ದಾಂಡೇಲಿಯಲ್ಲಿ ಕರ್ತವ್ಯನಿರತ ಜಿಯೋ ಕಂಪೆನಿಯ ಶಾಖಾ ವ್ಯವಸ್ಥಾಪಕನಿಗೆ ಹೃದಯಾಘಾತ : ಸಾವು

ದಾಂಡೇಲಿ : ಜಿಯೋ ಕಂಪೆನಿಯ ದಾಂಡೇಲಿಯ ಶಾಖೆಯ ವ್ಯವಸ್ಥಾಪಕರೋರ್ವರಿಗೆ ಕರ್ತವ್ಯದಲ್ಲಿರುವಾಗಲೆ ಹೃದಯಾಘಾತವಾಗಿ ಸಾವನ್ನಪ್ಪಿದ ಹೃದಯವಿದ್ರಾವಕ ಘಟನೆ ಮಂಗಳವಾರ ರಾತ್ರಿ ನಡೆದಿದೆ.

ದಾಂಡೇಲಿ ನಗರದ ಜೆ.ಎನ್.ರಸ್ತೆಯಲ್ಲಿ ಜಿಯೋ ಕಂಪೆನಿಯ ಶಾಖಾ ಕಚೇರಿಯಲ್ಲಿ ವ್ಯವಸ್ಥಾಪಕರಾಗಿ ಸೇವೆ ಸಲ್ಲಿಸುತ್ತಿರುವ 27 ವರ್ಷ ವಯಸ್ಸಿನ ಅನೂಪ್ ಚಿದಾನಂದ ಬೋವಿ ಎಂಬಾವರೇ ಕರ್ತವ್ಯದಲ್ಲಿರುವಾಗಲೆ ಹೃದಯಾಘಾತಕ್ಕೊಳಗಾಗಿ ಸಾವನ್ನಪ್ಪಿದ ಯುವಕನಾಗಿದ್ದಾರೆ. ಇವರು ಕಳೆದ ನಾಲ್ಕು ವರ್ಷಗಳಿಂದ ನಗರದಲ್ಲಿರುವ ಜಿಯೋ ಕಂಪೆನಿಯ ಶಾಖಾ ವ್ಯವಸ್ಥಾಪಕರಾಗಿ ಸೇವೆಯನ್ನು ಸಲ್ಲಿಸುತ್ತಿದ್ದಾರೆ.

ಕರ್ತವ್ಯದಲ್ಲಿರುವಾಗಲೆ ಮಂಗಳವಾರ ರಾತ್ರಿ 7 ಗಂಟೆ ಸುಮಾರಿಗೆ ಅವರಿಗೆ ಎದೆ ನೋವು ಕಾಣಿಸಿಕೊಂಡಿದೆ. ಎದೆ ನೋವು ಕಾಣಿಸಿಕೊಂಡ ತಕ್ಷಣವೆ ಅವರನ್ನು ಸಹದ್ಯೋಗಿ ಹಾಗೂ ಇನ್ನಿತರರು ಸೇರಿ ನಗರದ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ಸಾರ್ವಜನಿಕ ಆಸ್ಪತ್ರೆಯಲ್ಲಿ ಚಿಕಿತ್ಸೆಗೆ ದಾಖಲಾಗುತ್ತಿದ್ದಂತೆಯೆ ಅನೂಪ್ ಚಿದಾನಂದ ಬೋವಿಯವರು ಹೃದಯಾಘಾತಕ್ಕೊಳಗಾಗಿ ಮೃತಪಟ್ಟಿದ್ದಾರೆ ಎಂದು ತಿಳಿದು ಬಂದಿದೆ.

ಇದೀಗ ಶವವನ್ನು ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಇರಿಸಲಾಗಿದೆ. ಮೃತ ಅನೂಪ್ ಚಿದಾನಂದ ಬೋವಿಯವರು ಧಾರವಾಡದ ನರೇಂದ್ರ ಎಂಬಲ್ಲಿರುವ ಕಾಯಕನಗರದ 8 ನೇ ಕ್ರಾಸ್ ಪ್ರದೇಶದ ನಿವಾಸಿಯಾಗಿದ್ದಾರೆ. ಸಾರ್ವಜನಿಕ ಆಸ್ಪತ್ರೆಗೆ ನಗರ ಠಾಣೆಯ ಪೊಲೀಸರು ಭೇಟಿ ನೀಡಿದ್ದಾರೆ.