ದಿನ ಬೆಳಗಾದ್ರೆ ಸಾಕು ಪ್ರೌಢಶಾಲೆಯಲ್ಲಿ ಅಶ್ಲೀಲ ಗೋಡೆ ಬರಹ ನೋಡಿ ವಿದ್ಯಾರ್ಥಿನಿಯರು ಕಣ್ಣೀರುಡುತ್ತಿದ್ದಾರೆ, ಇದಕ್ಕೆಲ್ಲ ಕೊನೆ ಯಾವಾಗ?

ಅದು ಶೈಕ್ಷಣಿಕವಾಗಿ ಹಿಂದುಳಿದ ಜಿಲ್ಲೆ ಎಂಬ ಹಣೆ ಪಟ್ಟಿಕೊಂಡಿರೋ ಜಿಲ್ಲೆ. ಅದ್ಯಾಗೋ ಅಲ್ಲಿನ ಸಾಕ್ಷರತೆ ಗುಣಮಟ್ಟ ಹೆಚ್ಚಿಸಲು ಸರ್ಕಾರ ನಾನಾ ಪ್ರಯತ್ನ ಮಾಡ್ತಿದೆ. ಈ ಮಧ್ಯೆ ಅದೊಂದು ಕಡೆ ಕಿಡಿಗೇಡಿಗಳ ಗೋಡೆಬರಹ ಕಾಟಕ್ಕೆ ಪ್ರೌಢಶಾಲಾ ಬಾಲಕಿಯರು ಶಾಲೆಗೆ ಬರೋದಕ್ಕೂ ಹಿಂದು ಮುಂದು ನೋಡವಂತಾಗಿದೆ. ಹೌದು. ಕೊಪ್ಪಳ ಜಿಲ್ಲೆ ಕನಕಗಿರಿ ಪಟ್ಟಣದಲ್ಲಿನ ಅದೊಂದು ವಿಚಿತ್ರಕಾರಿ ವರ್ತನೆ ಅಲ್ಲಿನ ಜನರನ್ನ ಆತಂಕಕ್ಕೆ ದೂಡಿದೆ. ಇನ್ನು ಪೋಷಕರಂತೂ ತಮ್ಮ ಹೆಣ್ಣುಮಕ್ಕಳನ್ನ ಶಾಲೆಗೆ ಕಳಿಸೋದಾ ಬೇಡ್ವಾ ಅನ್ನೋ ಗೊಂದಲದಲ್ಲಿದ್ದಾರೆ. ಯಾಕೆಂದ್ರೆ ಅನಾಮಧೇಯ ಕಿಡಗೇಡಿಗಳ ಕೆಲಸಕ್ಕೆ ಪಟ್ಟಣದ ಸರ್ಕಾರಿ ಪ್ರೌಢ ಶಾಲೆ ವಿದ್ಯಾರ್ಥಿನಿಯರು ಮುಜುಗರ ಪಟ್ಟುಕೊಳ್ಳುವಂತಾಗಿದೆ.

ಪ್ರತಿನಿತ್ಯ ಎರಡ್ಮೂರು ಜನ ಬಾಲಕಿಯರನ್ನ ಗುರಿಯಾಗಿಸಿಕೊಂಡು ಗೋಡೆಬರಹ ಬರೆಯಲಾಗುತ್ತಿದೆ. ಅದೂ ಅಶ್ಲೀಲ ಪದಗಳನ್ನು ಬಳಸಿ ಗೋಡೆ ಬರಹ ಬರೆಯಲಾಗುತ್ತಿದೆ. ಇದ್ರಿಂದ ಆ ವಿದ್ಯಾರ್ಥಿನಿಯರಿಗೆ ತೀವ್ರ ಮುಜುಗರ ಆಗ್ತಿದೆ. ಯಾಕಂದ್ರೆ ಖುದ್ದು ವಿದ್ಯಾರ್ಥಿನಿಯರ ಹೆಸರನ್ನ ಬಳಸಿ ಅಶ್ಲೀಲ‌ ಪದ ಬಳಕೆ ಮಾಡ್ತಿರೋದು ಇನ್ನಿಲ್ಲದ ರೋದನೆಗೆ ಕಾರಣವಾಗ್ತಿದೆ.

