ಗುರಿ ಸಾಧಿಸುವಿಕೆಗೆ ದೃಢ ಸಂಕಲ್ಪದೊಂದಿಗೆ ಸದಾ ಪ್ರಯತ್ನಶೀಲರಾಗಬೇಕು : ಪ್ರವೀಣಕುಮಾರ ಸುಲಾಖೆ

ದೇಸಾಯಿ ಫೌಂಡೇಷನ್ ಹಾಗೂ ಸ್ಕೊಡವೇಸ್ ಸಂಸ್ಥೆ ಮತ್ತು ಸಾಂತ್ವನ ಮಹಿಳಾ ಕೇಂದ್ರದ ಸಹಯೋಗದಲ್ಲಿ ನಗರದ ಕನ್ಯಾ ವಿದ್ಯಾಲಯದ 9 ಮತ್ತು 10ನೇ ತರಗತಿ ವಿದ್ಯಾರ್ಥಿಗಳಿಗೆ ವ್ಯಕ್ತಿತ್ವ ವಿಕಸನ ಹಾಗೂ ಉತ್ತಮ ಭವಿಷ್ಯ ನಿರ್ಮಾಣದ ಕುರಿತಂತೆ ಉಪನ್ಯಾಸ ಕಾರ್ಯಕ್ರಮವನ್ನು ಸೋಮವಾರ ಆಯೋಜಿಸಲಾಯಿತು.

ಮುಖ್ಯ ಅತಿಥಿಗಳಾಗಿ ಹಾಗೂ ಉಪನ್ಯಾಸಕರಾಗಿ ಭಾಗವಹಿಸಿದ್ದ ಪತ್ರಕರ್ತರು ಹಾಗೂ ಉಪನ್ಯಾಸಕರಾಗಿರುವ
ಪ್ರವೀಣಕುಮಾರ ಸುಲಾಖೆ ಅವರು ವಿದ್ಯಾರ್ಥಿಗಳಾದವರು ಜೀವನದಲ್ಲಿ ಗುರಿಯನ್ನು ಇಟ್ಟುಕೊಂಡಿರಬೇಕು. ಇಟ್ಟ ಗುರಿಯನ್ನು ಸಾಧಿಸಲು ದೃಢ ಸಂಕಲ್ಪವನ್ನು ತೊಟ್ಟು ಸದಾ ಪ್ರಯತ್ನಶೀಲರಾಗಿ ಇರಬೇಕೆಂದು ಕರೆ ನೀಡಿದರು. ವಿದ್ಯಾರ್ಥಿ ಜೀವನವನ್ನು ಉತ್ತಮವಾಗಿ ರೂಪಿಸಿಕೊಂಡಲ್ಲಿ ಸದೃಢ ಹಾಗೂ ಸಮೃದ್ಧ ಜೀವನ ನಿರ್ಮಾಣ ಸಾಧ್ಯ. ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಉತ್ತಮ ಯೋಚನೆ, ಯೋಜನೆಗಳೊಂದಿಗೆ ಉನ್ನತ ಸಂಸ್ಕಾರಗಳನ್ನು ಮೈಗೂಡಿಸಿಕೊಂಡು ಶೈಕ್ಷಣಿಕವಾಗಿ ಪ್ರಗತಿಯೆಡೆಗೆ ಸಾಗಬೇಕೆಂದು ಕರೆ ನೀಡಿದರು.

ಈ ಸಂದರ್ಭದಲ್ಲಿ ಸಾಂತ್ವನ ಮಹಿಳಾ ಕೇಂದ್ರದ ಬಸವಂತಮ್ಮ, ಶಾಲಾ ಮುಖ್ಯೋಪಾಧ್ಯಯಿನಿ ಶಶಿಕಲಾ‌ ಬಂಟ್, ಹಿರಿಯ ಶಿಕ್ಷಕರಾದ ಬಿಜು ನಾಯ್ಕ, ಶಿಕ್ಷಕ, ಶಿಕ್ಷಕಿಯರಾದ ರೂಪಾ, ಪಭೀನಾ, ಸುನೀತಾ, ಸುಪ್ರಿಯಾ, ಮಹಾಂತೇಶ್ ಹಿರೇಮಠ ಮೊದಲಾದವರು ಉಪಸ್ಥಿತರಿದ್ದರು.