ಬೆಂಗಳೂರು: ಸಿಲಿಂಡರ್​ ಸ್ಫೋಟದಿಂದ ಗಾಯಗೊಂಡಿದ್ದ ಎರಡೂವರೆ ವರ್ಷದ ಮಗು ಹಾಗೂ ತಂದೆ ಸಾವು

ಬೆಂಗಳೂರು, ಡಿ.24: ಕಳೆದ ಡಿಸೆಂಬರ್ 19 ರಂದು ಬೇಗೂರು ಬಳಿಯ ಲಕ್ಷ್ಮಿ ಬಡಾವಣೆಯಲ್ಲಿ ಅಡುಗೆ ಗ್ಯಾಸ್ ಸಿಲಿಂಡರ್ ಸ್ಫೋಟಗೊಂಡು ಐವರಿಗೆ ಗಾಯವಾಗಿದ್ದ ಪ್ರಕರಣಕ್ಕೆ ಸಂಬಂಧಿಸಿ ಗಾಯಗೊಂಡಿದ್ದ ಮಗು, ತಂದೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ. ಎರಡೂವರೆ ವರ್ಷದ ಮಗು ರೋಹನ್ ಮತ್ತು ತಂದೆ ಸಂದೇಶ್ ​(30) ವಿಕ್ಟೋರಿಯಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಉಳಿದ ಮೂವರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರಿದಿದೆ.

ಸಿಲಿಂಡರ್​ ಸ್ಫೋಟದಿಂದ ಗಾಯಗೊಂಡಿದ್ದ ಮಗು-ತಂದೆಯನ್ನು ಮೊದಲು ಸೆಂಟ್ ಜೋಸೆಫ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಲಾಗುತ್ತಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ವಿಕ್ಟೋರಿಯಾ ಆಸ್ಪತ್ರೆಗೆ ದಾಖಲಿಸಲಾಯಿತು. ಆದರೆ ಚಿಕಿತ್ಸೆ ಫಲಿಸದೆ ಇಬ್ಬರೂ ಪ್ರಾಣಬಿಟ್ಟಿದ್ದಾರೆ. ಉಳಿದ ಮೂವರು ಗಾಯಾಳುಗಳಿಗೆ ಚಿಕಿತ್ಸೆ ಮುಂದುವರೆದಿದೆ.

ಘಟನೆ ಹಿನ್ನೆಲೆ

ಡಿ.19ರಂದು ಬೇಗೂರು ಠಾಣಾ ವ್ಯಾಪ್ತಿಯ ಗಾರ್ವೆಬಾವಿಪಾಳ್ಯದ ಲಕ್ಷ್ಮೀ ಲೇಔಟ್​​​ನಲ್ಲಿ ಸುಬ್ರಮಣಿ ಎಂಬುವರಿಗೆ ಸೇರಿದ ಕಟ್ಟಡದಲ್ಲಿ ಅಡುಗೆ ಅನಿಲ ಸೋರಿಕೆಯಿಂದ ಸಿಲಿಂಡರ್‌ ಸ್ಫೋಟಗೊಂಡು ಒಂದೇ ಕುಟುಂಬದ ಐವರು ಗಾಯಗೊಂಡಿದ್ದರು. ಘಟನೆಯಲ್ಲಿ ಉತ್ತರ ಪ್ರದೇಶ ಮೂಲದ ಸಂದೇಶ್‌(30), ಆತನ ನಾದಿನಿ ನಿಖೀಲಾ(26) ಮತ್ತು ಮೂವರು ಮಕ್ಕಳಾದ ರೋಷಿಣಿ, ರೋಹನ್‌ ಹಾಗೂ ರೋಷನ್‌ ಎಂಬುವರು ಗಾಯಗೊಂಡಿದ್ದರು. ಆದರೆ ಈಗ ಸಂದೇಶ್ ಹಾಗೂ ರೋಹನ್ ಸಾವನ್ನಪ್ಪಿದ್ದಾರೆ.

ಇನ್ನು 3 ವರ್ಷಗಳ ಹಿಂದೆ ಬೆಂಗಳೂರಿಗೆ ಬಂದಿದ್ದ ಸಂದೇಶ್‌, ಕುಟುಂಬ ಸಮೇತ ಬೇಗೂರಿನ ಲಕ್ಷ್ಮೀ ಲೇಔಟ್​​​ನಲ್ಲಿ ಬಾಡಿಗೆ ಮನೆಯಲ್ಲಿ ವಾಸವಾಗಿದ್ರು. ಸಂದೇಶ್ ಭದ್ರತಾ ಸಿಬ್ಬಂದಿಯಾಗಿದ್ದ. ಈತನ ಪತ್ನಿ ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದಳು. ಇತ್ತೀಚೆಗಷ್ಟೇ ಈತನ ನಾದಿನಿ ನಿಖೀಲಾ ಇವರ ಮನೆಗೆ ಬಂದು ಉಳಿದುಕೊಂಡಿದ್ದಳು.

ಕಾರ್ಯ ನಿಮಿತ್ತ ಸಂದೇಶ್‌ ಪತ್ನಿ ಬೇರೆಡೆ ಹೋಗಿದ್ದಳು. ರಾತ್ರಿ ಸಂದೇಶ್‌, ನಿಖೀಲಾ ಹಾಗೂ ಮಕ್ಕಳು ಊಟ ಮಾಡಿ, ಸಿಲಿಂಡರ್‌ ಆಫ್ ಮಾಡದೆ ಮಲಗಿದ್ದು ಮುಂಜಾನೆ 6 ಗಂಟೆ ಸುಮಾರಿಗೆ ಎಚ್ಚರಗೊಂಡ ಸಂದೇಶ, ವಿದ್ಯುತ್‌ ಸ್ವಿಚ್‌ ಒತ್ತುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತ್ತು. ಕಿಟಕಿ, ಬಾಗಿಲು ಹಾಕಿದ್ದರಿಂದ ಸೋರಿಕೆಯಾದ ಅಡುಗೆ ಅನಿಲ ಹೊರಗಡೆ ಹೋಗಲು ಸಾಧ್ಯವಿಲ್ಲದೆ, ಬೆಂಕಿಯ ಕಿಡಿ ಇಡೀ ಮನೆ ಸುಟ್ಟಿದೆ.