ಶಿರಸಿಯ ರೋಹಿಣಿ ಹೆಗಡೆಗೆ ಮಾಸ್ಕೇರಿ ಅವ್ವನ ಪ್ರಾಮಾಣಿಕ ಕಾವ್ಯ ಪ್ರಶಸ್ತಿ ಪ್ರದಾನ

ದಾಂಡೇಲಿ : ಶಿರಸಿಯ ಕವಯಿತ್ರಿ, ಯಕ್ಷಗಾನ ಅರ್ಥಧಾರಿ, ರೋಹಿಣಿ ಹೆಗಡೆಯವರಿಗೆ ನಗರದ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆ ಮತ್ತು ಶಿರಸಿಯ ಸಾಹಿತ್ಯ ಸಂಚಲನ ಸಂಸ್ಥೆಯ ಸಂಯುಕ್ತಾಶ್ರಯದಲ್ಲಿ “ಜಾನಪದ ಕವಯಿತ್ರಿ ಮಾಸ್ಕೇರಿ ಅವ್ವನ ಸಂಸ್ಮರಣಾರ್ಥ ವರ್ಷಂಪ್ರತಿ ನೀಡುತ್ತಿರುವ ಪ್ರಾಮಾಣಿಕ ಕಾವ್ಯ ಪ್ರಶಸ್ತಿಯನ್ನು ಶನಿವಾರ ನಗರದ ಮಾಸ್ಕೇರಿ ಸಾಹಿತ್ಯ ಭವನದಲ್ಲಿ ಪ್ರದಾನ‌‌ ಮಾಡಲಾಯ್ತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ನಗರಸಭೆಯ ಪೌರಾಯುಕ್ತರಾದ ಆರ್.ಎಸ್.ಪವಾರ್ ಅವರು ಮಾಸ್ಕೇರಿ ನಾಯಕರು ಸಾಹಿತ್ಯಿಕ, ಸಾಂಸ್ಕೃತಿಕವಾಗಿ ಹಲವಾರು ಜನಮುಖಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುವ ಮೂಲಕ ಸಾಹಿತ್ಯ ಮತ್ತು ಸಾಂಸ್ಕೃತಿಕ ಪ್ರತಿಭೆಗಳಿಗೆ ಪ್ರೋತ್ಸಾಹವನ್ನು ನೀಡುತ್ತಾ ಬಂದಿದ್ದಾರೆ. ಇಂತಹ ಕಾರ್ಯ ಎಲ್ಲರಿಂದ ಸಾಧ್ಯವಿಲ್ಲ. ಇದು ನಿಜಕ್ಕೂ ನಾಡು, ನುಡಿ ಕಟ್ಟುವ ಪುಣ್ಯದ ಕಾರ್ಯವಾಗಿದೆ ಎಂದರು.

ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿದ ಯಕ್ಷಗಾನ ವಿದ್ವಾಂಸರಾದ ಡಾ.ಜಿ.ಎ.ಹೆಗಡೆ ಸೋಂದಾ ಅವರು ಊರಿಗೊಬ್ಬ ಮಾಸ್ಕೇರಿ ನಾಯಕರಂತ ವ್ಯಕ್ತಿಯ ಅವಶ್ಯಕತೆ ಇದೆ. ನಿಸ್ವಾರ್ಥ ಮನಸ್ಸಿನಿಂದ ಮಾಡುವ ನಾಡು, ನುಡಿ ಸೇವೆ ನಿಜವಾದ ಜೀವನ ಸಾರ್ಥಕ್ಯದ ಸೇವೆಯಾಗಿದೆ ಎಂದರು. ಪ್ರತಿಭೆಗಳನ್ನು ಗುರುತಿಸಿ, ಪ್ರೋತ್ಸಾಹಿಸಿ, ಆಶೀರ್ವದಿಸುತ್ತಿರುವ ಮಾಸ್ಕೇರಿ ಸಾಹಿತ್ಯಾರಾಧನಾ ಸಂಸ್ಥೆಯ ಕಾರ್ಯ ಶ್ಲಾಘನೀಯವಾಗಿದೆ ಎಂದರು.

ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದ ಕವಿ ಕೃಷ್ಣ ದತ್ತಾತ್ರೇಯ ಪದಕಿ ಅವರು ಮಾಸ್ಕೇರಿ ನಾಯಕರ ಅವಿಶ್ರಾಂತವಾದ ಸಾಹಿತ್ಯ ಮತ್ತು ಸಾಂಸ್ಕೃತಿಕ ಸೇವೆ ಹೆಜ್ಜೆ ಗುರುತುವಾಗಿ ಇತಿಹಾಸದ ಪುಟದಲ್ಲಿ ದಾಖಲಾಗಲಿವೆ. ಸಮಾಜ ಮಾಡಬೇಕಾದ ಕೆಲಸವನ್ನು ವ್ಯಕ್ತಿಯ ರೂಪದಲ್ಲಿ ಮಾಸ್ಕೇರಿ ನಾಯಕರು ಮಾಡುತ್ತಿರುವುದು ಅತ್ಯಂತ ಅಭಿನಂದನೀಯ ಕಾರ್ಯ ಎಂದರು. ತನ್ನ ತಾಯಿಯವರ ಹೆಸರಿನಲ್ಲಿ ರೋಹಿಣಿ ಕೃಷ್ಣಮೂರ್ತಿ ಹೆಗಡೆಯವರಿಗೆ ಪ್ರಶಸ್ತಿಯನ್ನು ನೀಡುವ ಮೂಲಕ ತಾಯಿಯನ್ನು ಸ್ಮರಿಸುವ ಕಾರ್ಯಕ್ರಮವಾಗಿ ಮೂಡಿಬಂದಿದೆ ಎಂದರು.

ಪ್ರಶಸ್ತಿಯನ್ನು ಸ್ವೀಕರಿಸಿ ಕೃತಜ್ಞತೆ ಸಲ್ಲಿಸಿ ಮಾತನಾಡಿದ ರೋಹಿಣಿ ಕೃಷ್ಣಮೂರ್ತಿ ಹೆಗಡೆ ಅವರು ಈ ಪ್ರಶಸ್ತಿ ನನಗೆ ಮತ್ತಷ್ಟು ಸಾಹಿತ್ಯ ಸೇವೆಯನ್ನು ಮಾಡಲು ಶಕ್ತಿಯನ್ನು ನೀಡಲಿದೆ ಎಂದರು.

ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ರವಿ ಲಕ್ಷ್ಮೇಶ್ವರ ರಾಜು ಉಗ್ರಾಣಕರ್ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಬಗ್ಗೆ ಸಂಘಟಕ ಹಾಗೂ ಸಾಹಿತಿ ಮಾಸ್ಕೇರಿ ನಾಯಕರು ಪ್ರಾಸ್ತವಿಕವಾಗಿ ಮಾತನಾಡಿದರು. ಸಂದೇಶ್ ಜೈನ್ ಸ್ವಾಗತಿಸಿದರು. ಗುರುರಾಜ್ ನಾಯಕ ವಂದಿಸಿದರು. ಶಿಕ್ಷಕಿ ಸವಿತಾ ನಾಯ್ಕ ಕಾರ್ಯಕ್ರಮವನ್ನು ನಿರೂಪಿಸಿದರು. ಭಾರತಿ ಕವರಿ ಸಹಕರಿಸಿದರು.