ಬಾಡಿಗೆ ಕಾರ್ ಚಾಲಕನ ಮೇಲೆ ಚಾಕುವಿನಿಂದ ಹಲ್ಲೆ.! ಆರೋಪಿಗಳನ್ನು ಬಂಧಿಸಿದ ಪೊಲೀಸರು.!

ಹೊನ್ನಾವರ: ಕಾರ್ ಬಾಡಿಗೆ ಮಾಡಿಕೊಂಡು ಬಂದವರು ಚಾಲಕನಿಗೆ ಚಾಕುವಿನಿಂದ ಹಲ್ಲೆ ಮಾಡಿ ಪರಾರಿಯಾಗುವ ವೇಳೆ ಪೊಲೀಸರು ಬಂಧಿಸಿದ ಘಟನೆ ತಾಲೂಕಿನ ಗುಣವಂತೆಯಲ್ಲಿ ನಡೆದಿದೆ.

ಆರೋಪಿತರು ಗುಲಬರ್ಗಾ ಜಿಲ್ಲೆಯ ಅಪಜಲ್ ಪುರದ ಸಂಗಮೇಶ ಹಾಗೂ ಇನ್ನಿತರರು ಸೇರಿ ಮಂಗಳೂರಿನ ಟ್ಯಾಕ್ಸಿ ಸ್ಟ್ಯಾಂಡನಲ್ಲಿ ಬಾಡಿಗೆಗಾಗಿ ನಿಲ್ಲಿಸಿಟ್ಟ ಅಬ್ದುಲ್ ರೆಹಮಾನ್ ಅವರ ಕಾರನ್ನು ಸುಬ್ರಮಣ್ಯಕ್ಕೆ ಹೋಗಲು ಬಾಡಿಗೆ ಮಾಡಿಕೊಂಡು ಬಂದಿದ್ದರು. ಸುಬ್ರಮಣ್ಯಕ್ಕೆ ಹೋಗದೆ ಮುರ್ಡೇಶ್ವರಕ್ಕೆ ಕಾರನ್ನು ಒಯ್ಯಲು ತಿಳಿಸಿದ್ದಾರೆ. ಕಾರನ್ನು ಚಲಾಯಿಸಿಕೊಂಡು ಮುರ್ಡೇಶ್ವರ ದೇವಸ್ಥಾನದ ದ್ವಾರದ ಹತ್ತಿರ ಬಂದಾಗ, ಆರೋಪಿಗಳು ಮುರ್ಡೇಶ್ವರಕ್ಕೆ ಹೋಗುವದು ಬೇಡಾ ಹೈವೆ ಮೇಲೆ ಮುಂದೆ ಕರೆದುಕೊಂಡು ಹೋಗು ಅಂತಾ ಹೇಳಿದ್ದಾರೆ.

ಕಾರಿಗೆ ಡಿಸೇಲ್ ಹಾಕಬೇಕು ಅಂತಾ ಹೇಳಿದಕ್ಕೆ, ಆರೋಪಿತರು ತಮ್ಮ ಹತ್ತಿರ ಹಣವಿಲ್ಲ ಮುಂದೆ ಎ.ಟಿ.ಎಮ್‌ನಿಂದ ತೆಗೆದು ಕೋಡುತ್ತೇನೆ ಎಂದು ಹೇಳಿದ್ದಾರೆ. ಕಾರು ಗುಣವಂತೆ ಗ್ರಾಮಕ್ಕೆ ತಲುಪಿದಾಗ ಕಾರನ್ನು ದೋಚುವ ಉದ್ದೇಶದಿಂದ ಸಂಗಮೇಶ ಎಂಬುವ ವ್ಯಕ್ತಿ ಕಿಸೆಯಲ್ಲಿದ್ದ ಚಾಕುವನ್ನು ತೆಗೆದು ಚಾಲಕನ ಕುತ್ತಿಗೆಯ ಹತ್ತಿರ ಹಿಡಿದು ಕಾರನ್ನು ರಸ್ತೆ ಪಕ್ಕದಲ್ಲಿ ನಿಲ್ಲಿಸಲು ಹೇಳಿದ್ದಾರೆ.

ಚಾಲಕ ಕಾರಿನಿಂದ ಇಳಿಯದಿದ್ದಾಗ ಆರೋಪಿತರು ಕಾರಿನಿಂದ ದೂಡಿ ಹಾಕಿದ್ದಾರೆ. ಆರೋಪಿ ಸಂಗಮೇಶನು ಚಾಲಕನ ಕೈಯಲ್ಲಿದ್ದ ಕಾರಿನ ಚಾವಿಯನ್ನು ಕಸಿದುಕೊಳ್ಳಲು ಪ್ರಯತ್ನಿಸಿದ್ದಾನೆ. ಈ ವೇಳೆ ಚಾಲಕನ ಬಲಕೈ ಕಿರುಬೆರಳಿಗೆ ಚಾಕುವಿನಿಂದ ಗಾಯಪಡಿಸಿದ್ದಾನೆ‌. ಚಾಲಕನ ಕೂಗನ್ನು ಕೇಳಿ ಸಮೀಪದಲ್ಲಿರುವ ಸಾರ್ವಜನಿಕರು ಕಾರಿನ ಹತ್ತಿರ ಬರುವದನ್ನು ಗಮನಿಸಿದ ಖದೀಮರು ಗದ್ದೆ ಬಯಲಿನಲ್ಲಿ ಓಡಿ ಹೋಗಿದ್ದರು. ಪೊಲೀಸರು ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂದಿಸಿದ್ದಾರೆ. ಈ ಕುರಿತು ಮಂಕಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.