ನೀರಿನ ರಭಸಕ್ಕೆ ಕೊಚ್ಚಿಹೋದ ಸೇತುವೆ

ಜೋಯಿಡಾ: ತಾಲೂಕಿನಲ್ಲಿ ಕಳೆದ ಐದು ದಿನಗಳಿಂದ ಮಳೆ ಜೋರಾಗಿದ್ದು, ನಾಗೋಡ ಗ್ರಾ. ಪಂ ವ್ಯಾಪ್ತಿಯ ನಾಲ್ಕು ಗ್ರಾಮಗಳಿಗೆ ಸಂಪರ್ಕ ಕಲ್ಪಿಸುವ ಸೇತುವೆ ನೀರಿನ ರಭಸಕ್ಕೆ ಕೊಚ್ಚಿಹೋಗಿದೆ.

ಫತ್ರೆ, ದುಪೆವಾಡಿ, ಕುಣಂಗ ಗ್ರಾಮಗಳಿಗೆ ಹೋಗುವ ರಸ್ತೆಯ ಸೇತುವೆ ನಾಗೋಡದಿಂದ 1 ಕಿ.ಮೀ ದೂರದಲ್ಲಿ ಮಳೆಗೆ ಕೊಚ್ಚಿ ಹಾನಿಯಾಗಿದೆ. ನಾಗೋಡಾದಿಂದ ಯಾವುದೇ ಕೆಲಸಕ್ಕೆ ಅಥವಾ ಮಾರುಕಟ್ಟೆಗೆ ಹೋಗಬೇಕೆಂದರೆ ತಾಲೂಕಿನ ಪ್ರಮುಖ ಕೇಂದ್ರ ಜೊಯಿಡಾಕ್ಕೆ ಬರಬೇಕು. ಅಲ್ಲದೆ, ಈ ಗ್ರಾಮದ ಅನೇಕ ಜನರು ಸೂಪಾ ಅಣೆಕಟ್ಟಿನ ಮೀನುಗಳನ್ನು ಹಿಡಿದು ಜೊಯಿಡಾಕ್ಕೆ ತಂದು ಮಾರಾಟ ಮಾಡುತ್ತಾರೆ. ಆಸ್ಪತ್ರೆಗೆ ಹೋಗಬೇಕೆಂದರೆ ವಾಹನ ಒಡಾಟ ಕಷ್ಟವಾಗಿದ್ದು, ಕೂಡಲೆ ರಸ್ತೆಯ ಸೇತುವೆ ಸರಿಪಡಿಸಿಕೊಡಬೇಕೆಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.