ಸನವಳ್ಳಿ ಮಾರಿಕಾಂಬಾ ದೇವಾಲಯದ ಚಿನ್ನಾಭರಣ ಕಳ್ಳತನ ಮಾಡಿದ್ದ ಆರೋಪಿ ಅಂದರ್

ಮುಂಡಗೋಡ: ತಾಲೂಕಿನ ಸನವಳ್ಳಿ ಗ್ರಾಮದ ಮಾರಿಕಾಂಬಾ ದೇವಸ್ಥಾನದ ದೇವರ ಮೂರ್ತಿಯ ಮೇಲಿದ್ದ ಬಂಗಾರದ ಸರವನ್ನು ಕಳ್ಳತನ ಮಾಡಿದ್ದ ಆರೋಪಿಯನ್ನು ಬಂಧಿಸುವಲ್ಲಿ ಪೊಲೀಸರು ಯಶಸ್ವಿಯಾಗಿದ್ದಾರೆ. ಆಭರಣ ಹಾಗೂ ಕಳ್ಳತನಕ್ಕೆ ಬಳಸಿದ್ದ ಬೈಕನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ. ತಾಲೂಕಿನ ಸನವಳ್ಳಿ ಗ್ರಾಮದ ಮಹಾಂತೇಶ ಅರ್ಜುನ ಆರೆಗೊಪ್ಪ (೪೩) ಬಂಧಿತ ಆರೋಪಿ.

ಜು.೨೬ರಂದು ರಾತ್ರಿ ವೇಳೆ ಕಳ್ಳರು ಕಬ್ಬಿಣದ ರಾಡ್‌ನಿಂದ ದೇವಸ್ಥಾನದ ಬೀಗ ಮುರಿದು ಒಳನುಗ್ಗಿ 40 ಗ್ರಾಂ ತೂಕದ ಎರಡು ಬಂಗಾರದ ಸರಗಳನ್ನು ಕಳ್ಳತನ ಮಾಡಿದ್ದ. ಈ ಬಗ್ಗೆ ಗ್ರಾಮಸ್ಥರು ಪೊಲೀಸ್ ಠಾಣೆಗೆ ದೂರು ನೀಡಿದ್ದರು.

ತನಿಖೆ ಕೈಗೊಂಡ ಪೊಲೀಸರು ಅದೇ ಗ್ರಾಮದ ಮಹಾಂತೇಶ ಎಂಬವನ್ನು ಬಂಧಿಸಿ, ಆತನಿಂದ ಕಳ್ಳತನ ಮಾಡಿದ್ದ ಬಂಗಾರದ ಆಭರಣ ಹಾಗೂ ಕಳ್ಳತನಕ್ಕೆ ಬಳಸಿದ್ದ ಬೈಕ್ ವಶಕ್ಕೆ ಪಡೆದುಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಡಿವೈಎಸ್‌ಪಿ. ರವಿ ನಾಯ್ಕ ಮಾರ್ಗದರ್ಶನದಲ್ಲಿ ಸಿಪಿಐ.ಸಿದ್ದಪ್ಪ ಸಿಮಾನಿ, ಪಿಎಸ್‌ಐ ಬಸವರಾಜ ಮಬನೂರ, ಎನ್.ಡಿ.ಜಕ್ಕಣ್ಣವರ, ಸಿಬ್ಬಂದಿಗಳಾದ ಮಣಿಮಾಲಿನ್ ಮೇಸ್ತ್ರಿ, ಮಹ್ಮದಸಲಿಂ, ಗಣಪತಿ, ಕೋಟೇಶ ನಾಗರವಳ್ಳಿ, ಅಣ್ಣಪ್ಪ ಬಡಿಗೇರ, ಬಸವರಾಜ ಲಮಾಣಿ, ವಿವೇಕ ಪಟಗಾರ, ಸಹದೇವ, ಶರತ್ ದೇವಳಕ್ಕಿ, ತಿರುಪತಿ ಚೌಡಣ್ಣವರ, ಅರುಣ ಬಾಗೇವಾಡಿ, ಮಹಾಂತೇಶ ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.