್ ಕುಮಾರ್ ವಂಡ್ಸೆಯವರು ತಮ್ಮ ಮನಮೋಹಕ ಅಭಿನಯದ ಮೂಲಕ ಎಲ್ಲರ ಗಮನ ಸೆಳೆದರು. ಸ್ತ್ರೀಪಾತ್ರದಲ್ಲಿ ಮಾಧವ ನಾಗೂರು, ರವೀಂದ್ರ ಶೆಟ್ಟಿ ಹಕ್ಲಾಡಿ ಮತ್ತು ಸಚಿನ್ ಅವರು ಮನೋಜ್ಞವಾಗಿ ಅಭಿನಯಿಸಿದರು. ಮಹಾಬಲೇಶ್ವರ ಭಟ್ ಕ್ಯಾದಗಿ ಮತ್ತು ಶಂಕರ ನಾಯ್ಕ ಉಳ್ಳೂರು ಅವರಿಬ್ಬರ ಹಾಸ್ಯ ಪ್ರೇಕ್ಷಕರನ್ನು ನಗೆಗಡಲಿನಲ್ಲಿ ತೇಲಾಡಿಸಿತು.

ಈ ಸಂದರ್ಭದಲ್ಲಿ ಕಲಾಶ್ರೀ ಸಂಸ್ಥೆಯ ಅಧ್ಯಕ್ಷರಾದ ಎಸ್.ಪ್ರಕಾಶ ಶೆಟ್ಟಿ ಹಾಗೂ ಸಂಸ್ಥೆಯ ಪದಾಧಿಕಾರಿಗಳು ಮತ್ತು ಸದಸ್ಯರು ಉಪಸ್ಥಿತರಿದ್ದರು. ಯಕ್ಷಗಾನವನ್ನು ವೀಕ್ಷಿಸಲು ದಾಂಡೇಲಿ ಮಾತ್ರವಲ್ಲದೇ ಜೋಯಿಡಾ, ಹಳಿಯಾಳ ಮತ್ತು ಯಲ್ಲಾಪುರ ತಾಲ್ಲೂಕುಗಳಿಂದ ಯಕ್ಷಾಭಿಮಾನಿಗಳು ಆಗಮಿಸಿದ್ದರು.