ದಿನ ಬೆಳಗಾದ್ರೆ ಸಾಕು ಗೋಡೆ ಬರಹ ನೋಡಿ ವಿದ್ಯಾರ್ಥಿನಿಯರು ಕಣ್ಣೀರಿಡುತ್ತಿದ್ದಾರಂತೆ. ಅಲ್ಲದೇ ಈ ಬಗ್ಗೆ ಪೊಲೀಸರಿಗೆ ದೂರು ನೀಡಿದರೂ ಆ ಕಿಡಗೇಡಿಗಳನ್ನ ಇಲ್ಲಿಯವರೆಗೂ ಬಂಧಿಸದೇ ಇರೋದು ಇನ್ನಷ್ಟು ಆತಂಕ ಮೂಡಿಸಿದೆ. ಹೀಗಾದ್ರೆ ವಿದ್ಯಾರ್ಥಿನಿಯರು ಶಾಲೆಗೆ ಹೋಗೋದಾದ್ರು ಹೇಗೆ ಅಂತಿದ್ದಾರೆ ಪೋಷಕರು.

ಇನ್ನು ಕಳೆದ ನಾಲ್ಕೈದು ತಿಂಗಳಿನಿಂದ ನಿರಂತರವಾಗಿ ಈ ಅಶ್ಲೀಲ ಬರಹ ಬರೆಯಲಾಗುತ್ತಿದೆ. ಬೆಳಗಾದ್ರೆ ಸಾಕು ಶಾಲಾ ಸಿಬ್ಬಂದಿ ಅವುಗಳಿಗೆ ಬಣ್ಣ ಹಚ್ಚಿ ಅಳಿಸುತ್ತಿದ್ದಾರೆ. ಅತ್ತ ಶಾಲೆ ಗೋಡೆ ಮೇಲಿನ ಬರಹ ಅಳಿಸಿದ್ರೆ ಮತ್ತೊಂದು ಕಡೆ ಕಿಡಿಗೇಡಿಗಳು ತಮ್ಮ ಕೆಟ್ಟ ಚಟವನ್ನ ಮೆರೆಯುತ್ತಿದ್ದಾರೆ. ಅದರಲ್ಲೂ ಮೂರ್ನಾಲ್ಕು ಹುಡುಗಿಯರನ್ನೆ ಟಾರ್ಗೇಟ್ ಮಾಡ್ತಿರೋದು ಆತಂಕಕ್ಕೆ ಕಾರಣವಾಗಿದೆ.

ಆ ಮಕ್ಕಳು ಶಾಲೆಗೆ ಬರೋದೆ ಬೇಡ ಎನ್ನೋ ಚಿಂತೆ ಮಾಡ್ತಿದ್ದಾರಂತೆ. ಅಲ್ಲದೆ ಇದು ಶಾಲೆಯ ಬೇರೆ ವಿದ್ಯಾರ್ಥಿನಿಯರಿಗೂ ವ್ಯಾಪಿಸಿದ್ರೆ ಏನ್ ಗತಿ ಅನ್ನೋ ಚಿಂತೆ ಕಾಡ್ತಿದೆ. ಈ ಬಗ್ಗೆ ಕೊಪ್ಪಳ ಎಸ್ಪಿ ಯಶೋಧಾ ವಂಟಗೋಡಿ ಅವರನ್ನ ಕೇಳಿದ್ರೆ, ಪ್ರಕರಣವನ್ನ ಗಂಭೀರವಾಗಿ ತೆಗೆದುಕೊಂಡು ವಿಶೇಷ ತನೀಖಾ ತಂಡ ಮಾಡಿದ್ದೇವೆ ಎನ್ನುತ್ತಾರೆ.

ಇನ್ನು ಹಲವು ದಿನಗಳಿಂದ ಕಿಡಗೇಡಿಗಳು ಗೋಡೆ ಬರಹ ನಿಲ್ಲಿಸಿದ್ದರು. ಆದ್ರೆ ಮತ್ತೆ ಮೊನ್ನೆಯಿಂದ ಶುರು ಮಾಡಿದ್ದಾರೆ. ಆದ್ರೆ ಇಲ್ಲಿಯವರೆಗೂ ಸುಮಾರು ಜನರನ್ನ ಪೊಲೀಸರು ವಿಚಾರಣೆ ಮಾಡಿದ್ದರೂ ಯಾವುದೇ ಪ್ರಯೋಜನವಾಗಿಲ್ಲ. ಅದೇನೇ ಇರಲಿ ಇನ್ನಾದ್ರು ಕಿಡಿಗೇಡಿಗಳನ್ನ ಬಂಧಿಸಿ, ಇದ್ರಿಂದ ಮುಕ್ತಿ ಕೊಡಿಸಬೇಕು.