ಕಾಶ್ಮೀರ ಯುವಕರಲ್ಲಿ ಹೆಚ್ಚಾಗ್ತಿದೆ ಚುಚ್ಚುಮದ್ದಿನ ಹೆರಾಯಿನ್ ಬಳಕೆ: ವೈದ್ಯರ ಎಚ್ಚರಿಕೆ; ಪೋಷಕರ ಕಳವಳ

ಶ್ರೀನಗರ (ಜೂನ್ 27, 2023): ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ ಇತ್ತೀಚಿನ ವಿಡಿಯೋವೊಂದರಲ್ಲಿ ವಯಸ್ಸಾದ ಕಾಶ್ಮೀರಿಯೊಬ್ಬರು ಚರಸ್ (ಗಾಂಜಾ) ಪ್ರಭಾವದಿಂದ ತನ್ನ ಕುಟುಂಬದ ಯಾವುದೇ ಸದಸ್ಯರಿಗೆ ಅಥವಾ ಇತರರಿಗೆ ಹಾನಿಯಾಗದಂತೆ ತಡೆಯಲು ತನ್ನ (ಮಾದಕ ವ್ಯಸನಿ) ಮಗನನ್ನು ಬಂಧಿಸಿ ಎಂದು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇವರ ಮನವಿಯು ಕುಟುಂಬಗಳ ಅಸಹಾಯಕತೆಯನ್ನು ತೋರಿಸುತ್ತದೆ. ಅವರಲ್ಲಿ ಹೆಚ್ಚಿನವರು ತಮ್ಮ ಮಕ್ಕಳಿಗೆ ಮಾದಕ ದ್ರವ್ಯ ಅಭ್ಯಾಸ ಬಿಡಿಸಲು ಸಹಾಯ ಮಾಡಲು ಸಹ ಆಗುತ್ತಿಲ್ಲ. ಕಾಶ್ಮೀರದಲ್ಲಿ ಮಾದಕ ದ್ರವ್ಯ ಸೇವನೆಯು ಸಾಂಕ್ರಾಮಿಕವಾಗಿ ಮಾರ್ಪಟ್ಟಿದ್ದು, ಬಳಕೆದಾರರ ಸಂಖ್ಯೆ ಕ್ರಮೇಣ ಹೆಚ್ಚುತ್ತಿದೆ ಮತ್ತು ದುಬಾರಿ ಹೆರಾಯಿನ್ ಸೇರಿದಂತೆ ಮಾದಕವಸ್ತುಗಳು ಲಭ್ಯವಿವೆ ಎಂದೂ ವರದಿಯಾಗಿದೆ. 

ಜಮ್ಮು ಮತ್ತು ಕಾಶ್ಮೀರದಲ್ಲಿ ಸುಮಾರು ಹತ್ತು ಲಕ್ಷ ಯುವಕ-ಯುವತಿಯರಿದ್ದು, ಅವರು ವಿವಿಧ ಸೈಕೋಟ್ರೋಪಿಕ್‌ ಪದಾರ್ಥಗಳನ್ನು ಸೇವಿಸುತ್ತಿದ್ದಾರೆ ಎಂದು ತಿಳಿದುಬಂದಿದೆ. ಈ ಪೈಕಿ, 1.08 ಲಕ್ಷ ಪುರುಷರು ಮತ್ತು 36,000 ಮಹಿಳೆಯರು ಗಾಂಜಾ ಬಳಸುತ್ತಿದ್ದರೆ, 5.34 ಲಕ್ಷ ಪುರುಷರು ಮತ್ತು 8,000 ಮಹಿಳೆಯರು ಒಪಿಯಾಡ್ ಬಳಸುತ್ತಿದ್ದಾರೆ ಮತ್ತು 1.6 ಲಕ್ಷ ಪುರುಷರು ಹಾಗೂ 8,000 ಮಹಿಳೆಯರು ವಿವಿಧ ಸೆಡೇಟೀವ್ಸ್‌ ಬಳಸುತ್ತಿದ್ದಾರೆ ಎಂದು ಸಚಿವಾಲಯ ತಿಳಿಸಿದೆ. ಗಮನಾರ್ಹ ಸಂಖ್ಯೆಯ ಗಂಡು ಮತ್ತು ಹೆಣ್ಣು ಕೊಕೇನ್, ಆಂಫೆಟಮೈನ್-ಟೈಪ್ ಸ್ಟಿಮ್ಯುಲಂಟ್‌ಗಳು (ATS), ಮತ್ತು ಹಾಲ್ಯುಸಿನೋಜೆನ್‌ಗಳಿಗೆ ವ್ಯಸನಿಯಾಗಿದ್ದಾರೆ ಎಂದೂ ಹೇಳಲಾಗಿದೆ. 

