ಹೊನ್ನಾವರ ಸರ್ಕಾರಿ ಆಸ್ಪತ್ರೆಯ ಯುಗಪುರುಷ ಡಾ.ಟಿ.ಎನ್.ಭಾಸ್ಕರ್ ಇನ್ನಿಲ್ಲ.

ಹೊನ್ನಾವರ : ಹೊನ್ನಾವರ ಸರ್ಕಾರಿ ಆಸ್ಪತ್ರೆಯಲ್ಲಿ 25 ವರ್ಷಗಳಿಗೂ ಅಧಿಕ ಕಾಲ, ಏಕೈಕ ವೈದ್ಯಾಧಿಕಾರಿಯಾಗಿ, ಒಬ್ಬ ಸ್ತ್ರೀರೋಗ ತಜ್ಞರಾಗಿ, ಒಬ್ಬ ಪ್ಲಾಸ್ಟರ್ ಹಾಕಬಲ್ಲ ಆರ್ಥೋಪೆಡಿಕ್ಸ್ ಸರ್ಜನ್ ಆಗಿ, ಒಬ್ಬ ಜನರಲ್ ಸರ್ಜನ್ ಕೂಡ ಆಗಿ, ಬಹುವಿಧದಲ್ಲಿ ಸೇವೆ ಸಲ್ಲಿಸಿರತಕ್ಕಂತ ಡಾ.ಟಿಎನ್,ಭಾಸ್ಕರ್ ಇನ್ನಿಲ್ಲ ಅನ್ನೋ ಸುದ್ದಿ ಹೊನ್ನಾವರದ ಜನತೆಯನ್ನು ಶೋಕಸಾಗರದಲ್ಲಿ ಮುಳುಗುವಂತೆ ಮಾಡಿದೆ…

ಈಗಲೂ ಕೂಡ ಡಾ.ಭಾಸ್ಕರ್ ಅವರನ್ನು ಜನ ಬಯುಸುತ್ತಿದ್ರು. ಅವರ ಜನಪ್ರೀಯತೆಯೋ ಇಲ್ಲಾ ಅವರ ಕೈಗುಣವೋ.. ಅವರ ಆಶೀರ್ವಾದವೋ.. ಪ್ರೀತಿಯೋ.. ಇನ್ನೇನೋ.. ಜನ ಇಂದು ಕೂಡ ಅವರನ್ನು ಬಯಸುತ್ತಿದ್ರು. ಅವರಿಗೆ ವಯಸ್ಸಾಗಿದೆ. ಅವರಿಂದ ಪ್ರಾಕ್ಟೀಸ್ ಆಗೋದಿಲ್ಲ ಅಂದ್ರೂ ಕೇಳುತ್ತಿರಲಿಲ್ಲ. ಹುಡುಕಿಕೊಂಡು ಅವರ ಮನೆ ಬಳಿ ಹೋಗಿ ಚಿಕಿತ್ಸೆ ಪಡೆದುಕೊಂಡು ಬರುತ್ತಿದ್ರು.

ಡಾ.ಟಿ.ಎನ್ ಭಾಸ್ಕರ್ ಹೊನ್ನಾವರ ತಾಲೂಕಿಗೆ ಸಲ್ಲಿಸಿದ ಸೇವೆ ಅನುಪಮವಾದದ್ದು. ಡಾ.ಭಾಸ್ಕರ್ ಮೂಲತಃ ಶೃಂಗೇರಿಯವರು. ಮೊದಲು ಕಾರವಾರಕ್ಕೆ ಬಂದ್ರು, ಗೋಕರ್ಣಕ್ಕೆ ಬಂದ್ರು. ಮಂಗಳೂರಿನ ಆಸ್ಪತ್ರೆಯಲ್ಲೂ ಸೇವೆ ಸಲ್ಲಿಸಿದ್ರು. ಬಳಿಕ ಹೊನ್ನಾವರಕ್ಕೆ ಬಂದವರು ಇಲ್ಲೇ ನೆಲೆ ನಿಂತ್ರು. ಹೊನ್ನಾವರದ ಜನತೆ ಕೂಡ ಇವರನ್ನು ಪ್ರೀತಿಯಿಂದ ಉಳಿಸಿಕೊಂಡ್ರು. ಪ್ರೀತಿಯಿಂದ ಸಹಕರಿಸಿದ್ರು. ಡಾ.ಭಾಸ್ಕರ್ ಕೂಡ, ಅಷ್ಟೇ ಪ್ರೀತಿಯಿಂದ ದಿನದ 20 ತಾಸುಗಳ ಕಾಲ ಸೇವೆ ಸಲ್ಲಿಸಿದ್ರು. ಬೆಳಗ್ಗೆ 8 ಗಂಟೆಯಿಂದ ರಾತ್ರಿ 9ಗಂಟೆಯವರೆಗೆ ದುಡಿದ್ರು. ಅಷ್ಟರಲ್ಲಾಗಲೇ ಮತ್ತೊಂದು ಹೆರಿಗೆ ನೋವು ಅಂತ ಮಾಹಿತಿ ಬಂದ್ರೆ, ಊಟ ಬಿಟ್ಟೇ ಆಸ್ಪತ್ರೆಗೆ ಬರುತ್ತಿದ್ರು.

