ಹಳಿಯಾಳ :ಹಳಿಯಾಳ ತಾಲೂಕಿನ ಮಂಗಳವಾಡದಲ್ಲಿ ಪರಿಸರ ಜಾಗೃತಿ ಕಾರ್ಯಕ್ರಮ

ಹಳಿಯಾಳ : ತಾಲ್ಲೂಕಿನ ಮಂಗಳವಾಡ ಗ್ರಾಮದ ಸ.ಹಿಪ್ರಾ ಶಾಲೆಯಲ್ಲಿ ಸ್ಥಳೀಯ ಸೃಷ್ಟಿ ಇಕೋ ಕ್ಲಬ್ ಆಶ್ರಯದಡಿ ಇಂದು ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ಪರಿಸರ ಜಾಗೃತಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು.

ಶಾಲಾ ಮುಖ್ಯೋಪಾಧ್ಯಯಿನಿ ನಾಗರತ್ನ ನಾಗೇಶ್ರಿಯವರು ಕಾರ್ಯಕ್ರಮಕ್ಕೆ ಚಾಲನೆಯನ್ನು ನೀಡಿ ಮಾತನಾಡುತ್ತಾ, ಪರಿಸರ ಇದ್ದರೇ ನಾವು ಎನ್ನುವ ಪ್ರಜ್ಞೆ ಪ್ರತಿಯೊಬ್ಬರಲ್ಲಿ ಇರಬೇಕು. ಆದರೆ ಇಂದು ಮಾನವನ ದುರಾಸೆಯ ಫಲವಾಗಿ ಸಮೃದ್ಧ ಪರಿಸರ ಬರಿದಾಗುತ್ತಿದೆ. ಈ ನಿಟ್ಟಿನಲ್ಲಿ ನಾವು ನೀವೆಲ್ಲರೂ ಪರಿಸರ ಸಂರಕ್ಷಣೆಗೆ ಹೆಚ್ಚಿನ ಆಧ್ಯತೆ ನೀಡಬೇಕೆಂದು ಕರೆ ನೀಡಿದರು,

ಸೃಷ್ಟಿ ಇಕೋ ಕ್ಲಬಿನ ಸಂಚಾಲಕಿ ಹಾಗೂ ಶಿಕ್ಷಕಿ ಭಾರತಿ ನಲವಡೆಯವರು ಮಾತನಾಡಿ ವಿದ್ಯಾರ್ಥಿ ಜೀವನದಲ್ಲೆ ಪರಿಸರದ ಬಗ್ಗೆ ಭಯ, ಭಕ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಮರ ಗಿಡಗಳ ಬಗ್ಗೆ ಪೂಜ್ಯ ಭಾವನೆಯನ್ನು ಮೈಗೂಡಿಸಿಕೊಂಡಾಗ ಪರಿಸರ ಸಂರಕ್ಷಣೆ ಸಾಧ್ಯ ಎಂದು ಹೇಳಿ ಪರಿಸರ ನಾಶದಿಂದಾಗುವ ಸಮಸ್ಯೆಗಳ ಬಗ್ಗೆ ವಿದ್ಯಾರ್ಥಿಗಳಿಗೆ ಮನವರಿಕೆ ಮಾಡಿದರು.

ಈ ಸಂದರ್ಭದಲ್ಲಿ ಶಾಲಾ ಶಿಕ್ಷಕರು ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಶಾಲಾ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿದ್ದರು.