ಕಲುಷಿತಗೊಳ್ಳುತ್ತಿರುವ ಭುವನಗಿರಿಯ ಭುವನೇಶ್ವರಿ ದೇವಾಲಯದ ಪುಷ್ಕರಿಣಿ

ಸಿದ್ದಾಪುರ: ತಾಲ್ಲೂಕಿನ ಭುವನಗಿರಿಯ ಭುವನೇಶ್ವರಿ ದೇವಾಲಯದ ಪುಷ್ಕರಿಣಿಯು ಪುರಾತನ ಕಾಲದ ಕೆರೆಯಾಗಿದ್ದು ಮಳೆಗಾಲದಲ್ಲಿ ಚರಂಡಿಯ ನೀರು ಕೆರೆ ಸೇರಿ ಕಲುಷಿತಗೊಳ್ಳುತ್ತಿದ್ದರೂ ಸಂಬಂಧಪಟ್ಟ ಇಲಾಖೆಯ ಅಧಿಕಾರಿಗಳು ನಿರ್ಲಕ್ಷ್ಯ ತೋರುತ್ತಿದ್ದಾರೆ ಎಂದು ಆಡಳಿತ ಮಂಡಳಿಯ ಅಧ್ಯಕ್ಷ ಶ್ರೀಕಾಂತ ಹೆಗಡೆ ಗುಂಜಗೋಡು ಹೇಳಿದರು.
ಅವರು ಬುಧವಾರ ತಹಶೀಲ್ದಾರರಿಗೆ ಮತ್ತು ಲೋಕೋಪಯೋಗಿ ಅಧಿಕಾರಿಗೆ ಈ ಕುರಿತು ಮನವಿ ನೀಡಿ ಮಾಹಿತಿ ನೀಡಿದರು. ಭುವನಗಿರಿ ಕೆರೆಯು ಬಿಳಗಿ ಅರಸರ ಕಾಲದಲ್ಲಿ ನಿರ್ಮಿಸಿದ್ದು ಪ್ರತಿದಿನ ಭುವನೇಶ್ವರಿ ದೇವಿಯ ಅಭಿಷೇಕಕ್ಕೆ ಈ ಕೆರೆಯ ನೀರನ್ನೇ ಬಳಸಲಾಗುತ್ತದೆ. ಮಳೆಗಾಲದಲ್ಲಿ ರಸ್ತೆಯ ಚರಂಡಿ ನೀರು ಸರಾಗವಾಗಿ ಹರಿದು ಹೋಗದ ಕಾರಣ ಚರಂಡಿ ನೀರು ಕೆರೆಯನ್ನು ಸೇರುತ್ತಿದ್ದು ನೀರು ಮಲಿನಗೊಳ್ಳುತ್ತಿದೆ. ಇದನ್ನು ಸರಿಪಡೀಸುವ ಕುರಿತು ಕಳೆದ 3-4 ವರ್ಷಗಳಿಂದಲೂ ಸಂಬಂಧಪಟ್ಟ ಅಧಿಕಾರಿಗಳಿಗೆ ಮನವಿ ಮಾಡುತ್ತಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಇದರಿಂದ ಭಕ್ತಾದಿಗಳ ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟಾಗುತ್ತಿದ್ದು ಸಂಬಂಧಪಟ್ಟ ಅಧಿಕಾರಿಗಳು ಕೂಡಲೆ ಗಮನ ಹರಿಸಿ ಕೆರೆಯ ಸುಸ್ಥಿತಿ ಕಾಪಾಡಲು ಸಹಕರಿಸುವಂತೆ ಮನವಿ ನೀಡಲಾಗಿದೆ ಎಂದರು.