ಸುನೀಲ್‌ ನಾಯ್ಕ ದಾಖಲೆಗಳಿದ್ದರೆ ಬಿಡುಗಡೆ ಮಾಡಲಿ-ಬ್ಲಾಕ್‌ ಕಾಂಗ್ರೆಸ್‌ ಅಧ್ಯಕ್ಷರಿಂದ ತಿರುಗೇಟು

ಭಟ್ಕಳ: ಮಾಜಿ ಶಾಸಕ ಸುನೀಲ‌ ನಾಯ್ಕ ಅವರು ಉಸ್ತುವಾರಿ ಸಚಿವ ಮಂಕಾಳ ವೈದ್ಯರ ನೂತನ ಸಚಿವರ ಕಚೇರಿಯ ನವೀಕರಣಕ್ಕೆ ಕೋಟಿಗಟ್ಟಲೇ ಹಣವನ್ನು ವ್ಯಯಿಸಿದ್ದಾರೆಂಬ ಹೇಳಿಕೆ ನೀಡಿದ್ದು ಅವರಲ್ಲಿ ಈ ಸಂಬಂಧ ದಾಖಲೆಗಳಿದ್ದರೆ ಬಿಡುಗಡೆ ಮಾಡಿ ಮಾತನಾಡುವುದು ಸೂಕ್ತ ಜನರಲ್ಲಿ ತಪ್ಪು ಕಲ್ಪನೆ ಮೂಡಿಸಿ ಸುಳ್ಳು ಹೇಳಿ ಜನರನ್ನು ದಾರಿ ತಪ್ಪಿಸಬೇಡಿ ಎಂದು ಭಟ್ಕಳ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವೆಂಕಟೇಶ ನಾಯ್ಕ ತಿರುಗೇಟು ನೀಡಿದರು.

ಅವರು  ಬ್ಲಾಕ ಕಾಂಗ್ರೆಸ್ ಕಾರ್ಯಾಲಯದಲ್ಲಿ ಕರೆಯಲಾದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡುತ್ತಿದ್ದರು.

‘ಈ ಬಾರಿ ಚುನಾವಣೆಯಲ್ಲಿ ಕ್ಷೇತ್ರದ ಜನರು ಆರ್ಶೀವಾದ ಮಾಡಿ‌ ಮತ ಹಾಕಿ‌ ಗೆಲ್ಲಿಸಿದಕ್ಕೆ ಅವರ ಋಣ ತೀರಿಸುವ ಕೆಲಸವನ್ನು ಉಸ್ತುವಾರಿ ಸಚಿವ ಮಂಕಾಳ ವೈದ್ಯ ಅವರು ಮಾಡುತ್ತಿದ್ದಾರೆ. ಅವರು ಓರ್ವ ಶಾಸಕರ ಜೊತೆಗೆ ಸರಕಾರದ ಮಂತ್ರಿ ಮಂಡಲದ ಸಚಿವರಾಗಿದ್ದು ಸರಕಾರದ ಕಟ್ಟಡವನ್ನು ನವೀಕರಣ ಮಾಡಿದ ಉದ್ದೇಶ ಕ್ಷೇತ್ರದ ಹಾಗೂ ಜಿಲ್ಲೆ ರಾಜ್ಯದ ಅಧಿಕಾರಿಗಳ ಸಭೆ ನಡೆಸಲು ಹಾಗೂ ಮುಖ್ಯವಾಗಿ ಕ್ಷೇತ್ರದ ಜನರ ಅಹವಾಲು ಸ್ವೀಕಾರಕ್ಕೆ ಸುಸಜ್ಜಿತ ಕಚೇರಿಯನ್ನು ನಿರ್ಮಿಸಿದ್ದಾರೆ. ಇದರಲ್ಲಿ ಯಾವುದೇ ತಪ್ಪೆನಿಲ್ಲ ಎಂದ ಅವರು ಇದೇ ಮಾಜಿ‌ ಶಾಸಕ ಸುನೀಲ‌ ನಾಯ್ಕ ಅವರ ವೇಳೆಯಲ್ಲಿ ಅವರ ಕಛೇರಿಯನ್ನು ಅವರ ಖಾಸಗಿ ವೈನ್ ಶಾಪ್ ಇರುವ ಹಿಂಬದಿಯ ಕಟ್ಟಡದಲ್ಲಿ ಇತ್ತು. ಒಂದು ದಿನವು ತಾಲ್ಲೂಕು ಪಂಚಾಯತ ಕಟ್ಟಡದಲ್ಲಿ ಶಾಸಕರ ಕಛೇರಿಗೆ ಅಥವಾ ತಾಲೂಕು ಆಡಳಿತ ಸೌಧದ ಅವರ ಕಚೇರಿಯಲ್ಲಿ ಇದ್ದು ಕ್ಷೇತ್ರದ ಜನರ ಎಷ್ಟು ಕೆಲಸ ಮಾಡಿದ್ದಾರೆಂಬುದು ನಮಗು ಹಾಗೂ ಕ್ಷೇತ್ರದ ಜನರಿಗೆ ತಿಳಿದಿದೆ. ಈ ಕಾರಣಕ್ಕೆ ಅವರು ಸೋತಿದ್ದಾರೆ ಎಂದು ತಿರುಗೇಟು ನೀಡಿದರು.

