ಸಿದ್ದರಾಮಯ್ಯನವರ ‘ಉಗ್ರಭಾಗ್ಯ’ದಿಂದ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ: ಸಿದ್ದು ಹೇಳಿಕೆಗೆ ಸಿಟಿ ರವಿ ತಿರುಗೇಟು

ಬೆಂಗಳೂರು: ಆರ್ ಎಸ್ ಎಸ್ ನಿಷೇಧಿಸಬೇಕು ಎಂಬ ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿಕೆಗೆ ಶಾಸಕ ಸಿಟಿ ರವಿ ತಿರುಗೇಟು ನೀಡಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಶಾಸಕ ಸಿಟಿ ರವಿ, ಸಿದ್ದರಾಮಯ್ಯ ಜಾರಿಗೆ ತಂದಿದ್ದ ‘ಉಗ್ರಭಾಗ್ಯ’ ಯೋಜನೆಯಿಂದಾಗಿ 32ಕ್ಕೂ ಹೆಚ್ಚು ಹಿಂದೂ ಕಾರ್ಯಕರ್ತರ ಹತ್ಯೆಯಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಿದ್ದರಾಮಯ್ಯನವರೇ ತಾತ್ಕಾಲಿಕ ರಾಜಕೀಯ ಲಾಭಕ್ಕಾಗಿ ಭಾರತವನ್ನು ನಾಶ ಮಾಡಿ ನೀವೂ ನಾಶವಾಗಬೇಡಿ. ಎಲ್ ಟಿ ಇ ಈ ಯೊಂದಿಗೆ ಹಾವು ಏಣಿ ಆಟದ ಪರಿಣಾಮ ರಾಜೀವ್ ಗಾಂಧಿ ಬಲಿಯಾಗಬೇಕಾಯಿತು. ಆಜಾದಿ ಎಂದು ಘೋಷಣೆ ಕೂಗುವುದು ಇಂಟರ್ ನ್ಯಾಷನಲ್ ಟೂಲ್ ಕಿಟ್ ಆಗಿದೆ ಎಂದು ವಾಗ್ದಾಳಿ ನಡೆಸಿದರು.

ಸುಣ್ಣ ಮತ್ತು ಬೆಣ್ಣೆ ಗುರುತಿಸದ ಸ್ಥಿತಿಗೆ ಸಿದ್ದರಾಮಯ್ಯ ಬಂದಿದ್ದಾರೆ ಅನಿಸುತ್ತೆ. ರಾಷ್ಟ್ರಭಕ್ತರು ಯಾರು.? ರಾಷ್ಟ್ರದ್ರೋಹಿಗಳು ಯಾರೆಂದು ತಿಳಿಯಲಾಗದ ಸ್ಥಿತಿ ಇವರಿಗೆ. ಮೊದಲು ಈ ಮನಸ್ಥಿತಿಯಿಂದ ಹೊರಬರಲಿ. ಇಲ್ಲವಾದಲ್ಲಿ ಕಾಂಗ್ರೆಸ್ ಗೆ ಉಳಿಗಾಲವಿಲ್ಲ. ಆರ್ ಎಸ್ ಎಸ್ ಯಾವ ವಿಧ್ವಂಸಕ ಕೃತ್ಯದಲ್ಲಿ ತೊಡಗಿದೆ ಎಂಬುದನ್ನು ಸಿದ್ದರಾಮಯ್ಯ ಹೇಳಲಿ. ಆರ್ ಎಸ್ ಎಸ್ ಬ್ಯಾನ್ ಮಾಡಬೇಕು ಎಂದು ಹೇಗೆ ಅವರು ಹೇಳಿದರು.? ಕೇವಲ ರಾಜಕೀಯ ತೆವಲಿಗೆ ಹೇಳಿಕೆ ನೀಡುವುದನ್ನು ಮೊದಲು ನಿಲ್ಲಿಸಲಿ ಎಂದು ಹಿಗ್ಗಾಮುಗ್ಗಾ ಕಿಡಿಕಾರಿದ್ದಾರೆ.