ತಮ್ಮ ಗ್ರಾಮಕ್ಕೆ ಬಸ್ ಬಿಡುವಂತೆ ಒತ್ತಾಯಿಸಿ ಡಿಪೋ ವ್ಯವಸ್ಥಾಪಕರಿಗೆ ಮನವಿ

ಮುಂಡಗೋಡ: ತಾಲೂಕಿನ ಅರಶಿಣಗೇರಿ ಗ್ರಾಮದ ವಿದ್ಯಾರ್ಥಿಗಳು ತಮ್ಮ ಗ್ರಾಮದಿಂದ ಶಾಲಾ ಕಾಲೇಜಿಗೆ ತೆರಳಲು ಬಸ್ ಬಿಡುವಂತೆ ಒತ್ತಾಯಿಸಿ ಕಲಘಟಗಿ ತಾಲೂಕಿನ ಡಿಪೋ ವ್ಯವಸ್ಥಾಪಕರಿಗೆ ಮನವಿ ಸಲ್ಲಿಸಿದರು.

ಮುಂಡಗೋಡ ತಾಲೂಕಿನ ಬಸ್ ವ್ಯವಸ್ಥಾಪಕರಿಗೆ ಹಲವು ಬಾರಿ ಬಸ್ ಬಿಡುವಂತೆ ಒತ್ತಾಯಿಸಿ ಮನವಿ ನೀಡಿದರು ಯಾವುದೇ ಪ್ರಯೋಜನವಾಗದ ಕಾರನ ಕಲಘಟಗಿ ಬಸ್ ಡಿಪೋ ವ್ಯವಸ್ಥಾಪಕರಿಗೆ ಮನವಿ ಮಾಡಲಾಗಿದೆ ಎಂದು ವಿದ್ಯಾರ್ಥಿಗಳು ಹೇಳಿದರು.

ಅರಶಿಣಗೇರಿ ಗ್ರಾಮ ಒಂದು ದೊಡ್ಡ ಗ್ರಾಮವಾಗಿದ್ದು, ಮುಂಡಗೋಡನಿಂದ ಸುಮಾರು ಎಂಟು ಕಿಲೋಮೀಟರ್ ದೂರದಲ್ಲಿ ಇದೆ. ಸುಮಾರು 4 ಕಿ.ಮೀ ಕಾಡಿನಲ್ಲಿ ದಾರಿಯಲ್ಲಿ ನಡೆಯಬೇಕು. ಕಾಡಿನಿಂದ ಬರುವಾಗ ಕಾಡು ಪ್ರಾಣಿಗಳಿಂದ ತೊಂದರೆ ಉಂಟಾಗುತ್ತಿದೆ. ಊರಿನಿಂದ ಅನೇಕ ವಿದ್ಯಾರ್ಥಿಗಳು ಮುಂಡಗೋಡಿನ ಶಾಲಾ ಕಾಲೇಜಿಗೆ ಹೋಗಲು ಸರಿಯಾದ ಸಮಯಕ್ಕೆ ಬಸ್ ಇಲ್ಲ. ಸಣ್ಣ ವಯಸ್ಸಿನ ವಿದ್ಯಾರ್ಥಿಗಳು ಖಾಸಗಿ ವಾಹನದಲ್ಲಿ ಬರುವುದಕ್ಕೆ ತೊಂದರೆಯಾಗುತ್ತದೆ. ಹೀಗಾಗಿ ನಮಗೆ ಸೂಕ್ತ ಬಸ್ ವ್ಯವಸ್ಥೆಯನ್ನು ಮಾಡಬೇಕೆಂದು ಕೆ.ಎಸ್.ಆರ್.ಟಿ.ಸಿ ಬಸ್ ಮುಖ್ಯಸ್ಥರು ಹಾಗೂ ಸಾರಿಗೆ ಸಚಿವರಲ್ಲಿ ವಿದ್ಯಾರ್ಥಿಗಳು ಮನವಿ ಮಾಡಿದ್ದಾರೆ.