ಗಂಡನ ಅಕ್ರಮ ಸಂಬಂಧ, ಕಿರುಕುಳಕ್ಕೆ ಬೇಸತ್ತು ಫೇಸ್‌ಬುಕ್‌ ಲೈವ್‌ ನಲ್ಲೇ ಆತ್ಮಹತ್ಯೆ ಮಾಡಿಕೊಂಡ ಪತ್ನಿ!

ಹೈದರಾಬಾದ್: ಪತಿಯ ಕಿರುಕುಳಕ್ಕೆ ಬೇಸತ್ತು ಮಹಿಳೆಯೊಬ್ಬರು ಫೇಸ್‌ ಬುಕ್‌ ಲೈವ್‌ ನಲ್ಲೇ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ. ಟೆಕ್ಕಿಯಾಗಿದ್ದ ಮಹಿಳೆ, ನನ್ನ ಗಂಡನಿಗೆ ವಿವಾಹೇತರ ಸಂಬಂಧವಿದೆ ಎಂದು ಆರೋಪಿಸಿ ಫೇಸ್‌ಬುಕ್ ಲೈವ್‌ನಲ್ಲೇ ಆತ್ಮಹತ್ಯೆಮಾಡಿಕೊಂಡಿದ್ದಾರೆ. ಹೈದರಾಬಾದ್ ಮೂಲದ ಸನಾ( 32) ಮೃತ ಮಹಿಳೆ. ಕಳೆದ 5 ವರ್ಷಗಳ ಹಿಂದೆ ಸನಾ ತನ್ನ ಶಾಲಾ ಸಹಪಾಠಿಯಾಗಿದ್ದ ಹೇಮಂತ್‌ ಎನ್ನುವವರನ್ನು ವಿವಾಹವಾಗಿದ್ದರು. ಆ ಸಮಯದಲ್ಲಿ ಹೇಮಂತ್ ನಿರುದ್ಯೋಗಿಯಾಗಿದ್ದರು. ಸನಾ ಆಗ ದೆಹಲಿಯ ಏರ್‌ಲೈನ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರು.

ವಿವಾಹದ ಬಳಿಕ ಹೇಮಂತ್‌ ಬೇರೆ ಮಹಿಳೆಯೊಂದಿಗೆ ಅಕ್ರಮ ಸಂಬಂಧವನ್ನಿಟ್ಟುಕೊಂಡಿದ್ದ. ಇದೇ ಕಾರಣದಿಂದ ಬೇಸತ್ತು ಹೋಗಿದ್ದ ಸನಾ ಫೇಸ್‌ ಬುಕ್‌ ಲೈವ್‌ ನಲ್ಲೇ ಸನಾ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ವೇಳೆ ಅವರು ಗಂಡನ ವಿರುದ್ಧ ಕಿರುಕುಳದ ಆರೋಪವನ್ನು ಮಾಡಿದ್ದಾರೆ ಎಂದು ತಿಳಿದುಬಂದಿದೆ.

