Varthuru Santhosh: “ಕಿತ್ತೋದ್ ನನ್ ಮಗ” ಎಂಬ ಹೇಳಿಕೆ ಸಮರ್ಥಿಸಿಕೊಂಡ ಜಗ್ಗೇಶ್.. ಪೊಲೀಸರಿಗೆ ದೂರು

ಹುಲಿ ಉಗುರಿನ ಪ್ರಕರಣದ ಬಗ್ಗೆ ಮಾತನಾಡುವಾಗ ಜಗ್ಗೇಶ್ ಅವರು ‘ಕಿತ್ತೋದ್​ ನನ್​ ಮಗ’ ಎಂದು ಹೇಳಿದ್ದು ವರ್ತೂರು ಸಂತೋಷ್​ ಅಭಿಮಾನಿಗಳ ಬೇಸರಕ್ಕೆ ಕಾರಣ ಆಗಿತ್ತು. ಕೆಲವರು ಜಗ್ಗೇಶ್​ ವಿರುದ್ಧ ಸೋಶಿಯಲ್​ ಮೀಡಿಯಾದಲ್ಲಿ ಕಿಡಿಕಾರಿದ್ದರು. ಈ ಘಟನೆಗೆ ಸಂಬಂಧಿಸಿದಂತೆ ಜಗ್ಗೇಶ್​ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ಅವರು ಸಮರ್ಥಿಸಿಕೊಂಡಿದ್ದಾರೆ.

ನಟ ಜಗ್ಗೇಶ್​ (Jaggesh) ಅವರು ಇತ್ತೀಚೆಗೆ ವರ್ತೂರು ಸಂತೋಷ್​ ಬಗ್ಗೆ ಆಡಿದ ಮಾತುಗಳು ವಿವಾದಕ್ಕೆ ಕಾರಣ ಆಗಿವೆ. ಹುಲಿ ಉಗುರಿನ ಕೇಸ್​ಗೆ ಸಂಬಂಧಿಸಿದಂತೆ ‘ರಂಗನಾಯಕ’ ಸಿನಿಮಾದ ಸುದ್ದಿಗೋಷ್ಠಿಯಲ್ಲಿ ಮಾತನಾಡುವಾಗ ‘ಕಿತ್ತೋದ್ ನನ್ ಮಗ’ ಎಂಬ ಪದವನ್ನು ಜಗ್ಗೇಶ್​ ಬಳಕೆ ಮಾಡಿದ್ದರು. ಅದನ್ನು ಖಂಡಿಸಿ ವರ್ತೂರು ಸಂತೋಷ್​ (Varthur Santhosh) ಅವರ ಅಭಿಮಾನಿಗಳು ಅಸಮಾಧಾನ ವ್ಯಕ್ತಪಡಿಸಿದ್ದರು. ಈಗ ಇದೇ ವಿಚಾರಕ್ಕೆ ಸಂಬಂಧಿಸಿದಂತೆ ಜಗ್ಗೇಶ್​ ಅವರು ಪೊಲೀಸರಿಗೆ ದೂರು ನೀಡಿದ್ದಾರೆ. ತಮ್ಮ ಹೇಳಿಕೆಯನ್ನು ತಿರುಚಿ, ಸೋಶಿಯಲ್​ ಮೀಡಿಯಾದಲ್ಲಿ ಅಪಪ್ರಚಾರ ಮಾಡಲಾಗುತ್ತಿದೆ ಎಂದು ಅವರು ಆರೋಪ ಮಾಡಿದ್ದಾರೆ.

ಹೆಬ್ಬಗೋಡಿಯ ನಾರಾಯಣಸ್ವಾಮಿ ಮತ್ತು ಇನ್ನೋರ್ವ ವ್ಯಕ್ತಿಯ ವಿರುದ್ಧ ಎಫ್​ಐಆರ್ ದಾಖಲಾಗಿದೆ. ಜಾತಿನಿಂದನೆ ,ಅವಾಚ್ಯ ಪದಗಳ ಬಳಕೆ, ಮುಖಕ್ಕೆ ಮಸಿ ಬಳಿಯುವ ಬೆದರಿಕೆ ಹಾಕಲಾಗಿದೆ ಎಂದು ಜಗ್ಗೇಶ್​ ಅವರು ಆರೋಪ ಮಾಡಿದ್ದಾರೆ. ‘ತಪ್ಪು ಸಂದೇಶ ಕೊಟ್ಟು ಜಾತಿ ಗಲಭೆಗೆ ಸಾಮಾಜಿಕ ಜಾಲತಾಣದಲ್ಲಿ ಪ್ರಚೋದನೆ ನೀಡಲಾಗುತ್ತಿದೆ. ಕಿತ್ತೋದ್ ನನ್ ಮಗ ಎಂಬುದು ಗ್ರಾಮೀಣ ಭಾಷೆಯಾಗಿದ್ದು, ಅದನ್ನು ತಿರುಚಿ ಪ್ರಚೋದಿಸಲಾಗುತ್ತಿದೆ’ ಎಂದು ಜಗ್ಗೇಶ್​ ದೂರು ನೀಡಿದ್ದಾರೆ.

