ದಾಂಡೇಲಿಯ ನಂದಗೋಕುಲ ಗಾರ್ಡನ್ ಮುಂಭಾಗದಲ್ಲಿ ಆಹಾರ ಮೇಳ‌ ಕಾರ್ಯಕ್ರಮ

ದಾಂಡೇಲಿ : ಕರ್ನಾಟಕ ಬೀದಿ ಬದಿ ವ್ಯಾಪಾರಿಗಳ ಸಂಘಟನೆ ಮತ್ತು ದಾಂಡೇಲಿ ಬೀದಿ ಬದಿ ವ್ಯಾಪಾರಿಗಳ ಸಂಘಟನೆಯ ಸಂಯುಕ್ತ ಆಶ್ರಯದಡಿ ನಗರದ ನಂದಗೋಕುಲ ಗಾರ್ಡನ್ ಮುಂಭಾಗದಲ್ಲಿ ಆಹಾರ ಮೇಳ ಕಾರ್ಯಕ್ರಮವನ್ನು ಶನಿವಾರ ಆಯೋಜಿಸಲಾಯ್ತು.

ಆಹಾರ ಮೇಳ ಉತ್ಸವಕ್ಕೆ ನಗರಸಭೆಯ ಸ್ಥಾಯಿ ಸಮಿತಿ ಅಧ್ಯಕ್ಷೆ ಶಾಹಿದಾ ಪಠಾಣ್ ಅವರು ಚಾಲನೆಯನ್ನು ನೀಡಿ ಬೀದಿ ಬದಿ ವ್ಯಾಪಾರಸ್ಥರ‌ ಸ್ವಾವಲಂಜಿ ಜೀವನಕ್ಕೆ ನಾಗರೀಕರಾದ ನಾವೆಲ್ಲರೂ ಬೆಂಬಲವನ್ನು ನೀಡಬೇಕೆಂದು‌ ಕರೆ‌ ನೀಡಿದರು.

ನಗರ ಸಭೆಯ ಮಾಜಿ ಅಧ್ಯಕ್ಷೆ ಹಾಗೂ ಹಾಲಿ ಹಿರಿಯ ಸದಸ್ಯೆ ಯಾಸ್ಮಿನ್ ಕಿತ್ತೂರು ಅವರು ಬೀದಿಬದಿ ವ್ಯಾಪಾರಸ್ಥರು ತಮ್ಮದೇ ಆದ ಸಂಘಟನೆಯನ್ನು ಕಟ್ಟಿಕೊಂಡು ಪರಸ್ಪರ ಸೌಹಾರ್ದತೆಯನ್ನು ಮೆರೆಯುತ್ತಿದ್ದಾರೆ. ಸ್ವಚ್ಛತೆಗೆ ಹೆಚ್ಚಿನ ಆದ್ಯತೆಯನ್ನು ನೀಡುವುದರ ಜೊತೆಗೆ ಗುಣಮಟ್ಟದ ಆಹಾರವನ್ನು ನೀಡುವಲ್ಲಿ ನಗರದ ಬೀದಿಬದಿ ವ್ಯಾಪಾರಸ್ಥರು ಮೊದಲ ಆದ್ಯತೆಯನ್ನು ನೀಡುತ್ತಿರುವುದು ಉತ್ತಮವಾದ ಬೆಳವಣಿಗೆ ಎಂದರು.

ಹಿರಿಯ ಸಾಮಾಜಿಕ ಹೋರಾಟಗಾರರಾದ ವಾಸುದೇವ ಪ್ರಭು ಅವರು ಬೀದಿ ಬದಿ ವ್ಯಾಪಾರಸ್ಥರು ಸ್ವಾವಲಂಬನೆಯ ಬದುಕನ್ನು ಸಾಗಿಸುವುದರ ಮೂಲಕ ನಿರುದ್ಯೋಗಿ ಯುವ ಜನತೆಗೆ ಪ್ರೇರಣೆಯಾಗಿದ್ದಾರೆ ಎಂದರು.

ನಗರ ಸಭೆಯ ಲೆಕ್ಕಾಧಿಕಾರಿ ಮೈಕಲ್ ಫೆರ್ನಾಂಡಿಸ್ ಅವರು ನಗರ ಸಭೆಯ ನಿಯಮಗಳನ್ನು ಪಾಲಿಸುವುದರ ಜೊತೆಗೆ ಗುಣಮಟ್ಟದ ಆಹಾರ ವಸ್ತುಗಳನ್ನು ಪೂರೈಸಿದ್ದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಗ್ರಾಹಕರನ್ನು ಸೆಳೆಯಲು ಸಾಧ್ಯ ಎಂದರು.

ಈ ಸಂದರ್ಭದಲ್ಲಿ ನಗರಸಭೆಯ ಸದಸ್ಯರುಗಳಾದ ಪದ್ಮಜಾ ಪ್ರವೀಣ್ ಜನ್ನು, ಪ್ರೀತಿ ನಾಯರ್, ಸಪೂರ ಯರಗಟ್ಟಿ, ರುಹಿನಾ ಖತೀಬ್, ನಗರಸಭೆಯ ಅಧಿಕಾರಿಗಳಾದ ಸುರೇಶ್, ಆದಿನಾರಾಯಣ, ನ್ಯಾಯವಾದಿ ಆಪ್ರೀನ್ ಕಿತ್ತೂರು, ಮಾಜಿ ನಗರ ಸಭಾ ಸದಸ್ಯರಾದ ಮುಸ್ತಾಕ್ ಶೇಖ ಐವಾ, ಪ್ರಮುಖರಾದ ಉದಯ್ ಶೆಟ್ಟಿ, ಬಾಬಾಸಾಬ ಜಮಾದಾರ, ಪರಮೇಶಿ ಕಲಾಲ್, ಸಾಧಿಕ್ ಮುಲ್ಲಾ, ದಾವಲಸಾಬ್ ನೀರಲಗಿ‌ ಮೊದಲಾದವರು ಉಪಸ್ಥಿತರಿದ್ದರು.

ಕಾರ್ಯಕ್ರಮದ ಯಶಸ್ಸಿಗೆ ಬೀದಿಬದಿ ವ್ಯಾಪಾರಿಗಳ ಸಂಘಟನೆಯ ದಾಂಡೇಲಿ ತಾಲೂಕು ಘಟಕದ ಅಧ್ಯಕ್ಷರಾದ ಸೀಲೆಮಾನ್ ಶೇಖ್, ಪ್ರಧಾನ ಕಾರ್ಯದರ್ಶಿ ಗೌರಿಶ್ ದೇಸಾಯಿ, ಉಪಾಧ್ಯಕ್ಷರಾದ ಪ್ರಕಾಶ್ ಗೊಂದಳಿ, ಮಹಮ್ಮದ್ ಶಫಿನೂರ್ ತಡಕೋಡ ಮತ್ತು ಸಂಘಟನೆಯ ಪದಾಧಿಕಾರಿಗಳು ಹಾಗೂ ಸದಸ್ಯರು ಶ್ರಮಿಸಿದ್ದರು.