ಹವ್ಯಕರು ಬೆಳಕು ನೀಡುವ ಕಾಯಕ ಮಾಡಿದವರು-ಎನ್.ಆರ್ ಹೆಗಡೆ

ಹೊನ್ನಾವರ : ಹವ್ಯಕರು ಪ್ರತಿಭಾವಂತರು, ಬಡತನದ ಬೇಗೆಯಲ್ಲಿ ಬೆಂದರೂ ಎಂದೂ ಕುಗ್ಗದೆ ಜಗತ್ತಿಗೇ ಬೆಳಕು ನೀಡುವ ಕಾಯಕ ಮಾಡಿದವರು. ಹವ್ಯಕರ ಸಮ್ಮೇಳನ ಪ್ರೀತಿಯ ಸಮ್ಮೇಳನ, ಒಬ್ಬರಿಗೊಬ್ಬರಿಗೆ ಕೊಂಡಿಯಾಗಿ ಬದುಕುವ ಸಂಸ್ಕಾರ ಹವ್ಯಕರದ್ದು ಎಂದು ಶ್ರೀ ಅಖಿಲ ಹವ್ಯಕ ಮಹಾಸಭಾದ ಖಾಯಂ ಆಹ್ವಾನಿತ ಸದಸ್ಯ ಎನ್.ಆರ್ ಹೆಗಡೆ ರಾಘೋಣ ಹೇಳಿದರು. ಅವರು ಇಲ್ಲಿನ ಕರ್ಕಿಯ ಶ್ರೀ ಚೆನ್ನಕೇಶವ ಪ್ರೌಢಶಾಲೆಯಲ್ಲಿ ಶ್ರೀ ಹವ್ಯಕ ಮಹಾಸಭಾದಿಂದ ಹವ್ಯಕರಿಂದ, ಹವ್ಯಕರಿಗಾಗಿ, ಹವ್ಯಕರಿಗೋಸ್ಕರ ನಡೆದ ‘ಪ್ರತಿಬಿಂಬ’ ಕಾರ್ಯಕ್ರಮದ ಸಮಾರೋಪ ಸಮಾರಂಭದ ಅಧ್ಯಕ್ಷತೆವಹಿಸಿ, ಹವ್ಯಕ ಸಮಾಜದ ಸಾಧಕ ವಿದ್ಯಾರ್ಥಿಗಳನ್ನು ಗೌರವಿಸಿ ಮಾತನಾಡಿದರು.

ಎಸ್.ಎಸ್.ಎಲ್.ಸಿ ಹಾಗೂ ಪಿ.ಯು ಶಿಕ್ಷಣದಲ್ಲಿ ಹವ್ಯಕರು ದೊಡ್ಡ ಮಾಟ್ಟದ ಸಾಧನೆ ಮಾಡುತ್ತಿದ್ದಾರೆ. ಹವ್ಯಕ ಎಂಬ ಮೂರಕ್ಷರ ಮೂರು ಜಗತ್ತನ್ನೂ ಆಳುವ ಶಕ್ತಿಯನ್ನು ಹೊಂದಿದೆ. ದೇಶ ವಿದೇಶದಲ್ಲಿಯೂ ಹೆಸರು ಮಾಡಿರುವ ಹವ್ಯಕರು ಅತ್ಯಂತ ಹೆಚ್ಚಿನ ತೆರಿಗೆ ಕಟ್ಟಿದವರು ನಾವು ಎಂದು ಎದೆತಟ್ಟಿ ಹೇಳಬಲ್ಲೆ ಎಂದರು. ಅಖಿಲ ಹವ್ಯಕ ಮಹಾಸಭಾ ವಿಶೇಷವಾಗಿ ಹವ್ಯಕ ಸಂಘಟನೆಯನ್ನು ಮಾಡುವಲ್ಲಿ ತೊಡಗಿಕೊಂಡಿದೆ. ಗಿರಿಧರ ಖಜೆ ಅವರ ಮುಂದಾಳತ್ವದಲ್ಲಿ ಪ್ರತೀ ಜಿಲ್ಲೆಯಲ್ಲಿ ಪ್ರತಿಬಿಂದದಂತಹ ಕಾರ್ಯಕ್ರಮಗಳು, ಸಾಧಕರನ್ನು ಗುರ್ತಿಸುವ ಕಾರ್ಯಗಳು ನಡೆಯುತ್ತಿರುವುದು ಹೆಮ್ಮೆಯ ಸಂಗತಿ ಎಂದರು.

