‘ಸೇವಾಭಿನಂದನ’ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಎನ್.ಬಿ.ಹೆಗಡೆ ಮತ್ತಿಹಳ್ಳಿ ಅವರಿಗೆ ಹೃದಯಸ್ಪರ್ಶಿ ಸನ್ಮಾನ

ಸಿದ್ದಾಪುರ: ತಾಲೂಕಿನ ತ್ಯಾಗಲಿ ಗ್ರೂಪ್ ಗ್ರಾಮಗಳ ಸೇವಾ ಸಹಕಾರಿ ಸಂಘದ ವತಿಯಿಂದ ಮಂಗಳವಾರ ನಡೆದ ‘ಸೇವಾಭಿನಂದನ’ ಕಾರ್ಯಕ್ರಮದಲ್ಲಿ ಹಿರಿಯ ಸಹಕಾರಿ ಹಾಗೂ ಸಂಘದ ಅಧ್ಯಕ್ಷ ಎನ್.ಬಿ.ಹೆಗಡೆ ಮತ್ತಿಹಳ್ಳಿ ಅವರನ್ನು ಹೃದಯಸ್ಪರ್ಶಿಯಾಗಿ ಸನ್ಮಾನಿಸಲಾಯಿತು.

ಸನ್ಮಾನ ಸ್ವೀಕರಿಸಿದ ಎನ್.ಬಿ.ಹೆಗಡೆ ಮಾತನಾಡಿ, ರೈತರ ಆರ್ಥಿಕ ಸಂಕಷ್ಟಕ್ಕೆ ಸೊಸೈಟಿಗಳು ಸಹಕಾರ ನೀಡಬೇಕು. ಈ ಭಾಗದ 90% ರೈತಾಪಿ ಸಮುದಾಯ ಸಂಘದ ಜತೆಗಿದೆ. ಜಿಲ್ಲೆಯಲ್ಲಿ ಜಮೀನು ಪರಭಾರೆಯಾಗುತ್ತಿದೆ. ನಾವೆಲ್ಲರೂ ಸಮಾನ ದೃಷ್ಟಿಯಿಂದ ಚರ್ಚಿಸಿ ಪರಿಹಾರ ಕಂಡುಕೊಳ್ಳಬೇಕಿದೆ. ಹಣದ ಹಿಂದೆ ಓಡುವುದನ್ನು ನಿಲ್ಲಿಸಬೇಕು ಎಂದರು. ಸಹಕಾರಿ ಕ್ಷೇತ್ರ ಅಪಾರ ಅನುಭವ ಕೊಟ್ಟಿದೆ. ಈ ಕ್ಷೇತ್ರವನ್ನು ಅಪವಿತ್ರಗೊಳಿಸುವ ಕೆಲಸ ಯಾರೂ ಮಾಡಬಾರದು. ಸಹಕಾರಿ ಕ್ಷೇತ್ರದಲ್ಲಿ ಜಿಲ್ಲೆಗಿರುವ ಹೆಸರನ್ನು ಉಳಿಸಿಕೊಂಡು ಹೋಗೋಣ ಎಂದರು.

ಸನ್ಮಾನ ಸಮಿತಿಯ ಗೌರವಾಧ್ಯಕ್ಷ ಎ.ಪಿ.ಭಟ್ ಮುತ್ತಿಗೆ ಅಧ್ಯಕ್ಷತೆ ವಹಿಸಿದ್ದರು. ಕ್ಯಾಂಪ್ಕೋ ಅಧ್ಯಕ್ಷ ಕಿಶೋರ್ ಕುಮಾರ್ ಕೊಡ್ಗಿ, ಕದಂಬ ಸೌಹಾರ್ದ ಸಹಕಾರಿಯ ಅಧ್ಯಕ್ಷ ಶಂಭುಲಿಂಗ ಹೆಗಡೆ, ಎಂಇಎಸ್ ಶಿಕ್ಷಣ ಸಂಸ್ಥೆಯ ಕಾರ್ಯದರ್ಶಿ ಎಸ್.ಪಿ. ಶೆಟ್ಟಿ, ಸನ್ಮಾನ ಸಮಿತಿಯ ಕಾರ್ಯಾಧ್ಯಕ್ಷ ಎನ್.ಆರ್. ಹೆಗಡೆ ಬಾಳೆಜಡ್ಡಿ ಉಪಸ್ಥಿತರಿದ್ದರು.