ಕರಡಿ ದಾಳಿಯಿಂದ ಗಂಭೀರ ಗಾಯಗೊಂಡ ವ್ಯಕ್ತಿ

ಮುಂಡಗೋಡ: ತಾಲೂಕಿನ ಮರಗಡಿ ಗ್ರಾಮದ ಅರಣ್ಯ ಪ್ರದೇಶದಲ್ಲಿ ಶನಿವಾರ ವ್ಯಕ್ತಿಯೊಬ್ಬನ ಮೇಲೆ ಕರಡಿ ದಾಳಿ ನಡೆಸಿ ಗಂಭೀರವಾಗಿ ಗಾಯಗೊಳಿಸಿದೆ. ಮರಗಡಿ ಗ್ರಾಮದ ಫಕ್ಕೀರೇಶ ಗೊಲ್ಲರ್ ಗಾಯಗೊಂಡ ವ್ಯಕ್ತಿ.

ಈತ ಗದ್ದೆಯಲ್ಲಿ ಕೆಲಸ ಮುಗಿಸಿ ಮಧ್ಯಾಹ್ನದ ಸಮಯದಲ್ಲಿ ಮನೆಗೆ ಬರುತ್ತಿದ್ದಾಗ ದಾರಿಯ ಮಧ್ಯೆ ಒಮ್ಮೆಲೇ ಎರಡು ಮರಿಗಳ ಜೊತೆ ಕರಡಿ ಪ್ರತ್ಯಕ್ಷವಾಗಿವೆ. ಇದರಲ್ಲಿ ಒಂದು ಕರಡಿ ಫಕ್ಕೀರೇಶನ ಮೇಲೆ ದಾಳಿ ನಡೆಸಿ ಮುಖದ ಅರ್ಧ ಭಾಗ ಮತ್ತು ಏಡಗೈಗೆ ಗಂಭೀರ ಗಾಯಗೊಳಿಸಿವೆ.

ಕರಡಿಗಳಿಂದ ತಪ್ಪಿಸಿಕೊಂಡು ಅರಣ್ಯದಲ್ಲಿ ಮರ ಏರಿ ತನ್ನ ಮೊಬೈಲ್‌ನಿಂದ ಸಹೋದರನಿಗೆ ಕರೆ ಮಾಡಿದ್ದಾನೆ. ಸಹೋದರ ಹಾಗೂ ಗ್ರಾಮಸ್ಥರು ಸೇರಿ ಈತನನ್ನು ಕಾತೂರಿಗೆ ಕರೆತಂದು ಪ್ರಾಥಮಿಕ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗಿದೆ.

ಬಳಿಕ ಕಾತೂರ ವಲಯ ಅರಣ್ಯ ಇಲಾಖೆಯ ವಾಹನದಲ್ಲಿ ತಾಲೂಕು ಆಸ್ಪತ್ರೆಗೆ ದಾಖಲಿಸಿದ್ದಾರೆ. ಆಸ್ಪತ್ರೆಯಲ್ಲಿ ತರ್ತು ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗೆ ಹುಬ್ಬಳ್ಳಿ ಕಿಮ್ಸ್ ಆಸ್ಪತ್ರೆಗೆ ದಾಖಲಿಸಲಾಗಿದೆ. ಅರಣ್ಯ ಇಲಾಖೆಯ ಅಧಿಕಾರಿಗಳು ತಾಲೂಕು ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.