ಕಾಶ್ಮೀರದಲ್ಲಿ 3 ಮ್ಯಾಟ್ರಿಸೈಡ್ ಪ್ರಕರಣಗಳು ವರದಿಯಾಗಿದ್ದು, ಅಂದರೆ ಮಾದಕ ವ್ಯಸನಿಗಳು ಆಕ್ರಮಣಕಾರಿಯಾಗಿ ಬದಲಾಗಿದ್ದಾರೆ ಎಂದರ್ಥ. ಈ ನಡವಳಿಕೆಯು “ಡ್ರಗ್ಸ್‌ನ ಕಡುಬಯಕೆ, ಚಡಪಡಿಕೆ” ಅಥವಾ ಇತರ ಸಂಬಂಧಿತ ಕಾರಣಗಳಿಂದ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಮಾರ್ಚ್ 29 ರಂದು ಬಾರಾಮುಲ್ಲಾದಲ್ಲಿ ಮಾದಕ ವ್ಯಸನಿಯಾಗಿದ್ದ ಮಗ ತಾಯಿಯನ್ನೇ ಕೊಂದಿದ್ದ. ಹಾಗೂ, ಮಾದಕ ವ್ಯಸನಿಯೊಬ್ಬ ಕಳೆದ ವರ್ಷ ಡಿಸೆಂಬರ್ 22 ರಂದು ಐಶ್ಮುಖಮ್ ಗ್ರಾಮದಲ್ಲಿ ತನ್ನ ತಾಯಿ ಮತ್ತು ಇತರ ಇಬ್ಬರನ್ನು ಕೊಂದಿದ್ದರೆ, ಕಳೆದ ವರ್ಷ ಅಕ್ಟೋಬರ್‌ನಲ್ಲಿ ಕೆಹ್ರಿಬಲ್‌ನಲ್ಲಿ ಮತ್ತೊಬ್ಬ ವ್ಯಸನಿ ತನ್ನ ತಾಯಿಯನ್ನು ಕೊಂದಿದ್ದಾನೆ. ಈ ಎರಡೂ ಘಟನೆಗಳು ದಕ್ಷಿಣ ಕಾಶ್ಮೀರದಲ್ಲಿ ನಡೆದಿವೆ.

“ಚುಚ್ಚುಮದ್ದು ಮಾಡಲಾಗುತ್ತಿರುವ ಹೆರಾಯಿನ್ ಇಂದು ಒಂದು ಸವಾಲಾಗಿದೆ. ಈ ರೋಗಿಗಳ ಸಂಖ್ಯೆಯಲ್ಲಿ ಏರಿಕೆಯನ್ನು ನಾವು ನೋಡಿದ್ದೇವೆ” ಎಂದು ಬೆಮಿನಾದ SKIMS ವೈದ್ಯಕೀಯ ಕಾಲೇಜಿನಲ್ಲಿ ಮನೋವೈದ್ಯಶಾಸ್ತ್ರ ವಿಭಾಗದ ಪ್ರೊ ಮತ್ತು ಮುಖ್ಯಸ್ಥ ಡಾ ಅಬ್ದುಲ್ ಮಜೀದ್ ಮಾದಕ ವ್ಯಸನ ಹೆಚ್ಚಾಗ್ತಿರೋ ಬಗ್ಗೆ ಆತಂಕ ವ್ಯಕ್ತಪಡಿಸಿದ್ದಾರೆ.

ಆದರೂ, ಪೋಷಕರು, ಕುಟುಂಬಗಳು ಮತ್ತು ಆರೋಗ್ಯ ಸೇವೆಗಳ ಪ್ರಯತ್ನ, ಪೊಲೀಸರು ಬಿಗಿ ಮಾಡುತ್ತಿರುವ ಹಿನ್ನೆಲೆ ವ್ಯಸನಿಗಳ ಸಂಖ್ಯೆ ಸ್ವಲ್ಪ ಕಡಿಮೆಯಾಗ್ತಿದ್ದಾರೆ ಎಂದೂ ಹೇಳಿದ್ದಾರೆ. ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಸಚಿವಾಲಯವು ಜಮ್ಮು ಮತ್ತು ಕಾಶ್ಮೀರದ ಹೆಚ್ಚಿನ ಜಿಲ್ಲೆಗಳಲ್ಲಿ ವ್ಯಸನ ಚಿಕಿತ್ಸಾ ಸೌಲಭ್ಯಗಳನ್ನು ತೆರೆಯುವ ಕಾರಣದಿಂದ ಆಸ್ಪತ್ರೆಗೆ ದಾಖಲಾಗ್ತಿರುವವರ ಸಂಖ್ಯೆ ಕಡಿಮೆಯಾಗಿರಬಹುದು ಎಂದೂ ಅವರು ಹೇಳುತ್ತಾರೆ.

ಮಾದಕ ವಸ್ತುಗಳ ಹಾವಳಿಯನ್ನು ಎದುರಿಸುವುದು ಆರೋಗ್ಯ ಮತ್ತು ಶಿಕ್ಷಣ ಇಲಾಖೆಗಳ ಜವಾಬ್ದಾರಿ. ಧಾರ್ಮಿಕ ಮುಖಂಡರು ಮತ್ತು ಬೋಧಕರು ಇದರ ಬಗ್ಗೆ ಮಾತನಾಡಬೇಕು ಎಂದೂ ಅವರು ಹೇಳಿದರು. ಕನಿಷ್ಠ 40-60 ಪ್ರತಿಶತ ರೋಗಿಗಳು ದ್ವಿತೀಯ ವೈದ್ಯಕೀಯ ಅಥವಾ ಮನೋವೈದ್ಯಕೀಯ ಸಮಸ್ಯೆಗಳನ್ನು ಹೊಂದಿದ್ದಾರೆ ಎಂದು ಡಾ ಅಬ್ದುಲ್ ಮಜೀದ್ ಹೇಳಿದರು. ಇದಲ್ಲದೆ, ಶ್ರೀನಗರದ ಸೆಂಟ್ರಲ್ ಜೈಲಿನಲ್ಲಿ SKIMS ಸಹಯೋಗದೊಂದಿಗೆ ಔಷಧ ಚಿಕಿತ್ಸಾ ಕೇಂದ್ರವು ಕಾರ್ಯನಿರ್ವಹಿಸುತ್ತಿದ್ದು, ಅಲ್ಲಿ 320 ಮಾದಕ ವ್ಯಸನಿಗಳಲ್ಲಿ 80 ಜನ ಹೆಪಟೈಟಿಸ್‌ನಿಂದ ಬಳಲುತ್ತಿದ್ದಾರೆ ಎಂದೂ ಹೇಳಿದ್ದಾರೆ.