ಇನ್ನು ನಿಮ್ಮ ಅವಧಿಯಲ್ಲಿ ನಿಮ್ಮ ಆಪ್ತ ಸಹಾಯಕರಾಗಿ ನಿಮ್ಮ ಭಾವಮೈದುನನನ್ನೇ ನೇಮಿಸಿಕೊಂಡಿದ್ದು ಅವರು ಒಂದು ದಿನವು ಕಚೇರಿಯಲ್ಲಿ ಇರುವುದು ಕಂಡಿಲ್ಲ. ಬಾಯಿ ಇದೆ ಎಂದ ಮಾತ್ರಕ್ಕೆ ಮಾಧ್ಯಮ ಪತ್ರಿಕೆಯಲ್ಲಿ ನಮ್ಮ‌ ಹೇಳಿಕೆ ಬರಲಿದೆ ಎಂದು ಮಾತನಾಡುವುದು ಸೂಕ್ತವಲ್ಲ. ಕ್ಷೇತ್ರದ ಜನರು ಬುದ್ದಿವಂತರಾಗಿದ್ದಾರೆ ಎಂದ ಅವರು ಜನರ ಅನೂಕೂಲಕ್ಕಾಗಿ ಸರಕಾರಿ ಕಟ್ಟಡ ನವೀಕರಣ ಆಗಿದೆಯೋ ಹೊರತು ಅವರ ವೈಯಕ್ತಿಕ ಕೆಲಸಕ್ಕಾಗಿ ನವೀಕರಣ ಮಾಡಿಲ್ಲ ನಿಮ್ಮ ಯಾವುದೇ ಕೆಲಸಗಳಿದ್ದರೆ ತಾವುಗಳು ಸಹ ಕಚೇರಿಗೆ ಬರಬಹುದು ಎಂದು ಹೇಳಿದರು.

ಮಾಜಿ ಶಾಸಕರು ನಿರ್ದಿಷ್ಟವಾಗಿ 2 ಕೋಟಿ ಹೊನ್ನಾವರ 3 ಕೋಟಿ ಭಟ್ಕಳ ಕಚೇರಿಗೆ ಖರ್ಚಿ ಮಾಡಿ ನವೀಕರಣ ಮಾಡಿದ್ದಾರೆ ಎಂಬ ಹೇಳಿಕೆಯ ಹಿಂದೆ ಅವರಲ್ಲಿ ದಾಖಲೆಯಿದ್ದಿರಬಹುದು ನಮ್ಮಲ್ಲಿ ಈ ಬಗ್ಗೆ ದಾಖಲೆಗಳಿಲ್ಲ. ಕಚೇರಿಯಲ್ಲಿ ಕ್ಷೇತ್ರದ ಜನರಿಗಾಗಿ ಸಿಬ್ಬಂದಿಗಳನ್ನು ನೇಮಿಸಿ ಅವರ ಆಶೋತ್ತರಗಳನ್ನು ಆಲಿಸಿ ಪರಿಹರಿಸಿಕೊಡುವ ಕೆಲಸ ಸಚಿವರು ಮಾಡುತ್ತಿದ್ದಾರೆ ಎಂದ ಅವರು ನಿಮ್ಮ ಅವಧಿಯಲ್ಲಿ ಕ್ಷೇತ್ರದಲ್ಲಿ ನಿಮ್ಮಿಂದ ಆದ ಅಭಿವೃದ್ಧಿ ಕೆಲಸದ ಪಟ್ಟಿ ನೀಡಿ ಎಂದು ಪತ್ರಿಕಾಗೋಷ್ಠಿಯಲ್ಲಿ ಮಾಡಿದ್ದು ಅದಕ್ಕೆ ನಿಮ್ಮ ಉತ್ತರ ಇನ್ನು ತನಕ ಬಂದಿಲ್ಲ ಎಂದು ಸುನೀಲ ನಾಯ್ಕ ಅವರಿಗೆ ಪ್ರಶ್ನಿಸಿದರು.

