ಈ ಮಾಯಾ ಲೇಡಿಯನ್ನು ಹಿಡಿದುಕೊಟ್ಟರೆ ನಗದು ಬಹುಮಾನ ಕೊಡ್ತೀವಿ ಎಂದು ಘೋಷಿಸಿದ ಆಂಧ್ರ ಪೊಲೀಸರು

ಆಕೆ ಸಾಮಾನ್ಯ ವ್ಯಕ್ತಿಯಲ್ಲ. ಜಂತರ್ ಮಂತರ್ ಜಾದೂ ಕಿಲಾಡಿ. ಕಳ್ಳಕಾಕರ ಮಾರಿ. ಪರಿಚಯವಾದ ಸ್ವಲ್ಪ ಸಮಯದಲ್ಲೇ ಪದಗಳ ಪೋಣಿಸಿ, ಆತ್ಮೀಯತೆಯ ಸಂಪರ್ಕ ಬೆಳೆಸುತ್ತಾಳೆ. ತುಂಬಾ ಸಭ್ಯ ವ್ಯಕ್ತಿಯಂತೆ ಕಾಣುತ್ತಾರೆ. ಅದೇ ವೇಳೆ ಸಮಯ ಸಾಧಿಸಿ, ಕಾರ್ಯರೂಪಕ್ಕೆ ಇಳಿದು ಎದುರಿಗಿದ್ದವರನ್ನು ದೋಚುತ್ತಾಳೆ. ಒಂದಲ್ಲ.. ಎರಡಲ್ಲ.. ಈ ಮಾಯಾ ಮಹಿಳೆಯ ಮೇಲೆ ಹಲವು ಪ್ರಕರಣಗಳಿವೆ. ಪೊಲೀಸರ ಕಣ್ತಪ್ಪಿಸಿ ಅಲೆದಾಡುತ್ತಿರುವ ಈ ಮೋಸ್ಟ್ ವಾಂಟೆಡ್ ಮಹಿಳೆಯ ಬಗ್ಗೆ ಮಾಹಿತಿ ನೀಡಿದರೆ ನಗದು ಬಹುಮಾನ ನೀಡುವುದಾಗಿ ಪೂರ್ವ ಗೋದಾವರಿ ಜಿಲ್ಲಾ ಪೊಲೀಸರು ಘೋಷಿಸಿದ್ದಾರೆ. ಆಕೆಯನ್ನು ಹಿಡಿದರೆ 10 ಸಾವಿರ ರೂಪಾಯಿ ಕೊಡುತ್ತೇವೆ ಎಂದಿದ್ದಾರೆ. ಒಂಟಿ ಮಹಿಳೆಯರಿಗೆ ಮಾದಕ ವಸ್ತು ನೀಡಿ ದರೋಡೆ ಮಾಡುತ್ತಿದ್ದ ಆರೋಪವೂ ಆಕೆಯ ಮೇಲಿದೆ.

ಇನ್ನೂ ಅವಳ ಹೆಸರು ಗೊತ್ತಾಗಲಿಲ್ಲ ಅಲ್ಲವೇ? ಅವಳೇ ಜಗದಾಂಬ ಅಲಿಯಾಸ್ ಬುಜ್ಜಿ! ನಿಮಗೆ ಚೆನ್ನಾಗಿ ಪರಿಚಯ ಇರುವವಳಂತೆ ಮಾತಿಗೆ ಇಳಿಯುತ್ತಾಳೆ. ಅಕ್ಕ ಪಕ್ಕ ಬಂದು ಕುಳಿತು ನಿಮ್ಮ ಯೋಗಕ್ಷೇಮ ವಿಚಾರಿಸುತ್ತಾಳೆ. ನಿಮ್ಮ ಆಶೀರ್ವಾದ ಬೇಡುತ್ತಾಳೆ. ಆಗಲೇ ತನ್ನ ಕೃತ್ರಿಮ ಬುದ್ಧಿ ತೋರಿ ಒಂಟಿ ಮಹಿಳೆಯರಿಗೆ ನಿದ್ದೆ ಮಾತ್ರೆ ಬೆರೆಸಿದ ತಂಪು ಪಾನೀಯ ನೀಡಿ ಪ್ರಜ್ಞೆ ತಪ್ಪುವಂತೆ ಮಾಡುತ್ತಾಳೆ. ಬಳಿಕ ಚಿನ್ನಾಭರಣ ಹಾಗೂ ನಗದನ್ನು ಕದ್ದು ಅಲ್ಲಿಂದ ಪರಾರಿಯಾಗುತ್ತಾಳೆ.

ಈ ಆರೋಪಿ ಮಹಿಳೆಯನ್ನು ಹಲವು ರೀತಿಯಲ್ಲಿ ಹುಡುಕಿ ಸುಸ್ತಾಗಿರುವ ಪೊಲೀಸರು ಕೊನೆಗೂ ಆಕೆಯನ್ನು ಹಿಡಿದುಕೊಟ್ಟವರಿಗೆ ನಗದು ಬಹುಮಾನ ಘೋಷಿಸಿದ್ದಾರೆ. ಮೇಲಿನ ಫೋಟೊದಲ್ಲಿರುವ ಮಹಿಳೆ ಜಗದಂಬಾ ನಿಮ್ಮ ಕಣ್ಣಿಗೆ ಕಂಡರೆ ದಯವಿಟ್ಟು 9491326456 ಅಥವಾ 996333265 ಅನ್ನು ಸಂಪರ್ಕಿಸಿ, ಮಾಹಿತಿ ನೀಡಿ.