ಕೆನರಾ ಫುಡ್ ಪ್ರಾಡೆಕ್ಸ್ಟ್ ಮಾಲಿಕ ಎನ್.ಎಸ್ ಹೆಗಡೆ ಮಾತನಾಡಿ ಕರ್ಕಿ ಅಪ್ರತಿಮ‌ ಜ್ಞಾನಿಗಳನ್ನು ಸಮಾಜಕ್ಕೆ ಕೊಟ್ಟ ನೆಲ. ಇಂತಹ ನೆಲದಲ್ಲಿ ಪ್ರತಿಬಿಂಬದಂತಹ ಕಾರ್ಯಕ್ರಮ‌ ನಡೆಯುತ್ತಿರುವುದು ಸಂತಸದ ವಿಚಾರ ಎಂದರು.

ಕೆಡಿಸಿಸಿ ಬ್ಯಾಂಕ್ ನಿವೃತ್ತ ಎಂ.ಡಿ ರಾಮಚಂದ್ರ ಜೋಶಿ ಮಾತನಾಡಿ, ಹವ್ಯಕರು ಹವ್ಯಕರಿಗೆ ಸಹಾಯ ಮಾಡಬೇಕು. ನಾವು ಹವ್ಯಕತನವನ್ನು ಉಳಿಸಿಕೊಳ್ಳಬೇಕಾಗಿದೆ ಎಂದರು.

ಅಖಿಲ ಹವ್ಯಕ ಮಹಾಸಭಾದ ನಿರ್ದೇಶಕ ಅರುಣ ಹೆಗಡೆ ಪ್ರಾಸ್ಥಾವಿಕವಾಗಿ ಮಾತನಾಡಿ, ದೇವರಿಗೆ ಹವಿಸ್ಸು ನೀಡುವ ಕಾರ್ಯವನ್ನು ಮಾಡುತ್ತಿದ್ದ ಹವ್ಯಕರು, ಇಂದು ಜಗತ್ತನ್ನು ಬೆಳಗುತ್ತಿದ್ದಾರೆ ಎನ್ನುತ್ತಾ ಅಖಿಲ ಹವ್ಯಕ ಮಹಾಸಭೆಯು ಸಮಾಜಕ್ಕೆ ಮಾಡುತ್ತಿರುವ ಕಾರ್ಯದ ಕುರಿತಾಗಿ ವಿವರಿಸಿದರು.

ವೇದಿಕೆಯಲ್ಲಿ ಸಾಧಕರುಗಳಾದ ಡಾ. ವಸಂತ್ ಪಿ. ಹೆಗಡೆಕಟ್ಟೆ ಕಾರವಾರ ( ಹಿರಿಯ ವೈದ್ಯರು.), ವಿದ್ವಾನ್‌ ತಿಮ್ಮಣ್ಣ ಪರಮೇಶ್ವರ ಭಟ್ ನವಿಲುಗೋಣ (ಹಿರಿಯ ವೈದಿಕರು), ಯಮುನಾ ಆರ್ ಭಾಗ್ವತ್ ಕುಮಟಾ (ಸಾಮಾಜಿಕ ಧುರೀಣರು), ವಿ.ಎನ್. ಭಟ್ ಅಳ್ಳಂಕಿ (ಅಧ್ಯಕ್ಷರು ಪಿ.ಎಲ್‌.ಡಿ ಬ್ಯಾಂಕ್ ಹೊನ್ನಾವರ), ಪ್ರೊ. ಜಿ. ಡಿ. ಭಟ್ ಕುಮಟಾ (ಅಂತಾರಾಷ್ಟ್ರೀಯ ದೇಹದಾರ್ಡ್ಯ ಸ್ಪರ್ಧೆ ತೀರ್ಪುಗಾರರು), ಕೃಷ್ಣಾನಂದ ಭಟ್ ಉಪ್ಲೆ (ನಾಟಕ ಕಲಾವಿದರು), ಯೋಗೀಶ್ ಭಟ್, ಮುರುಡೇಶ್ವರ (ಪಶು ಸಂಗೋಪನೆ), ಗಣಪತಿ ಭಟ್ಟ ಖರ್ವಾ (ಕೃಷಿ ಉತ್ಪನ್ನಗಳ ಮೌಲ್ಯವರ್ಧಕರು) ಇವರನ್ನು ಸನಾನಿಸಲಾಯಿತು.

ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಶಿರಸಿಯ ಮನಶಾಸ್ತ್ರ ವಿಭಾಗದ ಮುಖ್ಯಸ್ಥೆ ಡಾ. ಅನಿತಾ ಭಟ್ಟ ಇವರಿಂದ ವಿಶೇಷ ಉಪನ್ಯಾಸ ನಡೆಯಿತು. ಇದೇ ಸಂದರ್ಭದಲ್ಲಿ ಹವ್ಯಕ ವಿದ್ಯಾರ್ಥಿಗಳು ಹಾಗೂ ಸಮಾಜ ಬಂಧುಗಳಿಗಾಗಿ ನಡೆದ ವಿವಿಧ ಸ್ಪರ್ಧೆಯ ಬಹಮಾನ ಹಾಗೂ ವಿದ್ಯಾರ್ಥಿಗಳಿಗೆ ಶಿಷ್ಯವೇತನ ವಿತರಿಸಲಾಯಿತು.

ಹವ್ಯಕ ಮಹಾಸಭಾದ ನಿರ್ದೇಶಕರುಗಳಾದ ಆರ್.ಜಿ. ಹೆಗಡೆ ಮುಡಾರೆ, ಸಂಚಾಲಕ ವಿ.ಐ ಹೆಗಡೆ, ವಿ.ಎಂ ಹೆಗಡೆ, ಅಖಿಲ ಹವ್ಯಕ ಮಹಾಸಭಾದ ಕಾರ್ಯದರ್ಶಿ ಆದಿತ್ಯ ಹೆಗಡೆ ಕಲಗಾರು, ವಿನಾಯಕ ಮಧ್ಯಸ್ಥ, ಸಂತೋಷ, ಜಗದೀಶ ಚಂಪಕಾಪುರ ಪ್ರತಿಬಿಂಬ ಕಾರ್ಯಕ್ರಮದ ಸಂಚಾಲಕ ಸತೀಶ ಭಟ್ಟ ಕರ್ಕಿ ಇತರರು ವೇದಿಕೆಯಲ್ಲಿದ್ದರು‌. ಈಶ್ವರ ಭಟ್ಟ ಅಮಗೆರೆ ನಿರೂಪಿಸಿದರು.

ರವಿವಾರ ಬೆಳಗ್ಗೆ ವೇ.ಮೂ ಕೃಷ್ಣಾನಂದ ಭಟ್ಟ ಬಲ್ಸೆ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಹವ್ಯಕರು ಶಿಕ್ಷಣದ ಜೊತೆಗೆ ಸಂಸ್ಕಾರವನ್ನು ಉಳಿಸಿಕೊಂಡು ಹೋಗುವ ಪ್ರಯತ್ನ ಮಾಡಬೇಕು ಎಂದರು. ಅಖಿಲ ಹವ್ಯಕ ಮಹಾಸಭಾದ ಖಾಯಂ ಆಹ್ವಾನಿತ ನಿರ್ದೇಶಕ ಎನ್.ಆರ್ ಹೆಗಡೆ ರಾಘೋಣ ಅಧ್ಯಕ್ಷತೆ ವಹಿಸಿದ್ದರು. ಚೆನ್ನಕೇಶವ ಪ್ರೌಢಶಾಲೆಯ ಅಧ್ಯಕ್ಷ ಗಜಾನನ ಹೆಗಡೆ, ಮುಖ್ಯೋಪಾಧ್ಯಾಯ ಎಲ್.ಎಂ ಹೆಗಡೆ ಉಪಸ್ಥಿತರಿದ್ದರು.