ಗಣೇಶನಗರದಲ್ಲಿ ಕೊಳೆತ ಸ್ಥಿತಿಯಲ್ಲಿ ಅವಿವಾಹಿತ ಮಹಿಳೆಯ ಮೃತ ದೇಹ ಪತ್ತೆ

ದಾಂಡೇಲಿ : ನಗರದ ಗಣೇಶನಗರದ ಮನೆಯೊಂದರಲ್ಲಿ ಕೊಳೆತ ಸ್ಥಿತಿಯಲ್ಲಿ ಅವಿವಾಹಿತ ಮಹಿಳೆಯೋರ್ವಳ‌ ಮೃತದೇಹ ಶುಕ್ರವಾರ ಪತ್ತೆಯಾಗಿದೆ.

ಮೃತ ಮಹಿಳೆ 36 ವರ್ಷ ವಯಸ್ಸಿನ ಸಂಧ್ಯಾ ಶ್ರೀಪಾದ ಮಹಾಲೆ ಎಂಬವಳಾಗಿದ್ದಾಳೆ. ಈಕೆಯ ತಾಯಿ ಅನಾರೋಗ್ಯದ ಸಮಸ್ಯೆಯಿಂದಾಗಿ ಮಹಾರಾಷ್ಟ್ರದಲ್ಲಿರುವ ತನ್ನ ಸಂಬಂಧಿಕರ ಮನೆಗೆ ಹೋಗಿದ್ದರು. ಹಾಗಾಗಿ ಮನೆಯಲ್ಲಿ ಏಕಾಂಗಿಯಾಗಿ ಈ ಮಹಿಳೆ ವಾಸವಾಗಿದ್ದಳು. ಈಕೆಯ ಮನೆಯ ಸುತ್ತಮುತ್ತ ಕೊಳೆತ ವಾಸನೆ ಬರುತ್ತಿದ್ದ ಹಿನ್ನೆಲೆಯಲ್ಲಿ ಸ್ಥಳೀಯರು ನಗರ ಪೊಲೀಸ್ ಠಾಣೆಗೆ ಮಾಹಿತಿಯನ್ನು ನೀಡಿದ್ದಾರೆ. ನಗರ ಠಾಣೆಯ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆಯನ್ನು ನಡೆಸಿದರು. ವಿಷ ಸೇವನೆ ಮಾಡಿ ಆತ್ಮಹತ್ಯೆ ಮಾಡಿರಬಹುದೆಂದು ಅಂದಾಜಿಸಲಾಗಿದೆ. ಮೃತ ದೇಹವನ್ನು ನಗರದ ಸಾರ್ವಜನಿಕ ಆಸ್ಪತ್ರೆಗೆ ಮರಣೋತ್ತರ ಪರೀಕ್ಷೆಗಾಗಿ ರವಾನಿಸಲಾಗಿದೆ. ಈ ಬಗ್ಗೆ ದಾಂಡೇಲಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಪೊಲೀಸರು ಮುಂದಿನ ಕ್ರಮವನ್ನು ಕೈಗೊಂಡಿದ್ದಾರೆ.