ಇಸ್ರೇಲ್‌ನಲ್ಲಿ ನೆಲೆಸಿರುವ ಭಟ್ಕಳದ 40ಕ್ಕೂ ಅಧಿಕ ಜನರ ಪಟ್ಟಿ ಲಭ್ಯ.. ನಿಟ್ಟುಸಿರು ಬಿಟ್ಟ ಕುಟುಂಬಸ್ಥರು….

ಭಟ್ಕಳ: ಶುಕ್ರವಾರದಂದು ಹಮಾಸ್ ಎಂಬ ಭಯೋತ್ಪಾದಕ ಸಂಘಟನೆ ಇಸ್ರೇಲ್ ಮೇಲೆ ರಾಕೆಟ್ ಹಾಗೂ ಕ್ಷೀಪಣಿಗಳ ಮಳೆಗೈದಿದ್ದ ಹಿನ್ನೆಲೆ ಸಾಕಷ್ಟು ಮಂದಿ ಸಾವನ್ನಪ್ಪಿದ್ದು ಸದ್ಯಕ್ಕೆ ಭಾರತೀಯರ ರಕ್ಷಣೆಗೆ ಭಾರತೀಯ ರಾಯಭಾರಿ ಕಛೇರಿಯು ಮುಂದಾಗಿದ್ದು ಇಸ್ರೇಲ್‌ನಲ್ಲಿ ನೆಲೆಸಿದ್ದು ರಕ್ಷಣೆಯಾಗಿರುವ ಭಟ್ಕಳದ ೪೦ಕ್ಕೂ ಅಧಿಕ ಜನರ ಹೆಸರು ಗುರುತಿಸಿದ್ದು ಸದ್ಯ ಎಲ್ಲರು ಕುಟುಂಬಸ್ಥರ ಜೊತೆಗೆ ಸಂಪರ್ಕದಲ್ಲಿದ್ದು ನಿಟ್ಟುಸಿರು ಬಿಡುವಂತಾಗಿದೆ.

ಇಸ್ರೇಲ್ ಹಾಗೂ ಪ್ಯಾಲೆಸ್ತೀನನ ಉಗ್ರಗಾಮಿ ಗುಂಪು ಹಮಾಸ್ ನಡುವೆ ನಡೆಯುತ್ತಿರುವ ಯುದ್ದವು ಅತ್ಯಂತ ವಿನಾಶಕಾರಿ ತಿರುವು ಪಡೆದುಯುತ್ತಿದ್ದು, ಈವರೆಗೂ ಈ ಯುದ್ದದಲ್ಲಿ ಕನಿಷ್ಠ ೬೫೦ಕ್ಕೂ ಅಧಿಕ ಮಂದಿ ಸಾವಿಗೀಡಾಗಿದ್ದಾರೆ ಎಂಬ ಮಾಹಿತಿ ಸಿಕ್ಕಿದೆ.

ಭಟ್ಕಳದಲ್ಲಿ 40ಕ್ಕೂ ಅಧಿಕ ಜನರ ಸುರಕ್ಷತೆ

ಉದ್ಯೋಗದ ನಿಮಿತ್ತ ಇಸ್ರೇಲ್‌ನಲ್ಲಿ ನೆಲೆಸಿರುವ ಭಟ್ಕಳದ 40ಕ್ಕೂ ಅಧಿಕ ಜನರು ಸದ್ಯ ಭಾರತೀಯ ರಾಯಭಾರಿ ಕಚೇರಿಯಿಂದ ಸಂಪರ್ಕಕ್ಕೆ ಸಿಕ್ಕಿದ್ದು ಸದ್ಯ ಎಲ್ಲರು ಕುಟುಂಬದವರೊಂದಿಗೆ ನಿರಂತರ ಸಂಪರ್ಕದಲ್ಲಿದ್ದು ಮನೆ ಮಂದಿ ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿದೆ. ಆದರೆ ಯಾವ ಕ್ಷಣದಲ್ಲಿ ಇಸ್ರೇಲ್‌ನಲ್ಲಿನ ಯುದ್ದದ ಪರಿಸ್ಥಿತಿ ಏನಾಗಲಿದೆ ಎಂಬುದು ಅಲ್ಲಿ ನೆಲೆಸಿರುವ ಜನರಿಗೂ ಹಾಗೂ ಅವರ ಕುಟುಂಬಸ್ಥರಲ್ಲಿ ಭಯ ಮಾತ್ರ ಇದೆ.
ಭಟ್ಕಳದ ಮುಂಡಳ್ಳಿಯ ಭಾಗದ 12 ಮಂದಿ ಹಾಗೂ ಮುರುಡೇಶ್ವರ ಬಸ್ತಿ ಚರ್ಚ್ ಕ್ರಾಸ್ ಬಳಿ 29 ಮಂದಿ ಇಸ್ರೇಲ್‌ನಲ್ಲಿ‌ ನೆಲೆಸಿರುವುದು ಧೃಡಪಟ್ಟಿರುವ ಪಟ್ಟಿ ಲಭ್ಯವಾಗಿದೆ.