ಇನ್ನು ರಾಜ್ಯದ ಮುಖ್ಯಮಂತ್ರಿ ಪರಿಹಾರ ನಿಧಿಯಿಂದ ಈಗಾಗಲೇ 114 ಅರ್ಜಿಗಳಲ್ಲಿ 84 ಅರ್ಜಿಗಳಿಗೆ 28 ಲಕ್ಷ ರೂ. ಮೊತ್ತ ಪರಿಹಾರವನ್ನು ಸಚಿವ ಮಂಕಾಳ ವೈದ್ಯ ಅವರು ಬಿಡುಗಡೆ ಮಾಡಿ ನೀಡಿದ್ದಾರೆ. ಈ ಬಗ್ಗೆ ದಾಖಲೆ ಸಹ ನಮ್ಮ‌ ಬಳಿ ಇದೆ. ಇನ್ನು ಗ್ಯಾರೆಂಟಿ ಯೋಜನೆಗಳಲ್ಲಿ 4 ಯೋಜನೆಯನ್ನು ರಾಜ್ಯದ ಜನರಿಗೆ ಉಪಯುಕ್ತವಾಗುತ್ತಿದ್ದು ಡಿಸೆಂಬರ್ ಜನವರಿಯಲ್ಲಿ ಯುವನಿಧಿ ಯೋಜನೆ ಜಾರಿಗೆ ಬರಲಿದೆ ಮತ್ತು ಸರಕಾರವು ಜನರಿಗೆ ಸ್ಪಂದಿಸಿ ಕೆಲಸ ಮಾಡುತ್ತದೆ ಎಂದ ಅವರು ಈ ಹಿಂದಿನ ಬಿಜೆಪಿ ಸರಕಾರ ಮತ್ತು ಭಟ್ಕಳ ಬಿಜೆಪಿ ಶಾಸಕ ಸುನೀಲ ನಾಯ್ಕ ಅವರನ್ನು ಸಂಪೂರ್ಣವಾಗಿ ತಿರಸ್ಕರಿಸಿ ಕಾಂಗ್ರೆಸ್ ಪಕ್ಷವನ್ನು ಭಟ್ಕಳದಲ್ಲಿ ಮಂಕಾಳ ವೈದ್ಯರನ್ನು ಗೆಲ್ಲಿಸಿದ್ದು ಉತ್ತಮ ಕೆಲಸ ಮಾಡುತ್ತಿರುವವರಿಗೆ ಸಮಸ್ಯೆಯೊಡ್ಡದೇ ಅವರಿಗೆ ಸಹಕರಿಸಿ ಇಲ್ಲವಾದರೆ ಸುಮ್ಮನಿರಬೇಕು ಎಂದು ತಿಗುಗೇಟು ನೀಡಿದರು.

ಎ.ಪಿ.ಎಮ್.ಸಿ. ಮಾಜಿ ಅಧ್ಯಕ್ಷ ಗೋಪಾಲ ನಾಯ್ಕ ಮಾತನಾಡಿ ‘ ಕ್ಷೇತ್ರದಲ್ಲಿ ಇನ್ನು ತನಕ ಎಲ್ಲಿಯೂ ಗುದ್ದಲಿ ಪೂಜೆ ಆಗಿಲ್ಲ ಎಂಬ ಹೇಳಿಕೆ ಮಾಜಿ ಶಾಸಕ ಸುನೀಲ ನಾಯ್ಕ ನೀಡಿದ್ದರು. ನಮ್ಮ ಸಚಿವರು ಗುದ್ದಲಿಯನ್ನು ಕಾರಿನಲ್ಲಿಟ್ಟುಕೊಂಡು ಕೆಲಸ ಮಾಡುತ್ತಿಲ್ಲ. ಮಾಜಿ ಶಾಸಕರು ನಮ್ಮ ಮಂಕಾಳ ವೈದ್ಯ ಅವರು ಅವರ ಮೊದಲ ಅವಧಿಯಲ್ಲಿ 2 ಸಾವಿರ ಕೋಟಿ ಅನುದಾನ ತಂದ ವೇಳೆ ಮಾಡಲಾದ ಗುದ್ದಲಿ ಪೂಜೆಗೆ ಪುನಃ ಗುದ್ದಲಿ ಪೂಜೆಯನ್ನು ಅವರು ಅವರ ಕಾರಿನಲ್ಲಿ ಗುದ್ದಲಿ ಇಟ್ಟುಕೊಂಡು ಮಾಡಿಲ್ಲ. ಕಮಿಶನ ಸಿಕ್ಕಿದ್ದಲ್ಲಿ ಸುನೀಲ ನಾಯ್ಕ ಅವರ ಗುದ್ದಲಿ ಪೂಜೆ ಆಗಿದೆ ಹೊರತು ಬೇರೆ ಏನು ಆಗಿಲ್ಲ ಎಂದು ಖಾರವಾಗಿ ತಿರುಗೇಟು ನೀಡಿದರು.

ಈ‌ ಸಂದರ್ಭದಲ್ಲಿ ಮಾಜಿ ಜಿಲ್ಲಾ ಪಂಚಾಯತ ಅಧ್ಯಕ್ಷ ಜಯಶ್ರೀ ಮೋಗೇರ, ಮಹಿಳಾ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷೆ ನಯನಾ ನಾಯ್ಕ, ಈಶ್ವರ ನಾಯ್ಕ, ದೇವಿದಾಸ ಆಚಾರ್ಯ, ಸುರೇಶ ನಾಯ್ಕ, ನಾರಾಯಣ ನಾಯ್ಕ, ವಿಷ್ಣು ದೇವಾಡಿಗ ಉಪಸ್ಥಿತರಿದ್ದರು.