ಹಸುವಿಗೆ ಡಿಕ್ಕಿ ಹೊಡೆದ ಬಸ್.! ಚಾಲಕನ ನಿರ್ಲಕ್ಷಕ್ಕೆ ಉಸಿರು ಚೆಲ್ಲಿದ ಮೂಕಪ್ರಾಣಿ.!

ಕಾರವಾರ: ತಾಲೂಕಿನ ಶಿರವಾಡ ಗ್ರಾಮ ಪಂಚಾಯತಿ ವ್ಯಾಪ್ತಿಯ ಬಂಗಾರಪ್ಪ ನಗರದಲ್ಲಿ ಖಾಸಗಿ ಬಸ್ಸೊಂದು ಹಸುವಿಗೆ ಡಿಕ್ಕಿ ಹೊಡೆದ ಪರಿಣಾಮ ಹಸು ಸ್ಥಳದಲ್ಲೇ ಮೃತ ಪಟ್ಟಿದೆ.

ಶಿರವಾಡದ ಖಾಸಗಿ ರೆಸಾರ್ಟ್ ಒಂದರಲ್ಲಿ ಕಾರವಾರ ನೇವಲ್ ಬೇಸ್ ನ ಕಾಮಗಾರಿ ಗುತ್ತಿಗೆ ಪಡೆದಿರುವ ಕಂಪನಿಯೊಂದರ ಅಧಿಕಾರಿಗಳು ಹಾಗೂ ಕಾರ್ಮಿಕರಿಗೆ ವಸತಿ ಸೌಲಭ್ಯ ಕಲ್ಪಿಸಲಾಗಿದೆ. ಹೀಗಾಗಿ ಅವರನ್ನು ಕರೆದೊಯ್ಯುಲು ಹಾಗೂ ಕರೆತರಲು ಪ್ರತಿದಿನ ಹತ್ತಾರು ಬಸ್ಸುಗಳು ಈ ಮಾರ್ಗದಲ್ಲಿ ಸಂಚರಿಸುತ್ತವೆ. ಹೀಗೆ ಸಂಚರಿಸುವ ಬಸ್ಸುಗಳನ್ನು ಚಾಲಕರು ನಿರ್ಲಕ್ಷ್ಯತನದಿಂದ ಚಾಲನೆ ಮಾಡುತ್ತಿದ್ದು ಈ ಮೊದಲೇ ಹಲವಾರು ಜಾನುವಾರುಗಳು ಮೃತಪಟ್ಟಿವೆ.

ಇಂದು ಸಂಭವಿಸಿದ ಘಟನೆಯಿಂದ ಕೆರಳಿದ ಸ್ಥಳೀಯರು ಬಸ್ಸನ್ನು ತಡೆದು ಚಾಲಕನನ್ನು ತರಾಟೆಗೆ ತೆಗೆದುಕೊಂಡಿದ್ದಾರೆ. ಸ್ಥಳಕ್ಕೆ ಕಾಮಗಾರಿ ಕಂಪನಿಯ ಅಧಿಕಾರಿಗಳನ್ನು ಕರೆಯಿಸುವಂತೆ ಹೇಳಿದ್ದು ಬಸ್ಸನ್ನು ಅಲ್ಲಿಯೇ ತಡೆ ಹಿಡಿದಿದ್ದಾರೆ. ಪದೇ ಪದೇ ಇಂತಹ ಘಟನೆಗಳಿಗೆ ಈ ಬಸ್ಸುಗಳು ಕಾರಣವಾಗುತ್ತಿದ್ದು ಮುಂದೆ ಇದು ಮಾನವರ ಜೀವಹಾನಿಗೂ ಕಾರಣವಾಗಬಹುದು ಎಂದು ಸ್ಥಳಿಯರು ಆತಂಕ ವ್ಯಕ್ತಪಡಿಸಿದ್ದಾರೆ.