ಎಸ್ ಟಿ ಮೀಸಲಾತಿ ವಿಚಾರದಲ್ಲಿ ನನ್ನನ್ನು ಗೇಲಿ ಮಾಡಿದವರಿಗೆ ಉತ್ತರ ಸಿಕ್ಕಿದೆ – ಶ್ರೀ ರಾಮುಲು

ಬೆಂಗಳೂರು: ಎಸ್ ಟಿಗೆ ಮೀಸಲಾತಿ ವಿಚಾರದಲ್ಲಿ ನನ್ನನ್ನು ಗೇಲಿ ಮಾಡಿದವರಿಗೆ ಉತ್ತರ ಸಿಕ್ಕಿದೆ ಎಂದು ಸಾರಿಗೆ ಸಚಿವ ಬಿ ಶ್ರೀ ರಾಮುಲು ಟಾಂಗ್ ನೀಡಿದ್ದಾರೆ.

ಈ ಕುರಿತು ಮಾತನಾಡಿದ ಶ್ರೀರಾಮಲು, ಎಸ್ ಟಿಯವರಿಗೆ ಮೀಸಲಾತಿ ಹೆಚ್ಚಿಸುವುದಾಗಿ ರಕ್ತದಲ್ಲಿ ಬರೆದುಕೊಡುತ್ತೇನೆ ಎಂದು ಹೇಳಿದ್ದೆ. ಭರವಸೆ ಭರವಸೆಯಾಗಿಯೇ ಉಳಿದಿದೆ ಎಂದು ನನ್ನ ಬಂಧುಗಳೇ ನನ್ನನ್ನು ಆಡಿಕೊಂಡಿದ್ದರು. ಆದರೂ ನನ್ನ ಮೀಸಲಾತಿ ಹೆಚ್ಚಳ ಬೇಡಿಕೆ ಮಾತ್ರ ನನ್ನ ಕೈಬಿಡಲಿಲ್ಲ. ಎಸ್ ಟಿ ಮೀಸಲಾತಿಯನ್ನು ಶೇ. 3 ರಿಂದ 7 ಕ್ಕೆ ಹೆಚ್ಚಿಸುವುದಾಗಿ ಸಿಎಂ ಬಸವರಾಜ್ ಬೊಮ್ಮಾಯಿ ಘೋಷಣೆ ಮಾಡಿದ್ದಾರೆ. ಸರ್ಕಾರ ಕೊಟ್ಟಮಾತಿನಂತೆ ನಡೆದುಕೊಂಡಿದ್ದು, ನನ್ನನ್ನು ಗೇಲಿ ಮಾಡುತ್ತಿದ್ದವರಿಗೆ ಸೂಕ್ತ ಉತ್ತರ ಸಿಕ್ಕಿದೆ ಎಂದು ಹೇಳಿದ್ದಾರೆ.

ಇನ್ನೂ ಎಸ್ ಸಿ ಮೀಸಲಾತಿ ಶೇ.15 ರಿಂದ ಶೇ.17 ಕ್ಕೆ ಹೆಚ್ಚಿಸಲು ಹಾಗೂ ಎಸ್ ಟಿ ಮೀಸಲಾತಿ ಪ್ರಮಾಣ ಶೇ.3 ರಿಂದ 7 ಕ್ಕೆ ಹೆಚ್ಚಿಸಲು ರಾಜ್ಯ ಸರ್ಕಾರ ತೀರ್ಮಾನ ಕೈಗೊಂಡಿದ್ದು, ಶೀಘ್ರದಲ್ಲೇ ಜಾರಿಗೆ ಬರಲಿದೆ.