ಈ ಬಗ್ಗೆ ನಮ್ಮ ಪ್ರತಿನಿಧಿ ಮುರುಡೇಶ್ವರದ ಚರ್ಚ್ ಕ್ರಾಸ್ ಬಳಿಯ ನಿವಾಸಿ ಇಸ್ರೇಲ್‌ನಲ್ಲಿ ನೆಲೆಸಿರುವ ಸುನೀಲ ಎಪ್. ಗೋಮ್ಸ ಮತ್ತು ಡಾಲ್ಪಿ ಗೋಮ್ಸ ನಿವಾಸಕ್ಕೆ ತೆರಳಿದ್ದು ಈ ವೇಳೆ ಇವರ ತಾಯಿ ಹೇಲಿನ್ ಗೋಮ್ಸ ಹಾಗೂ ಸಹೋದರಿ ಅವರು ಈರ್ವರ ಜೊತೆಗೆ ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿ ಅವರ ಸುರಕ್ಷತೆಯ ಬಗ್ಗೆ ವಿಚಾರಿಸಿದರು.

ಘಟನೆಯ ನಡೆದ ದಿನದಂದು ನಾವು ಜೀವ ಭಯದಲ್ಲಿಯೇ ಬದುಕಿದ್ದೇವು. ಘಟನೆ ನಡೆದ ಜಾಗದ ಸಮೀಪದಲ್ಲಿಯೇ ನಾವು ಕೆಲಸಕ್ಕಾಗಿ ನೆಲೆಸಿದ್ದ ಪ್ರದೇಶವಿದ್ದು ಯಾವ ಸಂಧರ್ಭದಲ್ಲಿ ಪರಿಸ್ಥಿತಿ ಏನಾಗಲಿದೆ ಎಂಬ ಭಯ ನಮ್ಮಲ್ಲಿದೆ. ಆದರೆ ಭಾರತೀಯ ರಾಯಭಾರಿ ಕಛೇರಿಯಿಂದ ಭಾರತೀಯರನ್ನು ಸಂಪರ್ಕಿಸುವ ಕಾರ್ಯ ಆರಂಭವಾಗಿದೆ ಎಂಬ ಮಾಹಿತಿಯ ಮೇಲೆ ನಮ್ಮಿಬ್ಬರು ಸಹ ಕಛೇರಿಯ ಸಿಬ್ಬಂದಿಗಳು ಸಂಪರ್ಕಿಸಿ ನಮ್ಮ ಸುರಕ್ಷತೆಯ ಬಗ್ಗೆ ಮಾಹಿತಿ ಪಡೆದುಕೊಂಡರು. ಅನಾವಶ್ಯಕವಾಗಿ ಯಾರು ಸಹ ಓಡಾಟ ಮಾಡಬಾರದು ಎಂಬ ಕಠಿಣ ಆದೇಶವಿದ್ದು, ಅವಶ್ಯಕತೆಯಿದ್ದಲ್ಲಿ ಮಾತ್ರ ಓಡಾಡಲು ಅನುಮತಿ ನೀಡಿದ್ದಾರೆ. ಕೆಲವೊಂದು ಪ್ರದೇಶದಲ್ಲಿ ಅಂಗಡಿ ಮುಂಗಟ್ಟುಗಳು ತೆರೆದಿಡಲಾಗಿದ್ದು, ಆಹಾರ ಹಾಗೂ ಇನ್ನಿತರ ವಸ್ತುಗಳ ಖರೀದಿಗೆ ತೆರಳಬಹುದಾಗಿದೆ. ಸಮಸ್ಯೆಯಿದ್ದಲ್ಲಿ ರಾಯಭಾರಿ ಕಛೇರಿಗೆ ಮಾಹಿತಿ ತಿಳಿಸಿದ್ದಲ್ಲಿ ನಿಮ್ಮನ್ನು ಸಂಪರ್ಕಿಸಲಿದ್ದೇವೆ. ಸೈರನ್ ಮೂಲಕ ಜನರು ಸುರಕ್ಷಿತ ಪ್ರದೇಶದಲ್ಲಿ ಇರುವಂತೆ ಮುಂಜಾಗೃತೆಗಾಗಿ ವ್ಯವಸ್ಥೆ ಮಾಡಲಾಗಿದ್ದು, ಜನರು ಸರಕಾರದ ಆದೇಶ ಪಾಲನೆ ಮಾಡಬೇಕು ಎಂದರು. ಇಸ್ರೇಲ್‌ನಲ್ಲಿರುವ ನಮ್ಮ ರಕ್ಷಣೆಗೆ ಸುರಕ್ಷತೆಗಾಗಿ ಭಾರತೀಯ ರಾಯಭಾರಿ ಕಛೇರಿಯು ನಿರಂತರ ಸಂಪರ್ಕದಲ್ಲಿದ್ದು ಅವರಿಗೆ ನಾವೆಲ್ಲರು ಚಿರಋಣಿಯಾಗಿದ್ದೇವೆ. ಸದ್ಯ ಕನ್ನಡಿಗರೆಲ್ಲರು ಒಂದು ವಾಟ್ಸಾಪ್ ಗ್ರೂಪ್ ಮಾಡಿದ್ದು ನಾವೆಲ್ಲರು ನಿರಂತರ ಸಂಪರ್ಕದಲ್ಲಿದ್ದು ಸುರಕ್ಷಿತರಾಗಿದ್ದೇವೆ ಎಂದು ಇಸ್ರೇಲ್‌ನಲ್ಲಿ ನೆಲೆಸಿರುವ ಸುನೀಲ ಎಪ್. ಗೋಮ್ಸ ಮತ್ತು ಡಾಲ್ಪಿ ಗೋಮ್ಸ ಅವರು ನಮ್ಮ ಪ್ರತಿನಿಧಿಯ ಜೊತೆಗೆ ತಮ್ಮ ಅನುಭವ ತಿಳಿಸಿದರು.

