ವಿಧಾತ್ರಿ ಅಕಾಡೆಮಿಯಿಂದ ಪುಸ್ತಕ ಮೇಳ ಆಯೋಜನೆ


ಕುಮಟಾ: ವಿಧಾತ್ರಿ ಅಕಾಡೆಮಿಯ ಸಹಭಾಗಿತ್ವದ ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಬಿ ಕೆ ಭಂಡಾರಕರ್ಸ ಸರಸ್ವತಿ ಪದವಿಪೂರ್ವ ಕಾಲೇಜಿನಲ್ಲಿ ಸಪ್ನಾ ಬುಕ್ ಹೌಸ್ ಬೆಂಗಳೂರು ಅವರ ಸಹಕಾರದಲ್ಲಿ ಮೂರು ದಿನಗಳ ಪುಸ್ತಕ ಮೇಳವನ್ನು ಆಯೋಜಿಸಲಾಗಿದೆ.


ದಿನಾಂಕ 28 ಡಿಸೆಂಬರ್ 2023 ರ ಗುರುವಾರ ಮುಂಜಾನೆ ಪುಸ್ತಕ ಮೇಳವನ್ನು ಉದ್ಘಾಟನೆ ಮಾಡಲಾಗಿದ್ದು ಖ್ಯಾತ ವಿಮರ್ಶಕರೂ ಕರ್ನಾಟಕ ಪಠ್ಯಪುಸ್ತಕ ಪರಿಶೀಲನಾ ಸಮಿತಿಯ ಅಧ್ಯಕ್ಷರೂ ಆದ ನಿವೃತ್ತ ಪ್ರಾಚಾರ್ಯ ಡಾಕ್ಟರ್ ಎಂ ಜಿ ಹೆಗಡೆ ಅವರು ಕಾರ್ಯಕ್ರಮವನ್ನು ಉದ್ಘಾಟನೆಮಾಡಿದರು.
ವಿಧಾತ್ರಿ ಅಕಾಡೆಮಿಯ ವತಿಯಿಂದ ಸನ್ಮಾನ ಸ್ವೀಕರಿಸಿ ಮಾತನಾಡಿದ ಅವರು ಅತ್ಯಂತ ಕಡಿಮೆ ಅವಧಿಯಲ್ಲಿ ಈ ಶಿಕ್ಷಣ ಸಂಸ್ಥೆಯು ಉತ್ತಮ ಪ್ರಗತಿಯನ್ನು ಸಾಧಿಸಿದ್ದು ಇಲ್ಲಿ ಪಠ್ಯ ವಿಷಯದ ಜೊತೆ ಪಠ್ಯೇತರ ವಿಷಯಗಳನ್ನು ಸಮರ್ಥವಾಗಿ ಬೋಧಿಸಲಾಗುತ್ತದೆ.ಪ್ರಸ್ತುತ ಸಮಾಜ ಹಾಗೂ ಪಾಲಕರು ಪಠ್ಯೇತರ ವಿಷಯದ ಕಡೆಗೆ ಗಮನ ಕಡಿಮೆಮಾಡಿ ಕೇವಲ ಪರೀಕ್ಷೆಯಲ್ಲಿ ಅಂಕಗಳಿಕೆಯ ಕಡೆಗೇ ಗಮನ ಹರಿಸುತ್ತಿದ್ದಾರೆ ..

ಇಂಥ ಸನ್ನಿವೇಶದಲ್ಲಿ ಈ ರೀತಿಯ ಪುಸ್ತಕ ಮೇಳದ ಆಯೋಜನೆ ಅರ್ಥಪೂರ್ಣ ಆಗಿದೆ ಎಂದು ಶುಭಕೋರಿದರು.ಡಿಸೆಂಬರ್ 28 ರಿಂದ 30 ರ ವರೆಗೆ ಮುಂಜಾನೆ 10 ರಿಂದ ಸಂಜೆ 7 ಗಂಟೆಯ ತನಕ ಜರುಗಲಿರುವ ಪುಸ್ತಕ ಪ್ರದರ್ಶನ ಹಾಗೂ ಮಾರಾಟ ಮಳಿಗೆಯ ಪ್ರಯೋಜನವನ್ನು ಎಲ್ಲರೂ ಪಡೆಯಬೇಕು ಎಂದು ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ಕೇಳಿಕೊಂಡರು.

ಕೊಂಕಣ ಎಜ್ಯುಕೇಶನ್ ಟ್ರಸ್ಟ್ ನ ಅಧ್ಯಕ್ಷರಾದ ವಿಠಲ ಆರ್ ನಾಯಕ ಹಿರಿಯ ವಿಶ್ವಸ್ಥರಾದ ರಮೇಶ ಪ್ರಭು, ವಿಧಾತ್ರಿ ಅಕಾಡೆಮಿಯ ಸಹ ಸಂಸ್ಥಾಪಕರಾದ ಗುರುರಾಜ ಶೆಟ್ಟಿಯವರು ಕೊಂಕಣ ಎಜ್ಯಕೇನ್ ಟ್ರಸ್ಟ್ ನ ಸಲಹೆಗಾರರಾದ ಆರ್ ಎಚ್ ದೇಶಭಂಡಾರಿಯವರು ಕುಮಾರಿ ಅಹಲ್ಯಾ ಹೆಗಡೆ , ಪ್ರಾಚಾರ್ಯ ಕಿರಣ ಭಟ್ಟ, ಉಪ ಪ್ರಾಚಾರ್ಯೆ ಸುಜಾತಾ ಹೆಗಡೆ ಮೊದಲಾದವರು ಉಪಸ್ಥಿತರಿದ್ದರು.
ಉಪನ್ಯಾಸಕಿ ಫರ್ಜಾನಾ ಶೇಖ್ ಕಾರ್ಯಕ್ರಮ ನಿರ್ವಹಿಸಿದರು.