ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಕ್ಲೀನಿಂಗ್; ಮುಖ್ಯ ಶಿಕ್ಷಕಿ ಅರೆಸ್ಟ್

ಬೆಂಗಳೂರು, ಡಿ.23: ಪೀಣ್ಯ ಬಳಿಯಿರುವ ಅಂದ್ರಹಳ್ಳಿ ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದ ಶೌಚಾಲಯ ಸ್ವಚ್ಛಗೊಳಿಸಿದ ಪ್ರಕರಣಕ್ಕೆ ಸಂಬಂಧಿಸಿ ಅಂದ್ರಹಳ್ಳಿ ಶಾಲೆಯ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ಅವರನ್ನು ಬ್ಯಾಡರಹಳ್ಳಿ ಪೊಲೀಸರು ಬಂಧಿಸಿದ್ದಾರೆ. ಬಿಇಒ ಆಂಜಿನಪ್ಪ ನೀಡಿದ ದೂರಿನನ್ವಯ ಬ್ಯಾಡರಹಳ್ಳಿ ಪೊಲೀಸ್​​ ಠಾಣೆಯಲ್ಲಿ ಎಫ್​ಐಆರ್ ದಾಖಲಾಗಿದ್ದು ಹೆಚ್​ಎಂ ಲಕ್ಷ್ಮೀದೇವಮ್ಮ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಇಂದು ನ್ಯಾಯಾಧೀಶರ​ ಮುಂದೆ ಹಾಜರುಪಡಿಸಲು ಪೊಲೀಸರು ಸಿದ್ಧತೆ ಮಾಡಿಕೊಂಡಿದ್ದಾರೆ.

ಮಕ್ಕಳ‌ ಕೈಯಲ್ಲಿ ಶೌಚಾಲಯ ತೊಳೆಸಿದ್ದ ಸರ್ಕಾರಿ‌ ಶಾಲೆ ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮ ವಿರುದ್ಧ ವ್ಯಾಪಕ ಆಕ್ರೋಶ ವ್ಯಕ್ತವಾಗಿತ್ತು. ವಿಪಕ್ಷ ನಾಯಕ ಆರ್ ಅಶೋಕ್ ಮತ್ತು ಸ್ಥಳೀಯ ಶಾಸಕ ಎಸ್ ಟಿ ಸೋಮಶೇಖರ್ ಸ್ಥಳಕ್ಕೆ ಭೇಟಿ ನೀಡಿ ಮಾಹಿತಿ ಕಲೆ ಹಾಕಿದ್ದರು. ಬಿಇಓ ಆಂಜಿನಪ್ಪ ನೀಡಿದ ದೂರಿನನ್ವಯ ಎಫ್​ಐಆರ್ ದಾಖಲಾಗಿದ್ದು ಮುಖ್ಯ ಶಿಕ್ಷಕಿ ಲಕ್ಷ್ಮೀದೇವಮ್ಮರನ್ನ ಅರೆಸ್ಟ್ ಮಾಡಲಾಗಿದೆ. ರಾತ್ರಿ ಅರೆಸ್ಟ್ ಮಾಡಿದ ಹಿನ್ನಲೆ ಲಕ್ಷ್ಮೀದೇವಮ್ಮನ ಮಹಿಳಾ ಸಾಂತ್ವನ ಕೇಂದ್ರದಲ್ಲಿ ಇರಿಸಿದ್ದು ಇಂದು ನ್ಯಾಯಾಧೀಶರ ಮುಂದೆ ಹಾಜರು ಪಡಿಸಲಾಗುತ್ತೆ.

ಘಟನೆ ಹಿನ್ನೆಲೆ

ಯಶವಂತಪುರ ವಿಧಾನಸಭಾ ಕ್ಷೇತ್ರದ ಅಂದ್ರಹಳ್ಳಿಯ ನಮ್ಮೂರು ಸರ್ಕಾರಿ ಶಾಲೆಯಲ್ಲಿ ಮಕ್ಕಳಿಂದಲೇ ಟಾಯ್ಲೆಟ್ ಕ್ಲೀನ್ ಮಾಡಿಸಲಾಗಿದೆ. ಒಟ್ಟು 600 ಜನ ವಿದ್ಯಾರ್ಥಿಗಳು ಈ ಶಾಲೆಯಲ್ಲಿ ವಿದ್ಯಾಭ್ಯಾಸ ಮಾಡ್ತಾಯಿದ್ದರು. ಮಕ್ಕಳೇ ಇಲ್ಲಿ ಶೌಚಾಲಯ ಸ್ವಚ್ಛ ಮಾಡ್ತಾರೆ.‌ ಕ್ಲೀನ್ ಮಾಡ್ದೆ ಹೋದ್ರೆ ಇಲ್ಲಿನ ಹೆಚ್ ಎಂ ಲಕ್ಷ್ಮಿದೇವಮ್ಮ ಬಾಯಿಗೆ ಬಂದ್ಹಾಗೇ ಬೈಯುತ್ತಾರೆ ಎಂಬ ಆರೋಪ ಕೇಳಿ ಬಂದಿತ್ತು. ಮಕ್ಕಳು ಟಾಯ್ಲೆಟ್ ಕ್ಲೀನ್ ಮಾಡ್ತಿರೋ ವಿಡಿಯೋ ವೈರಲ್ ಆಗ್ತಿದ್ದಂಗೆ ಮಕ್ಕಳು ಪೋಷಕರು ಶಾಲೆ ಎದುರು ಪ್ರತಿಭಟನೆ ನಡೆಸಿದ್ರು. ಶಾಲೆಯ ಹೆಚ್ ಎಂ ನ ಸಸ್ಪೆಂಡ್ ಮಾಡುವಂತೆ ಗಲಾಟೆ ಮಾಡಿದ್ರು. ಈ ವಿಚಾರ ಸ್ಥಳೀಯ ಕ್ಷೇತ್ರ ಶಿಕ್ಷಣಾಧಿಕಾರಿಗಳಿಗೆ ಗೊತ್ತಾಗ್ತಿದ್ದಂಗೆ ಸ್ಥಳಕ್ಕೆ ಬಂದು ವರದಿ ಪಡೆದ್ರು. ಟೀಚರ್ ತಪ್ಪು ಮಾಡಿರೋದು ಸಾಬೀತಾದ ಕಾರಣ ಕ್ಷೇತ್ರ ಶಿಕ್ಷಣಾಧಿಕಾರಿ ಆಂಜನೇಯಪ್ಪ ಜಂಟಿ ನಿರ್ದೇಶಕರಿಗೆ ಮುಖ್ಯ ಶಿಕ್ಷಕಿ ವಿರುದ್ಧ ವರದಿ ನೀಡಿದ್ರು. ಈ ವರದಿ ಆಧಾರದ ಮೇಲೆ ಹೆಚ್ ಎಂ ಲಕ್ಷ್ಮಿದೇವಮ್ಮ ಸಸ್ಪೆಂಡ್ ಆಗಿದ್ದರು. ಸದ್ಯ ಈಗ ಅವರನ್ನು ಬಂಧಿಸಲಾಗಿದೆ.