ಹಳಿಯಾಳದಲ್ಲಿ ನಾಡಪ್ರಭು ಶ್ರೀ. ಕೆಂಪೇಗೌಡರ ಜಯಂತಿ

ಹಳಿಯಾಳ : ತಾಲ್ಲೂಕಾಡಳಿತ, ತಾ.ಪಂ, ಪುರಸಭೆ ಹಾಗೂ ಶಿಕ್ಷಣ ಇಲಾಖೆಯಿಂದ ಹಳಿಯಾಳ ಪಟ್ಟಣದ ತಹಶೀಲ್ದಾರ್ ಕಛೇರಿಯ ಸಭಾಂಗಣದಲ್ಲಿ ಇಂದು‌ ಗಂಟೆಗೆ ನಾಡಪ್ರಭು ಶ್ರೀ.ಕೆಂಪೇಗೌಡರ 514 ನೇ ಜಯಂತಿಯನ್ನು ಆಚರಿಸಲಾಯಿತು.

ನಾಡಪ್ರಭು ಶ್ರೀ.ಕೆಂಪೇಗೌಡರ ಭಾವಚಿತ್ರಕ್ಕೆ ಪುಷ್ಪಗೌರವವನ್ನು ಸಲ್ಲಿಸಿ ಮಾತನಾಡಿದ ಶಾಸಕರಾದ ಆರ್ ವಿ ದೇಶಪಾಂಡೆ ಅವರು ಬೆಂಗಳೂರಿನ ನಿರ್ಮಾತೃ ನಾಡಪ್ರಭು ಕೆಂಪೇಗೌಡರವರಾಗಿದ್ದರು. ಸೃಷ್ಟಿಯಲ್ಲಿ ಸರ್ವರೂ ಸಮಾನರು ಎಂಬ ತತ್ವವನ್ನರಿತಿದ್ದ ಕೆಂಪೇಗೌಡರು ಪ್ರಕೃತಿಯಲ್ಲಿ ಸಮತೋಲನವಿರಬೇಕಾದರೆ ಮಾನವ ಸೃಷ್ಟಿಯ ಜೊತೆಗೆ ಜೀವ ಸಂಕುಲಗಳು, ಜೀವ ವೈವಿದ್ಯಗಳು ಸಾಮರಸ್ಯದಿಂದಿರಬೇಕೆನ್ನುವ ಉದ್ದೇಶದಿಂದ ಹಲವಾರು ಕೆರೆ ಕಟ್ಟೆಗಳನ್ನು ನಿರ್ಮಿಸಿ ಜೀವ ವೈವಿದ್ಯತೆಯನ್ನು ಸಮತೋಲನದಲ್ಲಿರಿಸಿದ್ದರು. ಕಲೆ,ಕ್ರೀಡೆ,ಸಾಹಿತ್ಯ, ಪ್ರಕೃತಿ ಸಂರಕ್ಷಣೆಯ ಅಗ್ರ ರೂವಾರಿಯಾಗಿದ್ದ ನಾಡಿನ ಧೀರೋದತ್ತ ನಾಡಪ್ರಭು ಕೆಂಪೇಗೌಡರ ದೂರದೃಷ್ಟಿ, ಸಮರ್ಥ ಹಾಗೂ ಜನಪರ ಆಡಳಿತ ನಮ್ಮಲ್ಲರಿಗೂ ಸದಾ ಪ್ರೇರಣೆಯಾಗಿದೆ‌ ಎಂದರು.

ನಿವೃತ್ತ ಪ್ರಾಚಾರ್ಯರಾದ ಸುರೇಶ್ ಕಡೆಮನೆಯವರು ಕೆಂಪೇಗೌಡ ಅವರ ನಾಡಸೇವೆಯನ್ನು ಮತ್ತು ವ್ಯಕ್ತಿತ್ವವನ್ನು ವಿವರಿಸಿದರು.

ವೇದಿಕೆಯಲ್ಲಿ ಗ್ರೇಡ್ 2 ತಹಶೀಲ್ದಾರ್ ಜಿ.ಕೆ ರತ್ನಾಕರ್, ತಾ.ಪಂ ಕಾರ್ಯ ನಿರ್ವಹಣಾಧಿಕಾರಿ ಪರಶುರಾಮ ಗಸ್ತೆ, ಪುರಸಭೆಯ ಮುಖ್ಯಾಧಿಕಾರಿ ಅಶೋಕ್ ಸಾಳೆನ್ನವರ್, ಪುರಸಭೆಯ ನಿಕಟ ಪೂರ್ವ ಅಧ್ಯಕ್ಷ ಅಜರ್ ಬಸರಿಕಟ್ಟಿ, ನಿಕಟ ಪೂರ್ವ ಉಪಾಧ್ಯಕ್ಷೆ ಸುವರ್ಣ ಮಾದರ್ ಉಪಸ್ಥಿತರಿದ್ದರು