ಹಾವೇರಿಯಲ್ಲಿ ಹನಿ ನೀರಿಗೂ ಹಾಹಾಕಾರ; ಆಹಾರಕ್ಕಾಗಿ ಒಣ ಜಮೀನಿಗೆ ನುಗ್ಗಿದ ಚಿಂತೆಗಳ ನರಳಾಟ

ಹಾವೇರಿ ಜಿಲ್ಲೆಯಲ್ಲಿ ವರುಣನ ದರ್ಶನವೇ ಆಗುತ್ತಿಲ್ಲ. ಒಂದು‌ ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಭೂ ತಾಯಿ ಒಡಲು ತಂಪು ಮಾಡಬೇಕಿದ್ದ ಮಳೆರಾಯನೇಕೋ ಈ ಬಾರಿ ಮುನಿಸಿಕೊಂಡಿದ್ದಾನೆ.

ಹನಿ ನೀರಿಲ್ಲದೇ ಭೂತಾಯಿ ಒಣಗಿದ್ದಾಳೆ. ಬರಗಾಲದ ಛಾಯೆ ಆವರಿಸಿದೆ. ಬಿಸಿಲ ಬೇಗೆಗೆ ನೀರಲ್ಲದೇ ಅದೆಷ್ಟೋ ಪ್ರಾಣಿ ಪಕ್ಷಿಗಳು, ಜಾನುವಾರುಗಳು ಕಂಗೆಟ್ಟು ಹೋಗಿವೆ. ಕೆರೆ, ಬಾವಿ, ನದಿ ಯಾವುದರಲ್ಲೂ ತೊಟ್ಟು ನೀರಿಲ್ಲ.

ಹಾವೇರಿ ಜಿಲ್ಲೆಯ ಹೊರಭಾಗದಲ್ಲಿ ಕುಡಿಯುವ ನೀರಿಗಾಗಿ ಜಿಂಕೆಗಳು ಪರದಾಡುತ್ತಿರುವ ಮನಕಲಕುವ ದೃಶ್ಯಗಳು ಕಂಡುಬಂದಿವೆ. ತಿನ್ನಲು ಹಸಿರು ಹುಲ್ಲು ಹಾಗೂ ಕುಡಿಯಲು ನೀರಿಗಾಗಿ ಚಿಂಕೆಗಳು ಅಲೆದಾಡುತ್ತಿವೆ.

ಒಣ ಜಮೀನಿನಲ್ಲಿ ಜಿಂಕೆಗಳ ಗುಂಪೊಂದು ಹಸಿರು ಹುಲ್ಲು ಕಾಣದೆ ಕಂಗಾಲಾಗಿವೆ. ಪ್ರತಿ ವರ್ಷ ಮುಂಗಾರು ಆರಂಭ ಆಗಿ ಇಷ್ಟೊತ್ತಿಗೆ ಒಳ್ಳೆಯ ಹುಲ್ಲು ಬೆಳೆಯುತ್ತಿತ್ತು. ಆದ್ರೆ ಈ ವರ್ಷ ಮುಂಗಾರು ವ್ಯತ್ಯಯವಾಗಿರುವುದರಿಂದ ಆಹಾರದ ನಿರೀಕ್ಷೆಯಲ್ಲಿ ಬಂದ ಚಿಂಕೆಗಳು ಕಂಗಾಲಾಗಿವೆ.

ಹಾವೇರಿ ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಜಿಂಕೆಗಳಿವೆ. ಮಳೆ ಚನ್ನಾಗಿಯಾದ್ರೆ ಚಿಂತೆಗಳು ಈ ರೀತಿ ರಸ್ತೆ, ಜಮೀನುಗಳಲ್ಲಿ ಕಂಡುಬರುವುದಿಲ್ಲ. ಆದ್ರೆ ಈ ಬಾರಿ ಮಳೆಯಿಲ್ಲದ ಅವುಗಳು ಕೂಡ ಪರಿತಪಿಸುತ್ತಿವೆ.

ಮೂಕ ಪ್ರಾಣಿಗಳು ನೀರಿಗಾಗಿ, ಆಹಾರಕ್ಕಾಗಿ ಈ ರೀತಿ ಅಲೆದಾಡುವ ದೃಶ್ಯ ಮನಕಲಕುವಂತಿದೆ. ಹೀಗಾಗಿ ವರುಣನ ಆಗಮನಕ್ಕೆ ಅನೇಕ ಕಡೆ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.