ಇಸ್ರೇಲ್‌ನಲ್ಲಿ ನಡೆದ ರಾಕೆಟ್ ದಾಳಿಯ ಬಗ್ಗೆ ತಿಳಿದು ಒಂದು ಕ್ಷಣಕ್ಕೆ ನಮ್ಮ ಮಕ್ಕಳ ಪರಿಸ್ಥಿತಿಯ ಬಗ್ಗೆ ಭಯ ಉಂಟಾಯಿತು. ಆ ತಕ್ಷಣಕ್ಕೆ ಅವರನ್ನು ವಿಡಿಯೋ ಕಾಲ್ ಮೂಲಕ ಸಂಪರ್ಕಿಸಿದಾಗ ನಾವಿಬ್ಬರು ಸುರಕ್ಷಿತವಾಗಿದ್ದೇವೆ ಎಂದು ತಿಳಿಸಿದ ಬಳಿಕ ನಮಗೆ ಸಮಾಧಾನವಾಯಿತು. ಅಲ್ಲಿಂದ ಇಲ್ಲಿಯ ತನಕ ನಾವು ನಿರಂತರ ಅವರಿಗೆ ವಿಡಿಯೋ ಕಾಲ್ ಮಾಡಿ ಅವರ ಪರಿಸ್ಥಿತಿ ಬಗ್ಗೆ ಕೇಳುತ್ತಿದ್ದೇವೆ. ಸ್ಥಳಿಯ ಪೋಲೀಸರು ಸಹ ನಮ್ಮನ್ನು ಹಾಗೂ ಕುಟುಂಬದವರನ್ನು ನಿತ್ಯವೂ ಸಂಪರ್ಕಿಸುತ್ತಿದ್ದು, ಭಾರತೀಯ ರಾಯಭಾರಿ ಕಛೇರಿಗೆ ನಾವೆಲ್ಲರು ಧನ್ಯವಾದ ತಿಳಿಸಲಿದ್ದೇವೆ.

ಉದಯ ನಾಯ್ಕ ನುಡಿಸಿರಿ ನ್ಯೂಸ್‌, ಭಟ್ಕಳ