ನೆಲ್ಲಿಕೇರಿ ಪಿಯು ಕಾಲೇಜು ಅಭಿವೃದ್ಧಿ ಪಡಿಸುವ ಕನಸು ನನಸಾಗಿದೆ – ದಿನಕರ ಶೆಟ್ಟಿ

ಕುಮಟಾ: ಪಟ್ಟಣದ ಹನುಮಂತ ಬೆಣ್ಣೆ ಸರ್ಕಾರಿ ಪದವಿಪೂರ್ವ ಕಾಲೇಜ್‌ನ ವಿದ್ಯಾರ್ಥಿಗಳ ಸಂಘ, ಎನ್‌ಎಸ್‌ಎಸ್, ಕ್ರೀಡಾ ಘಟಕ ಉದ್ಘಾಟನೆ ಮತ್ತು ಪ್ರತಿಭಾ ಪುರಸ್ಕಾರ ಕಾರ್ಯಕ್ರಮವನ್ನು ಶುಕ್ರವಾರ ಶಾಸಕ ದಿನಕರ ಶೆಟ್ಟಿ ಉದ್ಘಾಟಿಸಿದರು.

ಬಳಿಕ ಕಾರ್ಯಕ್ರಮದಲ್ಲಿ ಮಾತನಾಡಿದ ದಿನಕರ ಶೆಟ್ಟಿ ಶಾಸಕನಾಗುವ ಮೊದಲು ನೆಲ್ಲಿಕೇರಿ ಪಿಯು ಕಾಲೇಜ್‌ನ್ನು ಅಭಿವೃದ್ಧಿ ಪಡಿಸುವ ಕನಸು ಕಂಡಿದ್ದೆ. ಮೊದಲ ಬಾರಿಗೆ ಶಾಸಕನಾದ ಮೇಲೆ ಕಾಲೇಜ್‌ಗೆ ಜಾಗ ಮಂಜೂರಿ ಮಾಡಿಸಿ, ಕಟ್ಟಡವನ್ನು ಕೂಡ ಕಟ್ಟಿಸಿಕೊಟ್ಟೆ. ಹಿಂದಿನ ಶಾಸಕರು ಅಲ್ಪಸ್ವಲ್ಪ ಅಭಿವೃದ್ಧಿ ಮಾಡಿದ್ದಾರೆ. ಮತ್ತೆ ನಾನು ಶಾಸಕನಾದ ಮೇಲೆ 9 ಕೋಣೆ, ಲ್ಯಾಬ್, ಶೌಚಾಲಯ ನಿರ್ಮಿಸಿಕೊಡುವ ಮೂಲಕ ನನ್ನ ಕನಸು ನನಸಾದ ಬಗ್ಗೆ ಸಂತಸ ಇದೆ ಎಂದರು.

ಈ ಸಂದರ್ಭದಲ್ಲಿ ಪಿಯುಸಿ ಪರೀಕ್ಷೆಯಲ್ಲಿ ಸಾಧನೆ ಮಾಡಿದ ಪ್ರತಿಭಾವಂತ ವಿದ್ಯಾರ್ಥಿಗಳನ್ನು ಪುರಸ್ಕರಿಸಲಾಯಿತು. ಉದ್ಘಾಟನೆಗೊಂಡ ವಿದ್ಯಾರ್ಥಿ ಸಂಘದ ಪ್ರತಿನಿಧಿಗಳಿಗೆ ಎನ್‌ಎಸ್‌ಎಸ್ ಕಾರ್ಯಕ್ರಮಾಧಿಕಾರಿ ರಾಘವೇಂದ್ರ ಮಡಿವಾಳ ಪ್ರತಿಜ್ಞಾವಿಧಿ ಬೋಧಿಸಿದರು. ಜಿಲ್ಲಾ ಪ್ರಾಂಶುಪಾಲರ ಸಂಘದ ಅಧ್ಯಕ್ಷರಾಗಿ ಆಯ್ಕೆಯಾದ ಕಾಲೇಜ್ ಪ್ರಾಂಶುಪಾಲ ಸತೀಶ್ ನಾಯ್ಕ ಅವರನ್ನು ಸನ್ಮಾನಿಸಿದರು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜ್ ಪ್ರಾಂಶುಪಾಲೆ ವಿಜಯಾ ನಾಯ್ಕ, ಉಪನ್ಯಾಸಕರಾದ ಆರ್ ಎಚ್ ನಾಯ್ಕ, ಎಸ್ ವಿ ನಾಯ್ಕ, ನಾಗರಾಜ ನಾಯ್ಕ, ವಿದ್ಯಾರ್ಥಿ ಪ್ರತಿನಿಧಿಗಳಾದ ಖುಷಿ ಭಂಡಾರಿ, ಸೂರ್ಯ ನಾಯ್ಕ ಉಪಸ್ಥಿತರಿದ್ದರು.