ಬಸ್ ಹತ್ತುವಾಗ ಗಮನ ಬೇರೆಡೆ ಸೆಳೆದು ಹಣ ಎಗರಿಸಿದ್ದ ಖತರ್ನಾಕ್ ಕಳ್ಳ ಅರೆಸ್ಟ್.! ಮೂರು ಚೆಕ್, ಒಂದುವರೆ ಲಕ್ಷ ಹಣ ದೋಚಿದ್ದ ಖದೀಮ.!

ಮುಂಡಗೋಡ: ಪಟ್ಟಣದಲ್ಲಿ ಬಸ್ ಹತ್ತುವಾಗ ಬಟ್ಟೆ ವ್ಯಾಪಾರಿಯ ಗಮನ ಬೇರೆಡೆ ಸೆಳೆದು ಒಂದೂವರೆ ಲಕ್ಷಕ್ಕೂ ಹೆಚ್ಚು ಹಣ ಮತ್ತು ಮೂರು ಚೆಕ್ ಗಳನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಮುಂಡಗೋಡ್ ಪೊಲೀಸರು ಬಂಧಿಸಿದ್ದಾರೆ. ಹುಬ್ಬಳ್ಳಿಯ ರಾಕೇಶ ಗುಂಜಾಳ ಬಂಧಿತ ಆರೋಪಿ. ಮತ್ತೊಬ್ಬ ಆರೋಪಿ ಪರಾರಿಯಾಗಿದ್ದಾನೆ.

ಹುಬ್ಬಳ್ಳಿಯ ದೇವರಾಮ್ ಖಲವಾ ಆ 10 ರಂದು ಹಣ ಕಳೆದುಕೊಂಡಿದ್ದರು. ಇವರು ಆನವಟ್ಟಿ, ಹಾನಗಲ್ ಮತ್ತು ಮುಂಡಗೋಡ ಬಟ್ಟೆ ಅಂಗಡಿಗಳಲ್ಲಿ ಸಂಗ್ರಹಿಸಿದ ಹಣದೊಂದಿಗೆ ಮುಂಡಗೋಡ ಬಸ್ ನಿಲ್ದಾಣದಿಂದ ಹುಬ್ಬಳ್ಳಿ ಬಸ್ ಹತ್ತಿದ್ದಾರೆ. ಆಗ ಹಿಂದಿನಿಂದ ಮಾಸ್ಕ್ ಹಾಕಿಕೊಂಡು ಬಂದ ವ್ಯಕ್ತಿ ಗಮನ ಬೇರೆಡೆ ಸೆಳೆದು ಬ್ಯಾಗಿನ ಜಿಪ್ ತೆಗೆದು ಅದರಲ್ಲಿದ್ದ 1,68,442 ಹಣ ಮತ್ತು ಮೂರು ಚೆಕ್ ನ್ನು ಎಗರಿಸಿ ಪರಾರಿಯಾಗಿದ್ದ. ಈ ಬಗ್ಗೆ ದೇವರಾಮ್ ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ಸಿಪಿಐ ಎಸ್.ಎಸ ಸಿಮಾನಿ ನೇತೃತ್ವದ ತಂಡ ತನಿಖೆ ನಡೆಸಿ ಆರೋಪಿಯನ್ನು ಬಂಧಿಸಿದ್ದಾರೆ. ಮತ್ತೊಬ್ಬ ಆರೋಪಿಯ ಪತ್ತೆಗಾಗಿ ಬಲೆ ಬಿಸಿದ್ದಾರೆ.