ಬಿಲ್ಕಿಸ್ ಬಾನು ಅತ್ಯಾಚಾರ ಆರೋಪಿಗಳ ಬಿಡುಗಡೆಗೆ ಖಂಡನೆ.! ಆರೋಪಿಗಳಿಗೆ ಕಠಿಣ ಶಿಕ್ಷೆ ವಿಧಿಸುವಂತೆ ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಒತ್ತಾಯ

ದಾಂಡೇಲಿ: ಬಿಲ್ಕಿಸ್ ಬಾನು ಮೇಲೆ ಸಾಮೂಹಿಕ ಅತ್ಯಾಚಾರ ನಡೆಸಿದ 11 ಅಪರಾಧಿಗಳನ್ನು ಗುಜರಾತ್ ಸರ್ಕಾರ ಬಿಡುಗಡೆಗೊಳಿಸಿರುವುದನ್ನು ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ತೀವ್ರವಾಗಿ ಖಂಡಿಸಿದೆ. ಹಾಗೂ ಸುಪ್ರೀಂ ಕೋರ್ಟ್ ಅಪರಾಧಿಗಳನ್ನು ಮತ್ತೇ ಜೈಲಿಗೆ ಕಳಿಸಿ, ಉಗ್ರ ಶಿಕ್ಷೆ ವಿಧಿಸಬೇಕೆಂದು ಸಂಘಟನೆ ಒತ್ತಾಯಿಸಿದೆ.

ಈ ಬಗ್ಗೆ ಪತ್ರಿಕಾ ಪ್ರಕಟಣೆ ನೀಡಿರುವ ಸಂಘಟನೆಯ ಅಧ್ಯಕ್ಷೆ ರತ್ನದೀಪಾ ಎನ್ ಎಮ್, ಭಾರತೀಯರಲ್ಲಿ ನನ್ನದೊಂದು ಮನವಿ. ನಮ್ಮ ದೈನಂದಿನ ಜೀವನದಲ್ಲಿ ಮಹಿಳೆಯರ ಬಗೆಗಿನ ನಮ್ಮ ಧೋರಣೆಯನ್ನು ಬದಲಿಸಿಕೊಳ್ಳೋಣ. ಕನಸಿನ ಭಾರತ ನಿರ್ಮಾಣದಲ್ಲಿ ಮಹಿಳೆಯರ ಪಾತ್ರ ಅತ್ಯಂತ ದೊಡ್ಡದು. ಭಾರತದ ಪ್ರಗತಿಗೆ ಮಹಿಳೆಯರ ಕುರಿತ ಗೌರವದ ಭಾವನೆ ಅತ್ಯಗತ್ಯ. ಒಂದು ವ್ಯತಿರಿಕ್ತ ಭಾವನೆ ನಮ್ಮೊಳಗೆ ನುಸುಳಿಬಿಡುತ್ತವೆ. ಮಹಿಳೆಯರ ಘನತೆಗೆ ಕುದುಂಟಾಗದಂತೆ ನಡೆದುಕೊಳ್ಳುತ್ತೇವೆ ಎಂದು ಪ್ರತಿಜ್ಞೆ ಮಾಡೋಣವೆಂದು ಹೇಳಿದ ದಿನವೇ ಪ್ರಧಾನಿಯವರ ತವರೂರಾದ ಗುಜರಾತ್ ನಲ್ಲಿ ಅಪರಾಧಿಗಳನ್ನು ಬಿಡುಗಡೆ ಮಾಡಿಸಿರುವುದು ಖಂಡನೀಯ ಎಂದು ತಿಳಿಸಿದೆ.