ಸನಾ ಮನೆಯವರು ಆಕೆಯ ಆತ್ಮಹತ್ಯೆಗೆ ಹೇಮಂತ್ ಕಾರಣ ಎಂದು ಆರೋಪಿಸಿದ್ದಾರೆ. ಪ್ರಸ್ತುತ, ಹೇಮಂತ್ ಅವರು ಅಬಿಡ್ಸ್ ವಾಣಿಜ್ಯ ಕೇಂದ್ರದಲ್ಲಿ ಡಿಸ್ಕ್ ಜಾಕಿಯಾಗಿ (ಡಿಜೆ) ಕೆಲಸ ಮಾಡುತ್ತಿದ್ದಾನೆ ಮತ್ತು ಡಿಜೆ ಆಗಿರುವ ಇನ್ನೊಬ್ಬ ಮಹಿಳೆಯೊಂದಿಗೆ ವಿವಾಹೇತರ ಸಂಬಂಧದಲ್ಲಿ ತೊಡಗಿಸಿಕೊಂಡಿದ್ದಾನೆ ಎಂದು ಅವರ ಸಹೋದರ ಹೇಳಿದರು. ಹೇಮಂತ್ ಹಾಗೂ ಆತನ ಪೋಷಕರ ವಿರುದ್ಧ ಕಿರುಕುಳ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ ಎಂದು ನಾಚಾರಂ ಪೊಲೀಸರು ತಿಳಿಸಿದ್ದಾರೆ. ಸಂತ್ರಸ್ತೆಯ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಹೆಚ್ಚಿನ ತನಿಖೆ ನಡೆಯುತ್ತಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ವಿವಾಹೇತರ ಸಂಬಂಧ ಅನ್ನೋದು ಇತ್ತೀಚಿಗೆ ತುಂಬಾ ಸಾಮಾನ್ಯವಾಗ್ತಿದೆ. ಮನೆಯಲ್ಲಿ ಮುತ್ತಿನಂಥಾ ಹೆಂಡ್ತಿ, ಪ್ರೀತಿಯಿಂದ ನೋಡಿಕೊಳ್ಳುವ ಗಂಡನಿದ್ದರೂ ಗಂಡು-ಹೆಣ್ಣು ಇಬ್ಬರು ಅನೈತಿಕ ಸಂಬಂಧದ ಮೊರೆ ಹೋಗುತ್ತಾರೆ. ಹಲವಾರು ವರ್ಷಗಳ ಕಾಲ ಪ್ರೀತಿ ಮಾಡಿದವರೂ ಹೀಗೆ ಮೋಸ ಮಾಡುವುದಿದೆ. ಗಂಡ ಹೀಗೆ ಮತ್ತೊಬ್ಬಳ ಜೊತೆ ಸಂಬಂಧವಿಟ್ಟುಕೊಂಡಾಗ ಹೆಣ್ಣು ಹೈರಾಣಾಗುತ್ತಾಳೆ. ನಂಬಿಕೆ ಕಳೆದುಕೊಂಡು ಮನಸ್ಸು ಛಿದ್ರ ಛಿದ್ರವಾಗುತ್ತದೆ. ಯಾರಲ್ಲೂ ಹೇಳಿಕೊಳ್ಳಲಾಗದೆ ಒದ್ದಾಡಬೇಕಾಗುತ್ತದೆ. ಹಾಗೆಂದ ಮಾತ್ರಕ್ಕೆ ಇದಕ್ಕೆ ಆತ್ಮಹತ್ಯೆಯೊಂದೇ ಪರಿಹಾರವಲ್ಲ. ತನಗಾಗ್ತಿರೋ ಅನ್ಯಾಯದ ವಿರುದ್ಧ ಹೆಣ್ಣೇ ಧ್ವನಿಯೆತ್ತಬೇಕು. ಪೊಲೀಸರಿಗೆ ದೂರು ಕೊಡಬೇಕು. ನ್ಯಾಯಕ್ಕಾಗಿ ಹೋರಾಡಬೇಕು.

ಮದುವೆಯೆಂದಾಗ ಅಲ್ಲಿ ಸಮಸ್ಯೆಗಳು ಬಂದೇ ಬರುತ್ತವೆ. ಕೆಲವೊಮ್ಮೆ ಚಿಕ್ಕಪುಟ್ಟ ಸಮಸ್ಯೆಗಳು. ಇನ್ನು ಕೆಲವೊಮ್ಮೆ ಬಗೆಹರಿಸಲಾಗದ ದೊಡ್ಡ ಸಮಸ್ಯೆಗಳು. ಆದರೆ ಇದ್ಯಾವುದಕ್ಕೂ ಆತ್ಮಹತ್ಯೆ ಪರಿಹಾರವಲ್ಲ. ಇಂಥಾ ಸಮಸ್ಯೆ ಕಂಡು ಬಂದಾಗ ಹೆಣ್ಣು ಇದನ್ನು ದಿಟ್ಟವಾಗಿ ಎದುರಿಸಲು ಕಲಿಯಬೇಕು. ಸಣ್ಣ ತಪ್ಪಾದರೆ ಕ್ಷಮಿಸಿ, ದೊಡ್ಡ ತಪ್ಪಾದರೆ ಆತನ ಜನ್ಮ ಜಾಲಾಡಿ ಸಂಬಂಧ ಬಿಟ್ಟು ಹೊಸ ಬದುಕನ್ನು ಕಂಡುಕೊಳ್ಳಬೇಕು. ಅದು ಬಿಟ್ಟು ಆತ ಮಾಡಿದ ತಪ್ಪಿಗೆ ಈಕೆ ಜೀವನವನ್ನು ಬಲಿ ಕೊಡುವುದು ಎಷ್ಟು ಸರಿ. ಅಲ್ಲಿ ಕೊನೆಯಾಗಿದ್ದು ಆತನ ಬದುಕಲ್ಲ. ಆಕೆಯದ್ದು ಮಾತ್ರ. ಜೊತೆಗೆ ಕೊನೆಯಾಗಿದ್ದು ಮಗಳನ್ನು ಹೆತ್ತು ಹೊತ್ತು ಗಿಣಿಯಂತೆ ಸಾಕಿ ಸಲಹಿದ ಅಪ್ಪ-ಅಮ್ಮನ ಆಸೆಗಳು, ಒಡಹುಟ್ಟಿದವರು, ಸ್ನೇಹಿತರ ಕಣ್ಣಲ್ಲಿ ಕೊನೆಯಿಲ್ಲದ ಕಣ್ಣೀರು.