ಮಧ್ಯ ರಾತ್ರಿಯ ತನ ನಾರ್ಮಲ್ ಡಿಲೆವರಿಗಾಗಿ ಕಾದು ಮನೆಗೆ ಹೋಗಿ ಮತ್ತೆ ಬೆಳಗಿನ ಜಾವ ಬರುತ್ತಿದ್ರು. ಬೆಳಗ್ಗೆ ಅಪಘಾತ ಪ್ರಕರಣ, ವಿಷ ಕುಡಿದವರ ಪ್ರಕರಣ, ಹಾವು ಕಚ್ಚಿದವ ಪ್ರಕರಣ.. ಹೀಗೆ ದಿನಕ್ಕೆ 200 ರಿಂದ 300 ರೋಗಿಗಳಿಗೆ ಚಿಕಿತ್ಸೆ ನೀಡುತ್ತಿದ್ರು. ಹೀಗೆ 25 ವರ್ಷಗಳ ಕಾಲ ಒಂದೇ ರೀತಿಯಲ್ಲೇ ಚಿಕಿತ್ಸೆ ನೀಡಿದ್ದಾರೆ. ಇದೇ ಕಾರಣಕ್ಕೆ ಹೊನ್ನಾವರದ ಸರಕಾರಿ ಆಸ್ಪತ್ರೆ ಡಾ.ಟಿ.ಎನ್.ಭಾಸ್ಕರ್ ಆಸ್ಪತ್ರೆ ಅಂತಾನೇ ಪ್ರಸಿದ್ದಿಯಾಯ್ತು. ದೂರದ ಊರುಗಳಿಂದ ಮಹಿಳೆಯರು, ಭಾಸ್ಕರ್ ಡಾಕ್ಟರ್ ಅವರಿಂದ ಹೆರಿಗೆ ಮಾಡಿಸಿಕೊಳ್ಳೋಕೆ ಬರುತ್ತಿದ್ರು. ಅಷ್ಟೇ ಯಾಕೇ.. ಮುಂಬೈನಿಂದಲೂ ಕೂಡ ಮಹಿಳೆಯರು ಹೆರಿಗೆಗಾಗಿ ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಬರುತ್ತಿದ್ರು…

ಇಷ್ಟೆಲ್ಲ ಮಾಡಿಯೂ ಡಾ.ಟಿ.ಎನ್.ಭಾಸ್ಕರ್ ಸಮಾಜ ಸೇವೆ ಮಾಡಿದ್ದಾರೆ. ಲಯನ್ಸ್ ಕ್ಲಬ್ ಸದಸ್ಯರಾಗಿ, ಹೊನ್ನಾವರ ಸರ್ಕಾರಿ ಆಸ್ಪತ್ರೆಗೆ ಮೆರುಗು ನೀಡಿದ್ರು. ಆಗ ಹೊನ್ನಾವರ ಆಸ್ಪತ್ರೆಯಲ್ಲಿ ಹೆರಿಗೆಗೆ ಒಂದು ಟೇಬಲ್ ಇರಲಿಲ್ಲ. ದೇಣಿಗೆಯಿಂದ ಟೇಬಲ್ ತರಿಸಿದ್ರು. ಆಮೇಲೆ ಹೆರಿಗೆ ಮಾಡಿಸೋದಕ್ಕೆ ಒಂದು ವಾರ್ಡ್ ಬೇಕಾಯ್ತು. ಅದನ್ನು ಮಾಡಿಸಿದ್ರು. ಲೇಬರ್ ವಾರ್ಡ್ ಬೇಕಾಯ್ತು ಅದನ್ನು ಕೂಡ ಮಾಡಿಸಿದ್ರು. ಹಾಗೇ ಬಾಳಂತಿಯರಿಗಾಗಿ 25-30 ಜನ ಮಲಗಿಕೊಳ್ಳುವ ಹೆರಿಗೆ ವಾರ್ಡ್ ಅನ್ನು ಲಯನ್ಸ್ ಕ್ಲಬ್ ವತಿಯಿಂದ ನಿರ್ಮಿಸಿದ್ರು.

