ಯಲ್ಲಾಪುರದ ಆನಗೋಡ ಗೋಪಾಲಕೃಷ್ಣ ದೇವಾಲಯದ ಸಭಾಭವನದಲ್ಲಿ ಪ್ರೇಕ್ಷಕರನ್ನು ರಂಜಿಸಿದ ಮಕ್ಕಳ ಯಕ್ಷಗಾನ

ಶುಕ್ರವಾರ ರಾತ್ರಿ ಯಲ್ಲಾಪುರದ ಆನಗೋಡ ಗೋಪಾಲಕೃಷ್ಣ ದೇವಾಲಯದ ಸಭಾಭವನದಲ್ಲಿ ಮಕ್ಕಳ ಯಕ್ಷಗಾನ ಹಾಗೂ ಆನಗೋಡ ಯಕ್ಷ ಕಲಾಮಿತ್ರ ಮಂಡಳಿಯ 19ನೇ ವರ್ಷದ ವಾರ್ಷಿಕೋತ್ಸವ ಕಾರ್ಯಕ್ರಮ ಯಶಸ್ವಿಯಾಗಿ ಜರುಗಿತು…

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಹಿರಿಯ ಯಕ್ಷಗಾನ ಕಲಾವಿದ ಎ.ಪಿ. ಫಾಟಕ್, ದಿ. ಸುಬ್ರಹ್ಮಣ್ಯ ಧಾರೇಶ್ವರರು ಆಗಿನ ಕಾಲದಲ್ಲಿ ಡೇರೆ ಮೇಳದ ಏಳಿಗೆಗೆ ಅನುಕೂಲವಾಗುವ ಹಾಗೆ ಅನೇಕ ಹೊಸ ಪ್ರಸಂಗಗಳನ್ನು ಆಡಿಸಿ ಗೆದ್ದವರು. ಇದೀಗ ಅವರ ನಿಧನದಿಂದ ಒಂದು ನಿರ್ವಾತ ಸೃಷ್ಟಿಯಾಗಿದೆ. ಇಂತಹ ಕಲಾ ಕೇಂದ್ರದ ಮೂಲಕ ಮಕ್ಕಳಿಗೆ ಯಕ್ಷಗಾನ ತರಬೇತಿ ನೀಡುತ್ತಿರುವುದು ಶ್ಲಾಘನೀಯವಾಗಿದೆ ಎಂದು ಹೇಳಿದ್ರು…



ಮುಖ್ಯ ಅತಿಥಿಯಾಗಿ ಆಗಮಿಸಿದ್ದ ತಾಳಮದ್ದಳೆ ಅರ್ಥಧಾರಿ ಡಾ. ಮಹೇಶ ಭಟ್ ಮಾತನಾಡಿ, ಯಕ್ಷಗಾನ ಹಳೆಯ ಕಾಲದಲ್ಲಿ ಆರ್ಥಿಕವಾಗಿ ದುರ್ಬಲವಾಗಿದ್ದರೂ ಕಲೆಯ ದೃಷ್ಟಿಯಿಂದ ಶ್ರೀಮಂತವಾಗಿತ್ತು. ಇಂದು ಆರ್ಥಿಕತೆ ಯಕ್ಷಗಾನದಲ್ಲಿ ಸುಧಾರಿಸಿದೆ. ಯಕ್ಷಗಾನದ ನೈಪುಣ್ಯತೆ ಕಡಿಮೆಯಾಗುತ್ತಿದೆ. ಇಂತಹ ಯಕ್ಷಗಾನ ಕಲಿಕಾ ಕೇಂದ್ರಗಳು ಯಾವ ಪ್ರತಿಫಲಾಪೇಕ್ಷೆಯಿಲ್ಲದೇ ಯಕ್ಷಶಿಕ್ಷಣ ನೀಡುತ್ತಿವೆ ಎಂದರು. ಯಲ್ಲಾಪುರ ಟಿ.ಎಮ್.ಎಸ್. ಸೊಸೈಟಿ ಅಧ್ಯಕ್ಷ ಎನ್. ಕೆ. ಭಟ್ಟ ಅಗ್ಗಾಶಿಕುಂಬ್ರಿ ಮಾತನಾಡಿ, ಮನುಷ್ಯತ್ವ ನಿರ್ಮಾಣದಲ್ಲಿ ಕಲೆಯ ಪಾತ್ರ ದೊಡ್ಡದು. ಯಕ್ಷಗಾನದ ಮೂಲಕ ಸಂಸ್ಕಾರ ನೀಡಬಹುದು ಎಂದು ಹೇಳಿದ್ರು…

ವೇದಿಕೆಯಲ್ಲಿ ಸುದರ್ಶನ ಸೇವಾ ಟ್ರಸ್ಟಿನ ಅಧ್ಯಕ್ಷ ಗಣಪತಿ ಮಾನಿಗದ್ದೆ, ಸುಬ್ರಾಯ ಹೆಗಡೆ ಮಳಗಿಮನೆ, ಯಕ್ಷಗಾನ ಕೇಂದ್ರದ ಗುರುಗಳಾದ ಅನಂತ ದಂತಳಿಗೆ, ಸದಾಶಿವ ಮಲವಳ್ಳಿ, ಕೃಷ್ಣ ಹೆಗಡೆ ಉಪಸ್ಥಿತರಿದ್ರು. ಇದೇ ವೇಳೆ ತಮ್ಮ ಕಲಾ ಗುರುಗಳಾದ ಎ. ಪಿ. ಫಾಟಕ್ ಅವರಿಗೆ ಗೌರವ ಸಮರ್ಪಣೆ ಮಾಡಿದರು. ಕೇಂದ್ರದ ಮಕ್ಕಳಿಂದ ಪ್ರದರ್ಶನಗೊಂಡ ಯಕ್ಷಗಾನ ಪೂರ್ವರಂಗ ಹಾಗೂ ಜಾಂಬವತಿ ಕಲ್ಯಾಣ ಪ್ರೇಕ್ಷಕರನ್ನು ರಂಜಿಸಿತು…