ಮೊಸಳೆ ಎಳೆದೊಯ್ದ ವ್ಯಕ್ತಿಯ ಶವ ಪತ್ತೆ

ದಾಂಡೇಲಿ: ಕಾಳಿ ನದಿಯಲ್ಲಿ ಮೊಸಳೆ ಎಳೆದು ಕೊಂಡು ಹೋದ ವ್ಯಕ್ತಿಯ ಶವ ಭಾನುವಾರ ಪತ್ತೆಯಾಗಿದೆ.

ಶನಿವಾರ ಸಂಜೆ ಈ ಘಟನೆ ನಡೆದಿದ್ದು ರೆಸ್ಕ್ಯೂ ತಂಡ ಮತ್ತು ಪೊಲೀಸರು ನಿನ್ನೆಯಿಂದ ಶೋಧ ಕಾರ್ಯ ನಡೆಸುತ್ತಿದ್ದರು. ಭಾನುವಾರ ಮಧ್ಯಾಹ್ನ ರೆಸ್ಕ್ಯೂ ತಂಡ ಪಂಪ ಹೌಸ್ ಹತ್ತಿರ ಸುರೇಶ ವಸಂತ ತೇಲಿ (44) ಮೃತದೇಹವನ್ನು ಪತ್ತೆ ಹಚ್ಚಿದೆ.

ಮೃತದೇಹವನ್ನು ದಾಂಡೇಲಿ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ.

ಸ್ಥಳೀಯ ಜನರು ಪದೇ ಪದೇ ಮೊಸಳೆ ದಾಳಿಯಾಗುವುದನ್ನು ತಡೆಗಟ್ಟಲು ಶಾಶ್ವತ ಪರಿಹಾರ ಕೈಗೊಳ್ಳಬೇಕೆಂದು ಅರಣ್ಯ ಇಲಾಖೆ ಹಾಗೂ ನಗರಾಡಳಿತ ಅಧಿಕಾರಿಗಳಲ್ಲಿ ಮನವಿ ಮಾಡಿದರು.

ಸ್ಥಳದಲ್ಲಿ ಹಾಜರಿದ್ದ ಅರಣ್ಯ ಇಲಾಖೆಯ ಹಿರಿಯ ಅಧಿಕಾರಿ ಎಸ್ ಎಸ್ ನಿಂಗಾಣಿ, ಇಲಾಖೆಯ ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ಸೂಕ್ತ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.