ಭಾರತದ ಪ್ರಥಮ ಮಹಾ ದಂಡನಾಯಕ ಜನರಲ್ ಕಾರ್ಯಪ್ಪ ಅವರು ಅದನ್ನು ಉದ್ಘಾಟಿಸಿದ್ರು. ಹೀಗೆ ಒಬ್ಬ ವೈದ್ಯ.. ವೈದ್ಯಾದಿಕಾರಿಯಾಗಿ, ವಿವಿಧ ವಿಷಯಗಳಲ್ಲಿ ಪರಿಣಿತನಾಗಿ ಮಾತ್ರವಲ್ಲ. ಆಸ್ಪತ್ರೆಗೆ ಬರುವ ರೋಗಿಗಳಿಗೆ ಒಂದೆರಡು ಕಟ್ಟಡಗಳನ್ನು ಕಟ್ಟಿಸಿದ್ರು. ಮೊದಲು ಶರಾವತಿ ನದಿಯಿಂದ ಸರ್ಕಾರಿ ಆಸ್ಪತ್ರೆಗೆ ಬರುವವರು ಗುಡ್ಡ ಹತ್ತಿ ಬರಬೇಕಿತ್ತು. ಆದ್ರೆ ಭಾಸ್ಕರ್ ಅವರು ಲಯನ್ಸ್ ಕ್ಲಬ್ ವತಿಯಿಂದ ಸುಂದರವಾದ ಮೆಟ್ಟಿಲುಗಳನ್ನು ಕಟ್ಟಿಸಿದ್ರು. ಅದಿಲ್ಲ ಇದಿಲ್ಲ ಅನ್ನೋದ್ರ ನಡುವೆಯೇ ಇದು ಇದೆಯಲ್ಲ ಅನ್ನೋ ಹಾಗೇ ಮಾಡಿದ ಪರಿಶ್ರಮಿ ಡಾ.ಟಿ.ಎನ್.ಭಾಸ್ಕರ್. ದಣಿವರಿಯದೇ ದುಡಿದ ಡಾ.ಟಿ.ಎನ್.ಭಾಸ್ಕರ್ ನಿಜಕ್ಕೂ ವೈದ್ಯಲೋಕದ ಯುಗಪುರುಷ ಅಂದ್ರೆ ತಪ್ಪಲ್ಲ..

ಹಂಚಿನ ಮಾಡಿನ ಕ್ವಾಟರ್ಸ್ನಲ್ಲಿ ಉಳಿದುಕೊಂಡು, ಒಟಿಟಿಗಳಿಲ್ಲದೇ ಅನುಪಮ ಸೇವೆ ಸಲ್ಲಿಸಿದವರು ಡಾ.ಟಿ.ಎನ್. ಭಾಸ್ಕರ್. ಇದನ್ನು ನೋಡಿಯೋ ಅವರ ಪತ್ನಿ ಶೈಲಾ ಅವರು, ನಮ್ಮ ಯಜಮಾನರಿಗೆ ಮನೆಯ ಜವಾಬ್ದಾರಿ ಇಲ್ಲ ಎನ್ನುತ್ತಿದ್ರು. ಹಾಗಿದ್ರೂ ರೋಗಿಗಳ ಸೇವೆಗೆ ಭಾಸ್ಕರ್ ಅವರು ಇಡೀ ದಿನ ಮೀಸಲಾಗಿಡುವಂತೆ ಸಹಕರಿಸಿದ್ದಾರೆ. ಭಾಸ್ಕರ್ ಅವರ ಮಗ, ಮಗಳು, ಅಳಿಯ ಎಲ್ಲರೂ ವೈದ್ಯರಾಗಿದ್ದಾರೆ… ಮೊಮ್ಮಕ್ಕಳು ವೈದ್ಯರಾಗಿದ್ದಾರೆ. ಆದ್ರಿವತ್ತು ಡಾ.ಟಿ.ಎನ್.ಭಾಸ್ಕರ್ ಇಹಲೋಕ ತ್ಯಜಿಸಿದ್ದಾರೆ. ಆದ್ರೆ ಅವರು ಮಾಡಿದ ಸೇವೆ ಜನಮಾನಸದಲ್ಲಿ ಅಚ್ಚಳಿಯದೇ ಉಳಿಯಲಿದೆ…

ಜೀ.ಯು. ಭಟ್‌, ಹಿರಿಯ ಪತ್ರಕರ್ತರು