ಜಗ್ಗೇಶ್ ಅವರು ಮಲ್ಲೇಶ್ವರ ಪೊಲೀಸ್ ಠಾಣೆಯಲ್ಲಿ ಎಫ್​ಐಆರ್ ದಾಖಲಿಸಿದ್ದಾರೆ. ವರ್ತೂರು ಸಂತೋಷ್​ ಅವರು ಹುಲಿ ಉಗುರಿನ ಲಾಕೆಟ್​ ಧರಿಸಿ ಬಿಗ್​ ಬಾಸ್​ ಮನೆಗೆ ಹೋಗಿದ್ದಾಗ ಅವರನ್ನು ಬಂಧಿಸಲಾಗಿತ್ತು. ಆ ಬಳಿಕ ಹುಲಿ ಉಗುರು ಹೊಂದಿದ ಆರೋಪದಲ್ಲಿ ಅನೇಕ ಸೆಲೆಬ್ರಿಟಿಗಳು ಕಾನೂನಿನ ಸಂಕಷ್ಟ ಎದುರಿಸಿದ್ದರು. ಜಗ್ಗೇಶ್​ ಅವರಿಗೂ ನೋಟಿಸ್​ ನೀಡಲಾಗಿತ್ತು. ಆ ಘಟನೆಯನ್ನು ನೆನಪಿಸಿಕೊಂಡು ‘ರಂಗನಾಯಕ’ ಸುದ್ದಿಗೋಷ್ಠಿಯಲ್ಲಿ ಜಗ್ಗೇಶ್​ ಇತ್ತೀಚೆಗೆ ಮಾತನಾಡುವಾಗ ‘ಕಿತ್ತೋದ್ ನನ್ ಮಗ’ ಎಂಬ ಪದಬಳಕೆ ಮಾಡಿದ್ದರು.

ವರ್ತೂರು ಸಂತೋಷ್​ ಪ್ರತಿಕ್ರಿಯೆ ಏನು?
ಜಗ್ಗೇಶ್​ ಅವರ ಹೇಳಿಕೆ ವೈರಲ್​ ಆದ ಬಳಿಕ ವರ್ತೂರು ಸಂತೋಷ್​ ಅವರು ಪ್ರತಿಕ್ರಿಯೆ ನೀಡಿದರು. ‘ಅವರು ದೊಡ್ಡವರು ಬಿಡಿ. ನಾನು ಹೇಳೋಕೆ ಇಚ್ಛಿಸುವುದು ಇಷ್ಟೇ.. ಕಾಲಾಯ ತಸ್ಮೈ ನಮಃ. ಎಲ್ಲದಕ್ಕೂ ನಾವು ಉತ್ತರ ಕೊಡಲೇಬೇಕು ಅಂತೇನಿಲ್ಲ. ಕೆಲವೊಂದಕ್ಕೆ ಉತ್ತರ ಕೊಡಬೇಕು, ಕೆಲವೊಂದಕ್ಕೆ ಮೌನವಾಗಿ ಇದ್ದರೆ ಸಾಕು. ಉತ್ತರ ಸಿಗುತ್ತದೆ’ ಎಂದರು.

ಬಿಗ್​ ಬಾಸ್​ಗೆ ಕಾಲಿಟ್ಟ ಬಳಿಕ ವರ್ತೂರು ಸಂತೋಷ್​ ಅವರ ಖ್ಯಾತಿ ಹೆಚ್ಚಾಗಿದೆ. ಹಳ್ಳಿಕಾರ್​ ತಳಿಯ ಸಂರಕ್ಷಣೆ ಮಾಡುವ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ‘ಬಿಗ್​ ಬಾಸ್​ ಕನ್ನಡ ಸೀಸನ್​ 10’ ರಿಯಾಲಿಟಿ ಶೋನಲ್ಲಿ ಅವರು ಫಿನಾಲೆ ತನಕ ಸ್ಪರ್ಧಿಸಿದರು. ದೊಡ್ಮನೆಯಿಂದ ಹೊರಬಂದ ಬಳಿಕ ಅವರಿಗೆ ಜನರು ಪ್ರೀತಿ ತೋರಿಸುತ್ತಿದ್ದಾರೆ. ಅವರ ಅಭಿಮಾನಿ ಬಳಗ ಹಿರಿದಾಗಿದೆ. ಅವರ ಬಗ್ಗೆ ಜಗ್ಗೇಶ್​ ಮಾತನಾಡಿದ ರೀತಿಯನ್ನು ಅನೇಕರು ಖಂಡಿಸಿದ್ದಾರೆ. ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಪರ-ವಿರೋಧದ ಚರ್ಚೆ ಆಗುತ್ತಿದೆ.